ADVERTISEMENT

ಬಾಕಿ ಮೊತ್ತ ಪಾವತಿಗೆ ನಿವೃತ್ತ ಕಾರ್ಮಿಕರ ಆಗ್ರಹ

ಡಿ. 10ರಿಂದ ಕುಟುಂಬ ಸದಸ್ಯರೊಂದಿಗೆ ಉಪವಾಸ ಸತ್ಯಾಗ್ರಹದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 12:48 IST
Last Updated 30 ನವೆಂಬರ್ 2020, 12:48 IST
ಗ್ರಾಚ್ಯುಯಿಟಿ, ರಜೆ ನಗದೀಕರಣ ಹಣ ಸೇರಿದಂತೆ ಇತರ ಬಾಕಿ ಮೊತ್ತ ಪಾವತಿಗೆ ಆಗ್ರಹಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ನೌಕರರು ನಗರದ ಗೋಕುಲ ರಸ್ತೆಯಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು
ಗ್ರಾಚ್ಯುಯಿಟಿ, ರಜೆ ನಗದೀಕರಣ ಹಣ ಸೇರಿದಂತೆ ಇತರ ಬಾಕಿ ಮೊತ್ತ ಪಾವತಿಗೆ ಆಗ್ರಹಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ನೌಕರರು ನಗರದ ಗೋಕುಲ ರಸ್ತೆಯಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ಗ್ರಾಚ್ಯುಯಿಟಿ, ರಜೆ ನಗದೀಕರಣ ಹಣ ಸೇರಿದಂತೆ ಇತರ ಬಾಕಿ ಮೊತ್ತ ಪಾವತಿಗೆ ಆಗ್ರಹಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ನೌಕರರು ನಗರದ ಗೋಕುಲ ರಸ್ತೆಯಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಎರಡು ವರ್ಷದಿಂದ ಸಂಸ್ಥೆಯು ಹಣ ನೀಡದೆ ನಿವೃತ್ತರಿಗೆ ಕಿರುಕುಳ ನೀಡುತ್ತಿದೆ. ಕೆಎಸ್‌ಆರ್‌ಟಿಸಿ ಮತ್ತು ಎನ್‌ಇಆರ್‌ಟಿಸಿ ತನ್ನ ಕಾರ್ಮಿಕರಿಗೆ ಜೂನ್‌ ತಿಂಗಳಲ್ಲೇ ಬಾಕಿ ಹಣ ಪಾವತಿಸಿದೆ. ಆದರೆ, ವಾಯವ್ಯ ಸಂಸ್ಥೆ ಮಾತ್ರ ವಿಳಂಬ ಮಾಡುತ್ತಿದೆ. ಇದರಿಂದಾಗಿ ವಯಸ್ಸಾಗಿರುವ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಳಲು ತೋಡಿಕೊಂಡರು.

ಹಿಂದೆ ಇದೇ ವಿಷಯಕ್ಕೆ ಉಪವಾಸ ಸತ್ಯಾಗ್ರಹ ಮಾಡಿದ್ದಾಗ ಸಂಸ್ಥೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ನ. 30ರೊಳಗೆ ಹಣ ಪಾವತಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ವಿಶೇಷ ಅನುದಾನ ಬರಲಿ:

ಕಾರ್ಮಿಕರಿಂದ ಮನವಿ ಸ್ವೀಕರಿಸಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ, ‘ಸಂಸ್ಥೆಯು ಆರ್ಥಿಕ ಸಂಕಷ್ಟದಲ್ಲಿದೆ. ಕಾರ್ಮಿಕರ ಬಾಕಿ ಹಣ ಪಾವತಿಗಾಗಿ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಬಂದ ತಕ್ಷಣ ಪಾವತಿಸಲಾಗುವುದು’ ಎಂದು ಭರವಸೆ ನೀಡಿದರು.

ಇದರಿಂದ ಸಮಾಧಾನಗೊಳ್ಳದ ಕಾರ್ಮಿಕರು, ಡಿ. 10ರೊಳಗೆ ಹಣ ನೀಡಬೇಕು. ಇಲ್ಲದಿದ್ದರೆ, ಕುಟುಂಬದ ಸದಸ್ಯರೊಂದಿಗೆ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.