
ಹುಬ್ಬಳ್ಳಿ: ಹಣ ಹೂಡಿಕೆ ಮಾಡಿ ಆನ್ಲೈನ್ ಗೇಮ್ ಆಡುವುದರಿಂದ ಹೆಚ್ಚು ಲಾಭ ಗಳಿಸಬಹುದು ಎಂದು ಧಾರವಾಡದ ಕಾರ್ತಿಕ ಸಾಲಿ ಅವರಿಗೆ ಲಿಂಕ್ ಕಳುಹಿಸಿದ ಅಪರಿಚಿತ ವ್ಯಕ್ತಿ, ಅವರಿಂದ ₹98.20 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಕಾರ್ತಿಕ ಅವರಿಗೆ ವಂಚಕ ಫೇಸ್ಬುಕ್ ಮೆಸೆಂಜರ್ನಲ್ಲಿ ಲಿಂಕ್ ಕಳುಹಿಸಿ, ಆನ್ಲೈನ್ ಗೇಮ್ನಲ್ಲಿ ಹೆಚ್ಚು ಲಾಭ ಪಡೆಯುವ ಬಗ್ಗೆ ತಿಳಿಸಿದ್ದ. ಲಿಂಕ್ ತೆರೆದು ಆಟವಾಡಿದಾಗ ಅಂಕದ ಪ್ರಕಾರ ಅವರ ಖಾತೆಗೆ ಹಣ ವರ್ಗಾಯಿಸಿದ್ದ. ನಂತರ ಹೆಚ್ಚಿನ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ: ಫೇಸ್ಬುಕ್ನಲ್ಲಿ ಪರಿಚಯವಾದ ಮಹಿಳೆಯೊಬ್ಬರು ಧಾರವಾಡದ ವಿನಯ ಅವರಿಂದ ₹12.76 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯು ತಾನು ವಿದೇಶದಿಂದ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿದ್ದು, ₹95 ಲಕ್ಷದ ಟ್ರಾವಲಿಂಗ್ ಚೆಕ್ ಇದೆ. ಕಸ್ಟಮ್ಸ್ ಅಧಿಕಾರಿಗಳು ಅದಕ್ಕೆ ಅನುಮತಿ ನೀಡುತ್ತಿಲ್ಲ, ನಗದು ಹಣ ನೀಡಿದರೆ ಬಿಡುತ್ತಾರೆ ಎಂದು ನಂಬಿಸಿ ವಿನಯ ಅವರಿಂದ ಹಣ ಪಡೆದು ವಂಚಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾತ್ರಿ ಆ್ಯಪ್ ಬಳಕೆ, ಹಲ್ಲೆ: ಯಾತ್ರಿ ಆ್ಯಪ್ ಬಳಸಿ ಆಟೊದಲ್ಲಿ ಪ್ರಯಾಣಿಕರನ್ನು ಕರೆದೊಯ್ದಿದ್ದಕ್ಕೆ ಇಲ್ಲಿನ ಶ್ರೀನಗರದ ಶಾಕಿರ್ ಎಸ್., ಅವರ ಮೇಲೆ ಇಬ್ಬರು ಕಲ್ಲಿನಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಕುರಿತು ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಷಯ ಪಾರ್ಕ್ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದ್ದು, ಆನಂದ ನಗರದ ಲತೀಫ್ ಮತ್ತು ಸೋಹೆಲ್ ವಿರುದ್ಧ ಆಟೊ ಚಾಲಕ ಶಾಕಿರ್ ದೂರು ನೀಡಿದ್ದಾರೆ. ಇನಾರ್ಬಿಟ್ ಮಾಲ್ನಿಂದ ಅಕ್ಷಯ ಕಾಲೊನಿಗೆ ಯಾತ್ರಿ ಆ್ಯಪ್ ಬಳಸಿ ಪ್ರಯಾಣಿಕರನ್ನು ಕರೆದೊಯ್ಯುವಾಗ ಆರೋಪಿಗಳು ತಂಟೆ ತೆಗೆದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.