ಹುಬ್ಬಳ್ಳಿ: ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ತಾಂತ್ರಿಕ ಶಿಕ್ಷಣ ಕೊಡಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ಸುಕ್ಷೇತ್ರ ದಾರಾವತಿ ಹನುಮಂತ ದೇವರ ಜೀರ್ಣೋದ್ಧಾರಗೊಂಡ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ, ಬಸವಣ್ಣ ಮಂಟಪ ಹಾಗೂ ನಂದಿಮೂರ್ತಿ ಪ್ರತಿಷ್ಠಾಪನೆ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭೂಮಿ ಇದ್ದವರು, ಬಂಡವಾಳ ಇದ್ದವರು ದೇಶ ಆಳುವ ಕಾಲ ಮುಗಿದಿದೆ. ಈಗ ಜ್ಞಾನವಿದ್ದವರು ಮಾತ್ರ ಜಗತ್ತನ್ನು ಆಳಬಲ್ಲರು ಎಂಬುದನ್ನು ಮನಗಾಣಬೇಕು. ಉತ್ತಮ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು ಎಂದರು.
ಹನುಮಂತ ಹುಟ್ಟಿದ ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ ₹ 100 ಕೋಟಿ ಅನುದಾನ ಘೋಷಿಸಲಾಗಿದ್ದು, ಇದೇ ವರ್ಷ ಕೆಲಸ ಆರಂಭಿಸಲಾಗುವುದು. ರೋಪ್ ವೇ ನಿರ್ಮಾಣ ಹಾಗೂ ಗಾಳಿ ಗೋಪುರ ನಿರ್ಮಿಸಲಾಗುವುದು. ಆಂಜನೇಯ ವಾಯುಪುತ್ರ ಮಾತ್ರವಲ್ಲ ಕರ್ನಾಟಕದ ಪುತ್ರ ಎಂದು ಬಣ್ಣಿಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ದೇಶದಲ್ಲಿ ಪರಿವರ್ತನೆಯಾಗುತ್ತಿದ್ದು ಅಧ್ಯಾತ್ಮ ಜಾಗೃತಿ ಮೂಡುತ್ತಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಕಾಶಿಯಲ್ಲಿಯೂ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಹಿಂದೂಗಳ ಭಾವನೆಗಳಿಗೆ ಮೂರ್ತ ಸ್ವರೂಪ ಸಿಗುತ್ತಿದೆ ಎಂದು ಹೇಳಿದರು.
ಸಚಿವ ಹಾಲಪ್ಪ ಆಚಾರ್, ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ರಾಮಣ್ಣ ಬಡಿಗೇರ, ಕಾಂಗ್ರೆಸ್ ಧಾರವಾಡ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿ ಮಠ, ಮುಖಂಡರಾದ ಪ್ರಕಾಶ ಕ್ಯಾರಕಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.