ADVERTISEMENT

ಟೆಂಡರ್‌ ಮೂಲಕ 500 ಖಾಸಗಿ ಬಸ್‌ಗಳ ನಿಯೋಜನೆ: ವಿ.ಎಸ್‌. ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 13:35 IST
Last Updated 16 ಏಪ್ರಿಲ್ 2021, 13:35 IST

ಹುಬ್ಬಳ್ಳಿ: ವಿವಿಧ ಮಾರ್ಗಗಳಲ್ಲಿ ಸಂಚಾರಕ್ಕಾಗಿ ಟೆಂಡರ್‌ ಮೂಲಕ 500 ಖಾಸಗಿ ಬಸ್‌ಗಳನ್ನು ತೆಗೆದುಕೊಳ್ಳಲು ಯೋಜಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ ಹೇಳಿದರು.

ಶುಕ್ರವಾರ ಎನ್‌ಡಬ್ಲುಕೆಆರ್‌ಟಿಸಿ ಉಪಾಧ್ಯಕ್ಷರಾಗಿ ಡಾ.ಬಸವರಾಜ ಕೆಲಗಾರ ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಕಿ.ಮೀ. ಇಂತಿಷ್ಟು ಎಂದು ದರ ನಿಗದಿ ಪಡಿಸಿ ತೆಗೆದುಕೊಳ್ಳಲಾಗುವುದು. ಐದು ವರ್ಷದೊಳಗಿನ ಹೊಸ ಬಸ್‌ ಇರಬೇಕು ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ಹಾಕಲಾಗುವುದು ಎಂದರು.

ಸಾರಿಗೆ ನೌಕರರರು ವೇತನ ಹೆಚ್ಚಿಸುವಂತೆ ಕೇಳುತ್ತಿರುವುದು ತಪ್ಪಲ್ಲ. ಆದರೆ, ಕೇಳುವ ಸಮಯ ಸರಿಯಿಲ್ಲ. ಕೋವಿಡ್‌ನಿಂದಾಗಿ ರಾಜ್ಯಕ್ಕೆ ನಿರೀಕ್ಷಿದ ಆದಾಯ ಸಂಗ್ರಹವಾಗದಿರುವಾಗ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿರುವಾಗ ಕೇಳುವುದು ಸರಿಯಲ್ಲ ಎಂದು ಅವರು ಹೇಳಿದರು.

ADVERTISEMENT

ರಾಜ್ಯ ಸರ್ಕಾರವು ಸಾರಿಗೆ ನೌಕರರ ಸಂಘಟನೆಗಳೊಂದಿಗೆ ಮಾತುಕತೆ ನಡೆಸುತ್ತಿದೆ. ನಮ್ಮ ಸಂಸ್ಥೆಯಲ್ಲಿ ಮುಷ್ಕರಕ್ಕೆ ಮುಂಚೆ 4,300 ಬಸ್‌ಗಳು ಸಂಚರಿಸುತ್ತಿದ್ದವು. ಈಗ 800 ಬಸ್‌ಗಳು ಸಂಚರಿಸುತ್ತಿವೆ. ವಾರದಲ್ಲಿ ಮುಷ್ಕರ ಅಂತ್ಯಗೊಳ್ಳಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ತರಬೇತಿಯ ನೌಕರರನ್ನು ವಜಾ ಮಾಡಲಾಗಿದೆ. ತತಕ್ಷಣದಿಂದಲೇ ಕರ್ತವ್ಯಕ್ಕೆ ಮರಳುವುದಾದರೆ, ಮರಳಿ ಕೆಲಸಕ್ಕೆ ತೆಗೆದುಕೊಳ್ಳಲಾಗುವುದು ಎಂದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ನಿವೃತ್ತ ನೌಕರರಿಗೂ ಸೇರಿದಂತೆ ಒಟ್ಟು ₹1,110 ಕೋಟಿ ಪಾವತಿಸುವುದಿದೆ. ಅವರಿಗೆ ಸಾಲ ಮಾಡಿ ನೀಡಬೇಕಾಗಿದೆ. 1,000 ಹೊಸ ಬಸ್‌ಗಳನ್ನು ಕೊಡಿಸುವಂತೆ ಸರ್ಕಾರಕ್ಕೆ ಕೋರಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.