ಹುಬ್ಬಳ್ಳಿ:ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಅವರನ್ನು ಹತ್ಯೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಭಾವಸಾರ ಕ್ಷತ್ರಿಯ ಸಮಾಜ ಮಹಾಮಂಡಳ ಸದಸ್ಯರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಮಿನಿವಿಧಾನ ಸೌಧದ ಎದುರಿಗೆ ಜಾಮಾಯಿಸಿದ ಪ್ರತಿಭಟನಾಕಾರರು ಹತ್ಯೆಯಾದ ಹರ್ಷ ಅವರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್'ಗೆ ಮನವಿ ಸಲ್ಲಿಸಿದರು.
'ಪದೇ ಪದೇ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿದೆ. ಕೆಲವೆಡೆ ಹತ್ಯೆಯೂ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರಿಗೆ ಹಾಗೂ ಸಂಘಟನೆಗಳಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು' ಎಂದು ಒತ್ತಾಯಿಸಿದರು.
ಮಂಡಳದ ಅಧ್ಯಕ್ಷ ಪ್ರಕಾಶ ಇಜಂತಕರ ಮಾತನಾಡಿ, 'ಯುವಕನ ಹತ್ಯೆ ಖಂಡನೀಯ. ಪೊಲೀಸರು ಈಗಾಗಲೇ ಕೆಲವು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳನ್ನು ಸಹ ತಕ್ಷಣ ಬಂಧಿಸಬೇಕು. ಅಲ್ಲದೆ, ಈ ಪ್ರಕರಣದ ಹಿಂದೆ ಯಾರ ಕೈವಾಡವಿದೆ ಎಂದು ತನಿಖೆ ಕೈಗೊಂಡು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.
ಕೆ.ಜೆ. ಟಿಕಾರೆ, ಸುರೇಶ ಕಪಟಕರ, ಎಂ.ಕೆ. ರಾಸಿನಕರ, ಸತೀಶ ವೈಕುಂಠೆ, ಕುಶಾಲ ಬೇದರೆ, ಸಾಯಿನಾಥ ಅಂಬೇಕರ, ಅಶೋಕಕುಮಾರ ಮಾಳದಕರ, ಅರುಣ ಬೆಳಮಕರ, ಗಂಗಾಧರ ಟಿಕಾರೆ, ಶಂಕರ ಕುಂಠೆ, ವಿವೇಕ ಚುಟಕೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.