ಹುಬ್ಬಳ್ಳಿ: ನಗರದ ವಾಣಿವಿಲಾಸ ವೃತ್ತದ ಬಳಿಯ ಕಲ್ಲೂರು ಬಡಾವಣೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಿಸಿರುವ ವಸತಿ ಸಮುಚ್ಚಯದಲ್ಲಿ ಹೊಸೂರಿನ ವೀರ ಮಾರುತಿ ನಗರದ ಕೊಳೆಗೇರಿ ನಿವಾಸಿಗಳಿಗೆ ಮನೆಗಳನ್ನು ಬುಧವಾರ ಚೀಟಿ ಎತ್ತುವ ಮೂಲಕ ಹಂಚಿಕೆ ಮಾಡಲಾಯಿತು.
‘ನಾಲ್ಕು ಬ್ಲಾಕ್ಗಳಲ್ಲಿ ಒಟ್ಟು 80 ಮನೆಗಳನ್ನು ನಿರ್ಮಿಸಲಾಗಿದೆ. ವಾಣಿವಿಲಾಸ ವೃತ್ತದಿಂದ ಬಿಆರ್ಟಿಎಸ್ ಡಿಪೊವರೆಗೆ ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ಮನೆ ಕಳೆದುಕೊಳ್ಳುವವರಿಗೆ ಮೊದಲ ಹಂತದಲ್ಲಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
‘ಸ್ಮಾರ್ಟ್ ಸಿಟಿ ಯೋಜನೆ ಅಡಿ ₹18 ಕೋಟಿ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಒಂದೊಂದು ಬ್ಲಾಕ್ನಲ್ಲಿ 20 ಮನೆಗಳಿದ್ದು, ಪ್ರತಿ ಮನೆಗೆ ₹7.50 ಲಕ್ಷ ಖರ್ಚು ಮಾಡಲಾಗಿದೆ. ಲಿಫ್ಟ್, ಪಾರ್ಕಿಂಗ್, ಓವರ್ ಹೆಡ್ ಟ್ಯಾಂಕ್, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳಿವೆ. ವಿವಿಧ ಕಾರಣಗಳಿಂದಾಗಿ ಮೂರ್ನಾಲ್ಕು ವರ್ಷಗಳಿಂದ ಮನೆ ಹಂಚಿಕೆ ವಿಳಂಬವಾಗಿತ್ತು’ ಎಂದರು.
‘ರಸ್ತೆ ಕಾಮಗಾರಿಗೆ ಮನೆ ಕಳೆದುಕೊಳ್ಳುವ 45 ಕುಟುಂಬಗಳಿಗೆ ಮೊದಲ ಹಂತದಲ್ಲಿ ಮನೆಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿತ್ತು. ಆ ಪೈಕಿ 39 ಜನರಿಗೆ ಮನೆ ಹಂಚಿಕೆಯಾಗಿದೆ. ಇನ್ನುಳಿದ ಆರು ಜನರ ದಾಖಲೆ ಪರಿಶೀಲಿಸಿ ಎರಡ್ಮೂರು ದಿನಗಳಲ್ಲಿ ಹಂಚಿಕೆ ಮಾಡಲಾಗುವುದು. ಎರಡನೇ ಹಂತದಲ್ಲಿ ಉಳಿದ ಮನೆಗಳನ್ನು ಹಂಚಿಕೆ ಮಾಡಲಾಗುವುದು. ಮನೆಗಳನ್ನು ಬೇರೆಯವರಿಗೆ ಬಾಡಿಗೆ ನೀಡದೆ ಫಲಾನುಭವಿಗಳೇ ಅಲ್ಲಿ ವಾಸ ಮಾಡಬೇಕು ಎಂದು ಹೇಳಿದರು.
‘ಫಲಾನುಭವಿಗಳಲ್ಲಿ ಬಹುತೇಕರು ಕೂಲಿ ಕೆಲಸ ಮಾಡುತ್ತಾರೆ. ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಈಗ ಹಂಚಿಕೆಯಾದ ಮನೆಗಳಿಗಾಗಿ ಫಲಾನುಭವಿಗಳು ಯಾರಿಗೂ ಹಣ ನೀಡುವ ಅಗತ್ಯ ಇಲ್ಲ. ಈ ಮನೆಗಳನ್ನು ಉಚಿತವಾಗಿ ಹಂಚಿಕೆ ಮಾಡಲಾಗಿದೆ. ಅಲ್ಲಿನ ನಿವಾಸಿಗಳು ಸಂಘ ರಚಿಸಿಕೊಂಡು ಮನೆಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿಕೊಳ್ಳಬೇಕು’ ಎಂದರು.
ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಮಾತನಾಡಿ, ‘ವಸತಿ ಸಮುಚ್ಚಯದ ಬಳಿ ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. ವಿದ್ಯುತ್ ಸಂಪರ್ಕವನ್ನು ಫಲಾನುಭವಿಗಳ ಹೆಸರಿನಲ್ಲಿ ಪಡೆದುಕೊಂಡು, ಸ್ಮಾರ್ಟ್ ವಿದ್ಯುತ್ ಮೀಟರ್ ಹಾಕಿಸಿಕೊಳ್ಳಬೇಕು. ಅದಕ್ಕೆ ₹10 ಸಾವಿರ ಖರ್ಚಾಗುತ್ತದೆ. ಅದನ್ನು ಫಲಾನುಭವಿಗಳೇ ಭರಿಸಬೇಕು’ ಎಂದರು.
‘ಮೂರ್ನಾಲ್ಕು ದಿನಗಳಲ್ಲಿ ಮನೆಗಳನ್ನು ಸ್ವಚ್ಛಗೊಳಿಸಲಾಗುವುದು. ಅಲ್ಲಿ ಒಡೆದಿರುವ ಕಿಟಕಿಗಳ ಗಾಜು ಸರಿಪಡಿಸಲಾಗುವುದು. ಫಲಾನುಭವಿಗಳು ನೂತನ ಮನೆಗಳಿಗೆ ಸ್ಥಳಾಂತರವಾದ ನಂತರ, ವಾಣಿವಿಲಾಸ ವೃತ್ತದಿಂದ ಬಿಆರ್ಟಿಎಸ್ ಡಿಪೊವರೆಗೆ ಇರುವ ಅವರ ಮೂಲಮನೆಗಳನ್ನು ನೆಲಸಮ ಮಾಡಲಾಗುವುದು’ ಎಂದು ತಿಳಿಸಿದರು.
‘ನಾವು ಪ್ರತಿ ದಿನ ದುಡಿದು ಜೀವನ ನಡೆಸಬೇಕು. ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆಗೆ ₹10 ಸಾವಿರ ಭರಿಸಲು ನಮಗೆ ಕಷ್ಟವಾಗುತ್ತದೆ. ನೂತನ ಮನೆಗಳಿಗೆ ಸ್ಥಳಾಂತರವಾಗಲು ಅ.5 ರವರೆಗೆ ಕಾಲಾವಕಾಶ ನೀಡಬೇಕು' ಎಂದು ಫಲಾನುಭವಿಗಳು ಮನವಿ ಮಾಡಿದರು.
ಶಾಸಕ ಮಹೇಶ ಟೆಂಗಿನಕಾಯಿ ಪ್ರತಿಕ್ರಿಯಿಸಿ, ‘ಸ್ಮಾರ್ಟ್ ವಿದ್ಯುತ್ ಮೀಟರ್ ದರವನ್ನು ಮಹಾನಗರ ಪಾಲಿಕೆಯಿಂದಲೇ ಭರಿಸಲಾಗುತ್ತದೆ. ಹಕ್ಕು ಪತ್ರ ನೀಡಿದ ನಂತರ ಸ್ಥಳಾಂತರವಾಗಲು ಆ ನಂತರ ಎರಡು ದಿನ ಕಾಲಾವಕಾಶ ನೀಡಲಾಗುತ್ತದೆ‘ ಎಂದರು.
ಸಿದ್ದು ಮೊಗಲಿಶೆಟ್ಟರ್, ಈಶ್ವರಗೌಡ ಪಾಟೀಲ, ರವಿ ನಾಯಕ್, ಮಹಾನಗರ ಪಾಲಿಕೆ ಅಧಿಕಾರಿಗಳು ಇದ್ದರು.
ಸಾಧಕ ವಿದ್ಯಾರ್ಥಿನಿಗೆ ಮನೆ
ನಗರದ ಗೋಪನಕೊಪ್ಪದ ಸರ್ಕಾರಿ ಪಿಯು ಕಾಲೇಜಿನಲ್ಲಿ ಓದಿ ದ್ವಿತೀಯ ಪಿಯು ಪರೀಕ್ಷೆಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದ ನಾಗವೇಣಿ ರಾಯಚೂರು ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ಬಿಹಾರ ಮೂಲದ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ ಬಾಲಕಿಯ ಕುಟುಂಬಕ್ಕೆ ಮನೆಗಳನ್ನು ಹಂಚಿಕೆ ಮಾಡಲಾಯಿತು. ಬಡ ಕುಟುಂಬದ ನಾಗವೇಣಿ ಸರ್ಕಾರಿ ಕಾಲೇಜಿನಲ್ಲಿ ಓದಿ ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕಿಯನ್ನು ಕಳೆದುಕೊಂಡು ಕುಟುಂಬ ಸಂಕಷ್ಟದಲ್ಲಿತ್ತು. ಅವರಿಗೆ ಈ ಹಿಂದೆ ಭರವಸೆ ನೀಡಿದಂತೆ ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಅ.2ರಂದು ವಿಜಯದಶಮಿ ಹಬ್ಬದ ದಿನ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುವುದು. ಅವರ ಮೂಲ ಮನೆಗಳನ್ನು ನೆಲಸಮ ಮಾಡುವಾಗ ಇತರ ಮನೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು–ಮಹೇಶ ಟೆಂಗಿನಕಾಯಿ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.