ADVERTISEMENT

ನೈರುತ್ಯ ರೈಲ್ವೆ: ಟೆಕ್ನಿಷಿಯನ್‌ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲು ಆಗ್ರಹ

ನೈರುತ್ಯ ರೈಲ್ವೆ: ಟೆಕ್ನಿಷಿಯನ್‌ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 5:53 IST
Last Updated 3 ಡಿಸೆಂಬರ್ 2022, 5:53 IST
ನೈರುತ್ಯ ರೈಲ್ವೆಯ ಟೆಕ್ನಿಷಿಯನ್ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ನೇಮಕಾತಿ ಪತ್ರ ನೀಡಬೇಕು ಎಂದು ಆಗ್ರಹಿಸಿ, ಹುಬ್ಬಳ್ಳಿಯ ರೈಲು ಸೌಧದ ಎದುರು ಶುಕ್ರವಾರವೂ ಪ್ರತಿಭಟನೆ ಮುಂದುವರಿಸಿದ ಅಭ್ಯರ್ಥಿಗಳು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು– ಪ್ರಜಾವಾಣಿ ಚಿತ್ರ
ನೈರುತ್ಯ ರೈಲ್ವೆಯ ಟೆಕ್ನಿಷಿಯನ್ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ನೇಮಕಾತಿ ಪತ್ರ ನೀಡಬೇಕು ಎಂದು ಆಗ್ರಹಿಸಿ, ಹುಬ್ಬಳ್ಳಿಯ ರೈಲು ಸೌಧದ ಎದುರು ಶುಕ್ರವಾರವೂ ಪ್ರತಿಭಟನೆ ಮುಂದುವರಿಸಿದ ಅಭ್ಯರ್ಥಿಗಳು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ನೈರುತ್ಯ ರೈಲ್ವೆಯು 2018ರಲ್ಲಿ‌ ನಡೆಸಿದ್ದ ರೈಲ್ವೆ ಟೆಕ್ನಿಷಿಯನ್ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾದ 302 ಮಂದಿಗೆ ನೇಮಕಾತಿ ಪತ್ರ ನೀಡಬೇಕು ಎಂದು ಆಗ್ರಹಿಸಿ, ಗದಗ ರಸ್ತೆಯ ರೈಲು ಸೌಧದ ಎದುರು ಅಭ್ಯರ್ಥಿಗಳು ಶುಕ್ರವಾರವೂ ಪ್ರತಿಭಟನೆ ನಡೆಸಿದರು. ಮಧ್ಯಾಹ್ನದ ಹೊತ್ತಿಗೆ ಸ್ಥಳಕ್ಕೆ ಬಂದ ಅಧಿಕಾರಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದರು.

ಪ್ರತಿಭಟನಾನಿರತರನ್ನು ಭೇಟಿಯಾದ ನೇಮಕಾತಿ ವಿಭಾಗದ ಮುಖ್ಯಸ್ಥ ಜಿ.ಆರ್.ಎಸ್. ರಾವ್ ಮತ್ತು ಪ್ರಧಾನ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಅಲೋಕ್‌ ಕುಮಾರ್ ಅವರು, ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

‘ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಖಾಲಿ ಇರುವ ಟೆಕ್ನಿಷಿಯನ್ ಹುದ್ದೆಗಳ ವಿವರವನ್ನು ಹತ್ತು ದಿನದೊಳಗೆ ಸಂಗ್ರಹಿಸಲಾಗುವುದು. ನಂತರ, ನೇಮಕಾತಿ ಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ನೇಮಕಾತಿ ಮತ್ತು ಸಿಬ್ಬಂದಿ ವಿಭಾಗದ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಮಾತಿಗೆ ತಪ್ಪಿದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು’ ಎಂದು ಪ್ರತಿಭಟನಾನಿರತರಾದ ವಿಲಾಸ್ ಮೇತ್ರಿ, ಸೌರವ ತಿವಾರಿ, ರೋಹಿತ್ ಕುಮಾರ್, ಸೋನು ಕುಮಾರ್, ನಿತೀಶ್ ಕುಮಾರ್, ಅಶುತೋಷ್ ಕುಮಾರ್ ಉಪಾಧ್ಯಾಯ ಹೇಳಿದರು.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ಬಾರದ ಪ್ರಧಾನ ವ್ಯವಸ್ಥಾಪಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅಭ್ಯರ್ಥಿಗಳು ರೈಲು ಸೌಧದ ಒಳಕ್ಕೆ ಹೋಗಲು ಯತ್ನಿಸಿದರು. ಆಗ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಪರಸ್ಪರ ಮಾತಿನ ಚಕಮಕಿ ಮತ್ತು ತಳ್ಳಾಟ ನಡೆಯಿತು. ನಂತರ, ಅಧಿಕಾರಿಗಳು ಅಭ್ಯರ್ಥಿಗಳನ್ನು ಭೇಟಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.