ADVERTISEMENT

ಡಿ.ಕೆ. ಶಿವಕುಮಾರ್ ವಿರುದ್ಧ ಎಸ್‌ಐಟಿಗೆ ದೂರು: ಎಸ್.ಆರ್. ಹಿರೇಮಠ್

​ಪ್ರಜಾವಾಣಿ ವಾರ್ತೆ
Published 30 ಜೂನ್ 2018, 9:12 IST
Last Updated 30 ಜೂನ್ 2018, 9:12 IST
ಎಸ್‌.ಆರ್. ಹಿರೇಮಠ
ಎಸ್‌.ಆರ್. ಹಿರೇಮಠ    

ಹುಬ್ಬಳ್ಳಿ:ಕಪ್ಪು ಹಣದ ತನಿಖೆಗಾಗಿ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸಚಿವ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ದೂರು ನೀಡಲಾಗುವುದು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್. ಹಿರೇಮಠ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಿವಕುಮಾರ್ ಹಾಗೂ ಅವರ ಆಪ್ತರ ಮನೆಯ ಮೇಲೆ ದಾಳಿ ನಡೆಸಿ ಅಪಾರ ಹಣ ವಶಪಡಿಸಿಕೊಂಡಿದ್ದರು. ನ್ಯಾಯಾಲಯಕ್ಕೆ ಅಧಿಕಾರಿಗಳು 33 ಪುಟಗಳ ವರದಿಯೊಂದು ಸಲ್ಲಿಸಿದ್ದು, ಅಕ್ರಮ ಸಂಪಾದನೆಯ ಹಣವನ್ನು ಸಕ್ರಮ ಎಂದು ತೋರಿಸಲು ಹಲವ ವ್ಯಕ್ತಿಗಳನ್ನು ಬಳಕೆ ಮಾಡಿಕೊಂಡಿರುವ ಹಾಗೂ ಬೋಗಸ್ ಕಂಪೆನಿಯನ್ನು ತೆರೆದಿರುವ ಉಲ್ಲೇಖ ಇದೆ ಎಂದರು.

ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ (ಎಐಸಿಸಿ) ಒಟ್ಟು ₹5 ಕೋಟಿ ಹಣವನನ್ನು ತಮ್ಮ ಸಹಚರ ಮುಳಗುಂದ್ ಮೂಲಕ ನೀಡಲು ಉದ್ದೇಶಿಸಿದ್ದ ವಿಷಯವೂ ಅದರಲ್ಲಿದೆ. ಆದ್ದರಿಂದ ಆದಾಯ ತೆರಿಗೆ ಕಾಯ್ದೆ ಮಾತ್ರವಲ್ಲದೆ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯೂ ಕ್ರಮ ಕೈಗೊಳ್ಳುವ ಅಗತ್ಯ ಇದೆ. ಅಲ್ಲದೆ ಉನ್ನತ ಮಟ್ಟದ ತನಿಖೆಯಾಗಬೇಕಿರುವುದರಿಂದ, ಕಪ್ಪು ಹಣ ತನಿಖೆಗಾಗಿ ಸುಪ್ರೀಂ ಕೋರ್ಟ್ ರಚಿಸಿರುವ ಎಸ್‌ಐಟಿಗೆ ದೂರು ನೀಡಲಾಗುವುದು ಎಂದು ಅವರು ಹೇಳಿದರು.

ADVERTISEMENT

ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಗಮನಹರಿಸಬೇಕು. ಅಕ್ರಮಕ್ಕೆ ಬೆಂಬಲ ನೀಡಬಾರದು ಎಂದರು.

151 ಮಂದಿ ವಿಧಾನಸಭಾ ನೌಕರರ ಅಕ್ರಮ ನೇಮಕಾತಿ ಬಗ್ಗೆ ಸ್ವತಂತ್ರ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸಬೇಕು ಎಂದು ಅವರು ಮತ್ತೊಮ್ಮೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.