ADVERTISEMENT

ಹುಬ್ಬಳ್ಳಿ | ಚಾಕು ಇರಿತ ಪ್ರಕರಣ: ರೌಡಿ ಕಾಲಿಗೆ ಗುಂಡು ಹಾರಿಸಿ ಬಂಧನ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 3:19 IST
Last Updated 8 ಏಪ್ರಿಲ್ 2025, 3:19 IST
<div class="paragraphs"><p>ರೌಡಿ ರೇಡಿಯೊ ಮಲೀಕ್ ಅದೋನಿಗೆ ಕಾಲಿಗೆ ಗುಂಡೇಟು</p></div>

ರೌಡಿ ರೇಡಿಯೊ ಮಲೀಕ್ ಅದೋನಿಗೆ ಕಾಲಿಗೆ ಗುಂಡೇಟು

   

ಹುಬ್ಬಳ್ಳಿ: ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿ ರೇಡಿಯೊ ಮಲೀಕ್ ಅದೋನಿಯನ್ನು ಮಂಗಳವಾರ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ, ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಹಿನ್ನೆಲೆಯಲ್ಲಿ ಅವನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ಆರೋಪಿ ಮಲೀಕ್ ಹೆಗ್ಗೇರಿ ನಿವಾಸಿ. ಪಿಎಸ್‌ಐ ವಿಶ್ವನಾಥ ಆಲದಮಟ್ಟಿ ಮತ್ತು ಕಾನ್‌ಸ್ಟೆಬಲ್ ಶರೀಫ ನದಾಫ್ ಗಾಯಗೊಂಡಿದ್ದಾರೆ. ಮೂವರನ್ನು ಕೆಎಂಸಿ-ಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಏನಿದು ಪ್ರಕರಣ: ಜನ್ನತ್ ನಗರದ ತೆಂಗಿನಕಾಯಿ ವ್ಯಾಪಾರಿ ಇರ್ಫಾನ್ ಸುಂಕದ ಅವರು, ರೌಡಿ ಮಲೀಕ್ ಅದೋನಿಗೆ ₹4 ಲಕ್ಷ ಸಾಲ ನೀಡಿದ್ದರು. ಅದನ್ನು ಕೇಳಲು ಅವರು ಸೋಮವಾರ ಸಂಜೆ ಹೆಗ್ಗೇರಿ ಬಳಿ ಹೋದಾಗ ಒಂಬತ್ತು ಮಂದಿಯ ಗುಂಪು, ಅವರ ಮೇಲೆ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿತ್ತು. ನಂತರ ಮಲೀಕ್‌ನು, ಅವರ ಎಡಗೈಗೆ ಮೂರು ಬಾರಿ ಚಾಕು ಇರಿದಿದ್ದ. ಮತ್ತೊಬ್ಬ ಆರೋಪಿ ವಾಸೀಮ್ ತಲ್ವಾರನಿಂದ ಕೊಲೆಗೆ ಯತ್ನಿಸಿದ್ದ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.

'ಪ್ರಕರಣ ಸಂಬಂಧಿಸಿ ಪೊಲೀಸರು ಸೋಮವಾರ ಬೆಳಿಗ್ಗೆ ಪ್ರಮುಖ‌ ಆರೋಪಿ ಮಲೀಕ್‌ನನ್ನು ವಶಕ್ಕೆ ಪಡೆಯಲು ರಾಘವೇಂದ್ರ ಕಾಲೊನಿ ಸ್ಮಶಾನ ಬಳಿ ತೆರಳಿದ್ದರು. ಆಗ, ಅವನು ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಆತ್ಮ ರಕ್ಷಣೆಗಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ನಂತರ ಆರೋಪಿ ಬಲಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಕಮಿಷನರ್ ಎನ್.‌ ಶಶಿಕುಮಾರ್, ಡಿಸಿಪಿ ಮಹಾನಿಂಗ ನಂದಗಾವಿ ಕೆಎಂಸಿ-ಆರ್‌ಐ ಆಸ್ಪತ್ರೆಗೆ ಭೇಟಿ ನೀಡಿ, ಪೊಲೀಸರ ಆರೋಗ್ಯ ವಿಚಾರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.