
ನವಲಗುಂದ: ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿನ ಹೆಚ್ಚುವರಿ ಶಿಕ್ಷಕರು ಬೇರೆ ಶಾಲೆಗೆ ವರ್ಗಾವಣೆಗೊಂಡ ಶಾಲೆಗೆ ಹೋಗದೇ ಅಲ್ಲಿಯೇ ಉಳಿಯುವ ಮೂಲಕ ಮಕ್ಕಳ ಶಿಕ್ಷಣದ ಜೋತೆಗೆ ಚಲ್ಲಾಟವಾಡುತ್ತಿದ್ದು ಮಕ್ಕಳ ಶಿಕ್ಷಣ ಕುಂಠಿತಕ್ಕೆ ಕಾರಣ ಆಗುತ್ತಿದೆ ಎಂಬ ಆರೋಪ ಆರೋಪ ಪಾಲಕರಿಂದ ಕೇಳಿ ಬರುತ್ತಿದೆ.
ಎರಡು ತಾಲ್ಲೂಕಿನ ಹಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲದೇ ಏಕೋಪಾಧ್ಯಾಯರೇ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಕೆಲವು ಶಾಲೆಗಳು ಅತಿಥಿ ಶಿಕ್ಷಕರೇ ನಿಭಾಯಿಸುವಂತಹ ಪರಿಸ್ಥಿತಿ ಎದುರಾಗಿದೆ.
ಒಂದರಿಂದ ಏಳನೆಯ ತರಗತಿಯಲ್ಲಿ ಕಲಿಯುತ್ತಿರುವಂತಹ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಎಂದು 2024ರ ಡಿಸೆಂಬರ್ 31ರಂದು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಶಿಕ್ಷಕರನ್ನು ಕೊರತೆಯಿರುವ ಶಾಲೆಗಳಿಗೆ ವರ್ಗಾವಣೆ ಮಾಡಲಾಗಿದೆ. ಆದರೆ ಇಲ್ಲಿ ಹೆಚ್ಚುವರಿಯಾದ 35 ಶಿಕ್ಷಕರಲ್ಲಿ 14 ಶಿಕ್ಷಕರು ವರ್ಗಾವಣೆಗೊಂಡ ಶಾಲೆಗೆ ಹೋಗದೇ ಮೊದಲಿನ ಶಾಲೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ..
ಇನ್ನು ಕೆಲವು ಶಿಕ್ಷಕರು ಮೂಲ ಶಾಲೆಯಲ್ಲಿಯೇ ಉಳಿಯುವಂತೆ ಶಾಸಕರ ಪತ್ರ ತೆಗೆದುಕೊಂಡು ಬಂದಿದ್ದಾರೆ ಎನ್ನುವ ಗಂಭೀರ ಆರೋಪವು ಕೂಡಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕೇಳಿ ಬಂದಿದೆ.
ಇವತ್ತು ತಾಲೂಕಿನ ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಹಳ ಇದೆ. ಅಂತಹ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕರು ಹಾಜರಾಗುತ್ತಿಲ್ಲ. ಇಲ್ಲಿ ಸರ್ಕಾರದ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ಆದೇಶ ಪಾಲಿಸದ ಶಿಕ್ಷಕರನ್ನು ಕೊಡಲೇ ಅಮಾನತು ಮಾಡಬೇಕು-ಮಾಬುಸಾಬ ಯರಗುಪ್ಪಿ, ಶಿಕ್ಷಣಪ್ರೇಮಿ ನವಲಗುಂದ
ಹೆಚ್ಚುವರಿಯಾಗಿ ವರ್ಗಾವಣೆಗೊಂಡ ಶಿಕ್ಷಕರು ಕೂಡಲೇ ಶಾಲೆಗೆ ಹೋಗಿ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಹಾಜರಾಗದ ಶಿಕ್ಷಕರ ವೇತನ ತಡೆಹಿಡಿದು ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು-ಉಮೇಶ ಬೊಮ್ಮಕ್ಕನವರ, ಕ್ಷೇತ್ರಶಿಕ್ಷಣಾಧಿಕಾರಿ ನವಲಗುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.