ADVERTISEMENT

ಧಾರವಾಡ | ರೈತನ ಕೈಹಿಡಿದ ಪಪ್ಪಾಯಿ; ಉತ್ತಮ ಆದಾಯ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 7:32 IST
Last Updated 26 ಏಪ್ರಿಲ್ 2024, 7:32 IST
<div class="paragraphs"><p>ಧಾರವಾಡ ತಾಲ್ಲೂಕಿನ ಮಾದನಭಾವಿ ಗ್ರಾಮದ ದಯಾನಂದ ಹೊಳೆಹಡಗಲಿ ಹೊಲದಲ್ಲಿ ಪಪ್ಪಾಯಿ ತೋಟಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪಾ ಟಿ.ಕೆ. ಭೇಟಿ ನೀಡಿ ಮಾಹಿತಿ ಪಡೆದರು</p></div>

ಧಾರವಾಡ ತಾಲ್ಲೂಕಿನ ಮಾದನಭಾವಿ ಗ್ರಾಮದ ದಯಾನಂದ ಹೊಳೆಹಡಗಲಿ ಹೊಲದಲ್ಲಿ ಪಪ್ಪಾಯಿ ತೋಟಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪಾ ಟಿ.ಕೆ. ಭೇಟಿ ನೀಡಿ ಮಾಹಿತಿ ಪಡೆದರು

   

ಧಾರವಾಡ: ತಾಲ್ಲೂಕಿನ ಮಾದನಭಾವಿಯ ಎಂಜಿನಿಯರಿಂಗ್‌ ಪದವೀಧರ ದಯಾನಂದ ಹೊಳೆಹಡಗಲಿ ಅವರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪ್ರಯೋಜನ ಪಡೆದು ಥೇವಾನ್ ರೆಡ್ ಲೇಡಿ ತಳಿ ಪಪ್ಪಾಯಿ ಲಾಭ ಗಳಿಸಿದ್ದಾರೆ.

ಕೊಲ್ಲಾಪುರ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಅವರು ಕೋವಿಡ್‌ ತಲ್ಲಣದ ಕಾಲಘಟ್ಟದಲ್ಲಿ ಉದ್ಯೊಗ ತೊರೆದು ಊರು ಸೇರಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. 15 ಎಕರೆ ಜಮೀನಿನಲ್ಲಿ ಮಿಶ್ರ ಬೇಸಾಯ (ಕಬ್ಬು, ಗೋವಿನಜೋಳ, ಕಡಲೆ, ತರಕಾರಿ, ಸೋಯಾಬಿನ್...) ಮಾಡುತ್ತಿದ್ದಾರೆ. ಹೊಸ ಬೆಳೆ ಪ್ರಯೋಗ ರೂಢಿಸಿಕೊಂಡಿದ್ದಾರೆ. ರಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸದೆ ಸಾವಯವ ಪದ್ಧತಿ ಅಳವಡಿಸಿಕೊಂಡಿದ್ದಾರೆ.

ADVERTISEMENT

ನರೇಗಾ ಯೋಜನೆಯಡಿ ತೋಟಗಾರಿಕೆ ಬೆಳೆ ಬೆಳೆಯಲು ನೀಡುವ ಸೌಲಭ್ಯಗಳ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಪಪ್ಪಾಯಿ ಬೆಳೆ ಬೆಳೆದಿದ್ದಾರೆ. 1040 ಪಪ್ಪಾಯಿ ಸಸಿಗಳನ್ನು ನರ್ಸರಿಯಿಂದ ತಂದು ಒಂದುವರೆ ಎಕರೆಯಲ್ಲಿ ನೆಟ್ಟು ಬೆಳೆಸಿದ್ದಾರೆ. ಪಪ್ಪಾಯಿ ಗಿಡಗಳ ಮಧ್ಯದಲ್ಲಿ ಮಿಶ್ರವಾಗಿ ಮೆಣಸಿನಕಾಯಿ, ಸೌತೆಕಾಯಿ, ತರಕಾರಿಗಳನ್ನು ಬೆಳೆದಿದ್ದಾರೆ. 

‘ಈ ವರ್ಷ ಬರಗಾಲದಿಂದ ಕಬ್ಬು, ಸೋಯಾಬಿನ್ ಸಹಿತ ಹಲವು ಬೆಳೆಗಳು ಫಲ ನೀಡಲಿಲ್ಲ. ಪಪ್ಪಾಯಿ ಬೆಳೆ ಕೈ ಹಿಡಿಯಿತು. ಎಕರೆಗೆ 40 ಟನ್‍ಗಿಂತಲೂ ಹೆಚ್ಚು ಇಳುವರಿ ಬಂದಿದೆ. ಇವರೆಗೆ 25 ಟನ್ ಮಾರಾಟ ಮಾಡಿದ್ದು ₹3 ಲಕ್ಷ ಆದಾಯ ದೊರೆತಿದೆ. ಪಪ್ಪಾಯಿ ಬೆಳೆಯಲು ₹40 ಸಾವಿರ ಖರ್ಚು ಮಾಡಿದ್ದೇನೆ. ತೋಟಗಾರಿಕೆ ಇಲಾಖೆಯಿಂದ ನರೇಗಾ ಯೋಜನೆಯಡಿ ನೆರವು ಪಡೆದುಕೊಂಡಿದ್ದೇನೆ’ ಎಂದು ರೈತ ದಯಾನಂದ ಹೊಳೆಹಡಗಲಿ ’ಪ್ರಜಾವಾಣಿ‘ಗೆ ತಿಳಿಸಿದರು. 

ಸಾವಯವ ಗೊಬ್ಬರ ಉಪಯೋಗ ಮಾಡಿದ್ದರಿಂದ ಖರ್ಚಿನ ಪ್ರಮಾಣವೂ ಕಡಿಮೆಯಾಯಿತು. ಇಳುವರಿ ಹೆಚ್ಚಾಗಿದೆ.  12 ದಿನಕ್ಕೊಮ್ಮೆ ಪಪ್ಪಾಯ ಕಟಾವು ಮಾಡುತ್ತೇವೆ. 

ತೋಟಗಾರಿಕೆ ಇಲಾಖೆಯ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಸೌಲಭ್ಯ ಪಡೆದಿದ್ದೇನೆ. ಸಸಿಗಳ ನಾಟಿಗೂ ಕೆಲಸಕ್ಕೂ 20 ನರೇಗಾ ಕಾರ್ಮಿಕರು ಬಂದಿದ್ದರು. ಕಳೆದ ವಾರ ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪಾ ಟಿ.ಕೆ.ತೋಟಗಾರಿಕೆ ಅಧಿಕಾರಿಗಳು ಬಂದು ಪಪ್ಪಾಯಿ ತೋಟದ ನಿರ್ವಹಣೆ ಪರಿಶೀಲನೆ ಮಾಡಿದರು ಎಂದು ತಿಳಿಸಿದರು. 

ತಾರಿಹಾಳದ ಎಕ್ಸೆಲ್ ಕಂಪನಿ ಅವರು ತೋಟಕ್ಕೆ ಬಂದು ಕೆ.ಜಿ.ಗೆ 12ರಂತೆ ಹೊಲಕ್ಕೆ ಬಂದು ಖರೀದಿಸುತ್ತಾರೆ. ನಾವು ಕಟಾವು ಮಾಡಿಕೊಟ್ಟರೆ ಮುಗಿಯಿತು. ಸಾರಿಗೆ ಖರ್ಚು ಇಲ್ಲ
ದಯಾನಂದ ಹೊಳೆಹಡಗಲಿ ಬೆಳೆಗಾರ
ರೈತ ದಯಾನಂದ ಹೊಳೆಹಡಗಲಿ ಅವರಿಗೆ ನರೇಗಾ ಯೋಜನೆಯಡಿ ಸಹಾಯಧನ ನೀಡಲಾಗಿದೆ. ಪಪ್ಪಾಯಿ ಗಿಡ ನೆಡಲು ಗುಂಡಿಗಳನ್ನು ತೆಗೆಯಲು ಇತ್ಯಾದಿ ಬಳಸಿಕೊಂಡಿದ್ಧಾರೆ. ಚೆನ್ನಾಗಿ ಬೆಳೆದಿದ್ಧಾರೆ
ಇಮ್ತಿಯಾಜ್‌ ಚಂಗಾಪುರಿ ಸಹಾಯಕ ನಿರ್ದೇಶಕ ತೋಟಗಾರಿಕ ಇಲಾಖೆ ಧಾರವಾಡ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.