
ಧಾರವಾಡ: ‘ಪ್ರಸ್ತುತ ನಾಟಕಗಳು ಪ್ರೇಕ್ಷಕರ ಕೊರತೆ ಎದುರುಸುತ್ತಿವೆ. ನಾಟಕಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದು ರಂಗ ಸಮಾಜದ ಸದಸ್ಯ ಎಸ್.ಜಹಾಂಗೀರ ಹೇಳಿದರು.
ರಂಗಾಯಣ ವತಿಯಿಂದ ಪಂಡಿತ ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ರಂಗಾಯಣ ನಾಟಕೋತ್ಸವ ಹಾಗೂ ಗಾಂಧೀ ಭಾರತ ಐತಿಹಾಸಿಕ ಭಾವಚಿತ್ರಗಳ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ಹವ್ಯಾಸಿ ಕಲಾವಿದರು ರಂಗಭೂಮಿ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಸಾರ್ವಜನಿಕರು ನಾಟಕ ವೀಕ್ಷಿಸುವ ಮೂಲಕ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು’ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ನಿಂಗಪ್ಪ ಮುದೇನೂರ ಮಾತನಾಡಿ, ರಂಗಭೂಮಿಯು ಕತ್ತಲಿನಿಂದ ಆರಂಭವಾಗುವ ಪಯಣವಾಗಿದೆ. ಜೀವನದ ಕಷ್ಟ, ಸುಖ, ದುಃಖಗಳನ್ನು ತೆರೆಯ ಮೇಲೆ ತರುವ ಕಲಾವಿದರ ಬದುಕು ಕೂಡ ಇಂದು ಸಂಕಷ್ಟದಲ್ಲಿದೆ. ರಂಗಭೂಮಿ ಉಳಿಸಲು ಎಲ್ಲರ ಪ್ರೋತ್ಸಾಹದ ಅಗತ್ಯವಿದೆ’ ಎಂದರು.
ಆಲೂರು ವೆಂಕಟರಾವ್ ಟ್ರಸ್ಟ್ ಅಧ್ಯಕ್ಷ ರಂಜಾನ್ ದರ್ಗಾ ಮಾತನಾಡಿ, ‘ನಾಟಕಗಳು ಕಾಂತ್ರಿಕಾರಿ ಮಾಧ್ಯಮಗಳಾಗಿವೆ. ವೇದಗಳು, ಮಹಾಕಾವ್ಯಗಳು ಜನಸಾಮಾನ್ಯರಿಗೆ ತಲುಪಿಸಲು ನಾಟಕಗಳು ಪ್ರಮುಖ ಪಾತ್ರವಹಿಸಿವೆ’ ಎಂದು ಹೇಳಿದರು.
ಕಾರ್ಕಳ ಯಕ್ಷ ರಂಗಾಯಣದ ರೆಪರ್ಟರಿ ಕಲಾವಿದರು ‘ಸೋಮಿಯ ಸೌಭಾಗ್ಯ’ ನಾಟಕ ಪ್ರದರ್ಶಿಸಿದರು. ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.