ಕುಡತಿನಿ ಪಟ್ಟಣದಲ್ಲಿನ ಸಾರಿಗೆ ಬಸ್ ನಿಲ್ದಾಣವು ಮಂಗಳವಾರ ಬಸ್ಗಳ ಸಂಚಾರವಿಲ್ಲದೆ ಬಿಕೋ ಎನ್ನುತ್ತೀರುವುದು
ಹುಬ್ಬಳ್ಳಿ: ವೇತನ ಪರಿಷ್ಕರಣೆ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರ, ಬೆಳಿಗ್ಗೆ ಆರಂಭವಾಗಿ ಸಂಜೆ ವೇಳೆಗೆ ಮೊಟಕುಗೊಂಡಿತು. ಇದರಿಂದಾಗಿ ದೂರದೂರಿಗೆ ತೆರಳುವ ಪ್ರಯಾಣಿಕರು ನಿರಾಳರಾದರು.
ಮುಷ್ಕರಕ್ಕೆ ಹುಬ್ಬಳ್ಳಿ ನಗರ ಪ್ರದೇಶದಲ್ಲಿ ಭಾಗಶಃ ಬೆಂಬಲ ವ್ಯಕ್ತವಾಗಿತ್ತು. ಬೆಳಿಗ್ಗೆಯಿಂದ ಸಂಜೆವರೆಗೆ ಕೆಲವೇ ಬಸ್ಗಳು ಮಾತ್ರ ಸಂಚರಿಸಿದವು. ಮುಷ್ಕರ ಮುಂದೂಡಿದ ಹಿನ್ನೆಲೆಯಲ್ಲಿ ಸಂಜೆಯ ನಂತರ ಬಸ್ ಸೇವೆ ಪುನರಾರಂಭವಾಯಿತು.
ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಗ್ರಾಮೀಣ ಭಾಗಗಳಿಗೆ ಬಸ್ಗಳನ್ನು ಓಡಿಸಲಾಯಿತು. ದೂರದ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಬಸ್ ನಿಲ್ದಾಣಗಳಲ್ಲಿಯೇ ಕಾದು ಕುಳಿತಿದ್ದರು.
ಹುಬ್ಬಳ್ಳಿ–ಧಾರವಾಡ ನಗರದ ಮಧ್ಯೆ ನಗರ ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ, ಪ್ರಯಾಣಿಕರು ಬೇಂದ್ರೆ ಬಸ್ ಮೊರೆ ಹೋಗಿದ್ದರು. ದಿನಕ್ಕೆ ಎರಡು ಲಕ್ಷದಷ್ಟು ಮಂದಿಯ ಸಂಚಾರ ಈ ಮಾರ್ಗದಲ್ಲಿದ್ದು, ಬೇಂದ್ರೆ ಬಸ್ಗಳು ಪ್ರಯಾಣಿಕರಿಂದ ತುಂಬಿದ್ದವು.
ರಾಣಿ ಚನ್ನಮ್ಮ ಎಕ್ಸ್ಪ್ರೆಸ್ ರೈಲಿಗೆ ಬೆಳಿಗ್ಗೆ 6.30ಕ್ಕೆ ನಗರದ ರೈಲು ನಿಲ್ದಾಣಕ್ಕೆ ಬಂದ ಪ್ರಯಾಣಿಕರು, ನಗರದಿಂದ ಮುಂದೆ ತೆರಳಲು ಬಸ್ ಇಲ್ಲದೆ ಪರದಾಡಿದರು. ಆಟೊಗಳ ಬಾಡಿಗೆ ದರ ದುಪ್ಪಟ್ಟಾಗಿತ್ತು.
ಸಮಸ್ಯೆ ಆಲಿಸಿದ ಎಂ.ಡಿ.: ಬೆಳಿಗ್ಗೆ ಮುಷ್ಕರ ಆರಂಭವಾಗುತ್ತಿದ್ದಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಅವರು, ವಿವಿಧ ಬಸ್ ನಿಲ್ದಾಣಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದರು. ಪ್ರಯಾಣಿಕರು, ವಿದ್ಯಾರ್ಥಿಗಳ ಜತೆ ಚರ್ಚಿಸಿ ಸಮಸ್ಯೆ ಆಲಿಸಿದರು. ಪರ್ಯಾಯ ವ್ಯವಸ್ಥೆ ಮಾಡುವ ಭರವಸೆ ನೀಡಿ, ತರಬೇತಿ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಕೆಲವು ಬಸ್ಗಳು ಸಂಚರಿಸುವಂತೆ ಮಾಡಿದರು. ವಿದ್ಯಾರ್ಥಿಗಳು ಶಾಲಾ–ಕಾಲೇಜಿಗೆ ತೆರಳಲು ಸಮಸ್ಯೆಯಾಗದಂತೆ, ಬಸ್ಗಳನ್ನು ಓಡಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಂತರ ಹೊಸೂರು ಬಸ್ ನಿಲ್ದಾಣದಿಂದ ಧಾರವಾಡದವರೆಗೆ ಬಸ್ನಲ್ಲಿ ಪ್ರಯಾಣಿಸಿದರು. ಪ್ರಯಾಣಿಕರ ಸಮಸ್ಯೆ ಆಲಿಸಿ, ತಾತ್ಕಾಲಿಕ ಸಮಸ್ಯೆಗೆ ಸಹಕರಿಸುವಂತೆ ವಿನಂತಿಸಿದರು. ಸಂಸ್ಥೆಯ ಅಧಿಕಾರಿಗಳು ಇದ್ದರು.
ಬಿಆರ್ಟಿಎಸ್ ಮಾರ್ಗ ಸ್ತಬ್ಧ: ಬೆಳಿಗ್ಗೆ 5ರಿಂದ 7ರ ವರೆಗೆ ಎರಡು ಚಿಗರಿ ಬಸ್ಗಳು ಅವಳಿ ನಗರದ ಮಧ್ಯೆ ಸಂಚರಿಸಿದವು. ಬಸ್ಗೆ ಕಲ್ಲು ತೂರಲಾಗಿದೆ ಎಂಬ ಮಾಹಿತಿ ಬಂದಿದ್ದರಿಂದ ಅವುಗಳ ಸಂಚಾರವನ್ನು ಸಹ ಸ್ಥಗಿತಗೊಳಿಸಲಾಯಿತು. ಬಿಆರ್ಟಿಎಸ್ ನಿಲ್ದಾಣದ ಒಳಗೆ ಯಾರೂ ಪ್ರವೇಶಿಸದಂತೆ ಶಟರ್ ಎಳೆದು ಬೀಗ ಹಾಕಲಾಗಿತ್ತು. ಧಾರವಾಡದಿಂದ ಹುಬ್ಬಳ್ಳಿವರೆಗಿನ ಬಿಆರ್ಟಿಎಸ್ ಮಾರ್ಗ ಚಿಗರಿ ಬಸ್ಗಳ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು.
‘ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಪ್ರಯಾಣಿಕರ ಬೇಡಿಕೆಗೆ ತಕ್ಕಷ್ಟು ಬಸ್ಗಳನ್ನು ಓಡಿಸಲಾಗಿತ್ತು. ಮುಷ್ಕರದ ಅವಧಿಯಲ್ಲೂ ಕಲಘಟಗಿ, ಅಣ್ಣಿಗೇರಿ, ನವಲಗುಂದ, ಕುಂದಗೋಳ ಭಾಗಗಳಿಗೆ ಬಸ್ಗಳು ಸಂಚರಿಸಿವೆ’ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದರು.
ಬಸ್ಗೆ ಕಲ್ಲು ಎಸೆದ ಕಿಡಿಗೇಡಿಗಳು
ಹುಬ್ಬಳ್ಳಿ: ನಗರದ ಹೊರವಲಯದ ಗದಗ ರಸ್ತೆಯ ವರ್ತುಲ ರಸ್ತೆ ಸಮೀಪ ಹುಬ್ಬಳ್ಳಿಯಿಂದ ಹೊಸಪೇಟೆಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್ಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.
ಬಸ್ ಮುಂಭಾಗದ ಗಾಜು ಜಖಂಗೊಂಡಿದೆ. ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
‘ಹೊಸಪೇಟೆ ಘಟಕಕ್ಕೆ ಸೇರಿದ ಬಸ್, ಬೆಳಿಗ್ಗೆ 7.15ರ ವೇಳೆ ಹೊಸೂರಿನ ಪ್ರಾದೇಶಿಕ ಬಸ್ ನಿಲ್ದಾಣದಿಂದ ಹೊರಟಿತ್ತು. 7.30ರ ವೇಳೆ ವರ್ತುಲ ರಸ್ತೆ ಸಮೀಪ ಇಬ್ಬರು ಮುಸುಕುಧಾರಿಗಳು ಕಲ್ಲು ತೂರಿ ಪರಾರಿಯಾಗಿರುವ ಮಾಹಿತಿಯಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ವಿದ್ಯಾನಗರದ ಬಸ್ ಡಿಪೊದಲ್ಲಿಯೂ ಧಾರವಾಡಕ್ಕೆ ತೆರಳುತ್ತಿದ್ದ ಬಸ್ಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ’ ಎಂದು ಸಾರಿಗೆ ಅಧಿಕಾರಿಯೊಬ್ಬರು ತಿಳಿಸಿದರು. ಪ್ರಕರಣ ದಾಖಲಾದ ಬಗ್ಗೆ ಮಾಹಿತಿಯಿಲ್ಲ.
ಕರ್ತವ್ಯಕ್ಕೆ ಗೈರಾದ ಸಿಬ್ಬಂದಿ
ಹುಬ್ಬಳ್ಳಿ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿನಿತ್ಯ 650ಕ್ಕೂ ಹೆಚ್ಚು ಬಸ್ಗಳು ಸಂಚರಿಸುತ್ತಿದ್ದು, ಮುಷ್ಕರದ ಹಿನ್ನೆಲೆಯಲ್ಲಿ ಕೇವಲ 240ರಷ್ಟು ಬಸ್ಗಳು ಮಾತ್ರ ಸಂಚರಿಸಿವೆ. ಹುಬ್ಬಳ್ಳಿ ನಗರ ಭಾಗದಲ್ಲಿ ಸಂಚರಿಸುವ 308 ಬಸ್ಗಳಲ್ಲಿ ಕೇವಲ 96 ಬಸ್ಗಳು ಮಾತ್ರ ಕಾರ್ಯಾಚರಣೆ ನಡೆಸಿದವು. ನಗರ ಘಟದಲ್ಲಿನ ಚಾಲಕ, ನಿರ್ವಾಹಕ , ಮೆಕ್ಯಾನಿಕ್ಗಳು ಸೇರಿ 840 ಸಿಬ್ಬಂದಿಯಲ್ಲಿ ಕೇವಲ 167 ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಧಾರವಾಡ ಮತ್ತು ಹುಬ್ಬಳ್ಳಿ ಘಟಕದಲ್ಲಿರುವ 97 ಚಿಗರಿ ಬಸ್ಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದವು ಎಂದು ಸಾರಿಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ನಮ್ಮ ವ್ಯಾಪ್ತಿಯಲ್ಲಿ ಶೇ 60ರಷ್ಟು ಬಸ್ಗಳು ಕಾರ್ಯಾಚರಣೆ ನಡೆಸಿವೆ. ಗೈರಾದ ಸಿಬ್ಬಂದಿಗೆ ನೋಟಿಸ್ ನೀಡಿ, ಮುಂದಿನ ಕ್ರಮ ಕೈಗೊಳ್ಳಲಾಗುವುದುಪ್ರಿಯಾಂಗಾ ಎಂ ವ್ಯವಸ್ಥಾಪಕ ನಿರ್ದೇಶಕಿ, ವಾಕರಸಾಸಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.