ADVERTISEMENT

ಕ್ಷೇತ್ರ ನಿರೀಕ್ಷೆ– ಕುಂದಗೋಳ | ಅಭಿವೃದ್ಧಿ ಕಾರ್ಯ ಚುರುಕುಗೊಳ್ಳಲಿ

ಕುಂದಗೋಳ ಹಿಂದುಳಿದ ಹಣೆಪಟ್ಟಿ ಕಳಚುವ ನಿರೀಕ್ಷೆಯಲ್ಲಿ ಜನತೆ

ಪ್ರಜಾವಾಣಿ ವಿಶೇಷ
Published 22 ಮೇ 2023, 4:30 IST
Last Updated 22 ಮೇ 2023, 4:30 IST
ಕುಂದಗೋಳದಿಂದ ಬಿಡ್ನಾಳದಿಂದ ರಸ್ತೆ ಸಂಪೂರ್ಣ ಹದಗೆಟ್ಟಿರುವುದು
ಕುಂದಗೋಳದಿಂದ ಬಿಡ್ನಾಳದಿಂದ ರಸ್ತೆ ಸಂಪೂರ್ಣ ಹದಗೆಟ್ಟಿರುವುದು   

ಗಿರೀಶ ಘಾಟಗೆ

ಕುಂದಗೋಳ: ರೈತರೇ ಹೆಚ್ಚಿರುವ ಕುಂದಗೋಳ, ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಈವರೆಗೂ ಅನುದಾನದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಮಂದಗತಿಯಲ್ಲಿ ಸಾಗಿದ್ದವು. ಅಭಿವೃದ್ಧಿ ಕಾರ್ಯಗಳು ಚುರುಕು ಪಡೆಯುವುದೂ ಸೇರಿದಂತೆ, ನಿರೀಕ್ಷೆಯ ಪಟ್ಟಿಯೂ ದೊಡ್ಡದಿದೆ.

‘ಹಳ್ಳಿಗಳಿಂದ ಪಟ್ಟಣಕ್ಕೆ ಓಡಾಡುವ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರಿಗೆ ಸಮರ್ಪಕವಾಗಿ ಬಸ್ ವ್ಯವಸ್ಥೆ ಇಲ್ಲ. ಈ ಕುರಿತು ವಿದ್ಯಾರ್ಥಿಗಳು ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಇನ್ನಾದರೂ ಈ ಪರಿಸ್ಥಿತಿ ಬದಲಾಗಲಿದೆಯೇ  ಕಾದು ನೋಡಬೇಕು’ ಎಂದು ಗುಡೆನಕಟ್ಟಿ ಗ್ರಾಮದ ಬಸವರಾಜ ಯೋಗಪ್ಪನವರ ಹೇಳಿದರು.

ADVERTISEMENT

‘ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಪೂರೈಕೆ, ಜಮೀನುಗಳಿಗೆ ಓಡಾಡಲು ಸರಿಯಾದ ಒಳ ರಸ್ತೆಗಳ ಕೊರತೆ ಹಾಗೂ ವಾಸಿಸಲು ಮನೆ ಇಲ್ಲ. ಗುಡೆನಕಟ್ಟಿ, ಚಾಕಲಬ್ಬಿ, ಯರೇಬೂದಿಹಾಳ, ಯರಗುಪ್ಪಿ, ಹಿರೇನೆರ್ತಿ, ಚಿಕ್ಕನೆರ್ತಿ, ರೊಟ್ಟಿಗವಾಡ, ಕೊಂಕಣ ಕುರಹಟ್ಟಿ ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಅನೇಕ ಗ್ರಾಮಗಳಲ್ಲಿ ಬಹುದೂರದ ಕೆರೆ, ಬಾವಿಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ಈಗಲೂ ಇದೆ. ಒಳ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಎಲ್ಲೆಂದರಲ್ಲಿ ಕಸ ಹಾಕುತ್ತಿರುವದಿಂದ ಸಂಜೆಯಾದರೆ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗುತ್ತದೆ‌’ ಎಂದು ಕುರಟ್ಟಿ ಗ್ರಾಮದ ಯುವಕ ರವಿ ಓದು ಸಮಸ್ಯೆ ಬಿಚ್ಚಿಟ್ಟರು.

‘ತಾಲ್ಲೂಕಿನ ಹಳ್ಳಗಳು ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ಅಲ್ಲಲ್ಲಿ ರಸ್ತೆಗಳು ಜಲಾವೃತಗೊಳ್ಳುತ್ತವೆ. ಯರೇಬೂದಿಹಾಳ, ಭರದ್ವಾಡ, ಚಾಕಲಬ್ಬಿ, ಕೊಡ್ಲಿವಾಡ ಬಳಿ ಸೇತುವೆಗಳ ನಿರ್ಮಾಣ ಆಗಬೇಕು. ತಾಲ್ಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ಹಾಗೂ ಪ್ರಸಿದ್ಧಿ ಪಡೆದ ಒಣಮೆಣಸಿನಕಾಯಿ ದಾಸ್ತಾನು ಮಾಡಲು ಸಂಸ್ಕರಣಾ ಘಟಕಗಳ ನಿರ್ಮಾಣವಾಗಬೇಕು’ ಎಂದು ಭರದ್ವಾಡ ಗ್ರಾಮದ ಸಂಜು ಹೇಳಿದರು.

‘ಕುಂದಗೋಳ, ಸಂಶಿ, ಗುಡಗೇರಿ, ಕಮಡೋಳ್ಳಿ, ತರ್ಲಘಟ್ಟ ಸೇರಿದಂತೆ ಅನೇಕ ಕಡೆಗಳಲ್ಲಿ ಸಂತೆ ಮಾರುಕಟ್ಟೆಯ ಅಗತ್ಯವಿದೆ. ತಾಲ್ಲೂಕಿನ ಬಹುತೇಕರು ಕೂಲಿ ಕೆಲಸಕ್ಕಾಗಿ ನಿತ್ಯ ಹುಬ್ಬಳ್ಳಿಗೆ ಪ್ರಯಾಣಿಸುತ್ತಾರೆ. ತಾಲ್ಲೂಕಿನಲ್ಲೇ ಅವರಿಗೆ ಕೆಲಸ ಸಿಗುವಂತಾಗಬೇಕು. ಕ್ರೀಡಾಪಟುಗಳಿಗೆ ಸುಸಜ್ಜಿತ ಕ್ರೀಡಾಂಗಣ ಬೇಕಿದೆ. ರೈತರ ಸಮಸ್ಯೆಗಳೂ ಈಡೇರಬೇಕು’ ಎಂಬುದು ಚಾಕಲಬ್ಬಿ ಗ್ರಾಮದ ಗುರುಶಿದ್ದಪ್ಪ ಅವರ ಬೇಡಿಕೆ.

ಕುಂದಗೋಳ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ನೀರಿಗಾಗಿ ಗ್ರಾಮಸ್ಥರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟಿಸಿದರು
ಪೋಟೋ: ತಾಲ್ಲೂಕಿನ ಚಾಕಲಬ್ಬಿ ಗ್ರಾಮದಿಂದ ಸಂಶಿ ಗ್ರಾಮದ ಮಧ್ಯದಲ್ಲಿರುವ ಗೂಗಿ ಹಳ್ಳದ ಸೇತೆವೇ ನಿಮಾ ೯ಣ ವಾಗದೆ ರಸ್ತೆ ಪೂರ್ಣ ಹದಗೆಟ್ಟು ಮಳೆಗಾಲದಲ್ಲಿ ನಡುಗಡ್ಡೆಯಂತೆ ನಿಮಾ ೯ ಣ ವಾಗುವ ಸ್ಥಿತಿ ಪ್ರಸ್ತುತ ಮುಂದುವರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.