ADVERTISEMENT

ಮುಂಡರಗಿ: ಬಗೆಹರಿಯದ ಬೆಣ್ಣೆಹಳ್ಳಿ ಸಮಸ್ಯೆ

ರಸ್ತೆಯಲ್ಲೇ ನಿಲ್ಲುವ ಗಲೀಜು ನೀರು; ಸಾರ್ವಜನಿಕರ ಸಂಚಾರಕ್ಕೆ ಸಂಕಷ್ಟ

ಕಾಶಿನಾಥ ಬಿಳಿಮಗ್ಗದ
Published 19 ನವೆಂಬರ್ 2025, 2:41 IST
Last Updated 19 ನವೆಂಬರ್ 2025, 2:41 IST
ಮುಂಡರಗಿ ತಾಲ್ಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿನ ಇಕ್ಕಟ್ಟಾದ ರಸ್ತೆ
ಮುಂಡರಗಿ ತಾಲ್ಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿನ ಇಕ್ಕಟ್ಟಾದ ರಸ್ತೆ   

ಮುಂಡರಗಿ: ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೆಣ್ಣಿಹಳ್ಳಿ ಗ್ರಾಮ ಮೂಲಸೌಕರ್ಯದಿಂದ ವಂಚಿತವಾಗಿದ್ದು, ಸೌಲಭ್ಯಕ್ಕಾಗಿ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ.

ಗ್ರಾಮದಲ್ಲಿ ಒಂದು ಓಣಿಯಿಂದ ಇನ್ನೊಂದು ಓಣಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ತುಂಬಾ ಇಕ್ಕಟ್ಟಾಗಿದ್ದು, ದ್ವಿಚಕ್ರ ವಾಹನಗಳು ಸಂಚರಿಸಲೂ ಆಗದು. ಕೆಲವು ಭಾಗಗಳಲ್ಲಿ ವಿಶಾಲವಾದ ಸಿಮೆಂಟ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದರೆ, ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿಗಳನ್ನು ನಿರ್ಮಿಸದ ಕಾರಣ, ಗ್ರಾಮಸ್ಥರು ಬಳಸಿದ ಗಲೀಜು ನೀರು ರಸ್ತೆ ಮಧ್ಯ ಹರಿಯುತ್ತದೆ.

ಕೆಲವು ರಸ್ತೆಗಳ ಪಕ್ಕದಲ್ಲಿ ಚರಂಡಿಗಳನ್ನು ನಿರ್ಮಿಸಲಾಗಿದೆ. ಗಲೀಜು ನೀರು ಹರಿದು ಹೋಗಲು ಅಕ್ಕಪಕ್ಕದಲ್ಲಿ ತಗ್ಗುಗಳಿಲ್ಲದ್ದರಿಂದ ಚರಂಡಿ ನೀರು ಚರಂಡಿಗಳಲ್ಲೇ ನಿಲ್ಲುತ್ತದೆ. ಚರಂಡಿ ನೀರು ಗ್ರಾಮದ ಹೊರವಲಯದ ಜಮೀನುಗಳಿಗೆ ಹರಿಯುತ್ತಿದ್ದು, ಕೆಲವು ರೈತರು ಅದಕ್ಕೆ ತಕರಾರು ತಗೆದಿದ್ದಾರೆ.

ADVERTISEMENT

ಕೆಲವು ಓಣಿಗಳಲ್ಲಿ ಗ್ರಾಮಸ್ಥರು ಇಕ್ಕಟ್ಟಾದ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಅಲ್ಲಿನ ರಸ್ತೆಗಳು ತುಂಬಾ ಕಿರಿದಾಗಿವೆ. ಹೀಗಾಗಿ, ಅಲ್ಲಿ ಚರಂಡಿಗಳನ್ನು ನಿರ್ಮಿಸಲು ಗ್ರಾಮ ಪಂಚಾಯಿತಿಗೆ ಸಾಧ್ಯವಾಗಿಲ್ಲ. ದಿನ ಬಿಟ್ಟು ದಿನ ಶುದ್ಧ ಕುಡಿಯುವ ನೀರು ಹಾಗೂ ಬಳಕೆ ನೀರು ಪೂರೈಸಲಾಗುತ್ತಿದೆ. ಬಹುತೇಕ ನಳಗಳಿಗೆ ಟ್ಯಾಪ್ ಇಲ್ಲದೆ ನೀರು ವ್ಯರ್ಥವಾಗಿ ಚರಂಡಿ ಪಾಲಾಗುತ್ತಿದೆ.

‘ಗ್ರಾಮದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಿದ್ದು, ಕಾಂಪೌಂಡ್‌ಗೆ ಅಂಟಿಕೊಂಡಂತೆ ಕೆಲವರು ತಿಪ್ಪೆಗಳನ್ನು ಹಾಕಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಇದೆ. ಗ್ರಾಮದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿದ್ದು ಅನುದಾನ ದೊರೆತಂತೆ ಹಂತ ಹಂತವಾಗಿ ಸಮಸ್ಯೆ ನಿವಾರಿಸಲಾಗುವುದು
ಮಹೇಶ ಅಲ್ಲಿಪುರ ಪಿಡಿಒ ಕೊರ್ಲಹಳ್ಳಿ ಗ್ರಾಮ ಪಂಚಾಯಿತಿ

ಕಿರು ಸೇತುವೆ ನಿರ್ಮಾಣ

ಗ್ರಾಮದ ಹೊರವಲಯದಲ್ಲಿ ಹರಿಯುವ ಹಳ್ಳವು ಗ್ರಾಮದ ಬಹುತೇಕ ರೈತರ ಜಮೀನುಗಳಿಗೆ ದಾರಿ ಸಂಪರ್ಕ ಕಲ್ಪಿಸುತ್ತಿದೆ. ಮಕ್ತುಂಪುರ ಹಾಗೂ ಮುಂಡರಗಿ ಪಟ್ಟಣದ ಹಿರೇಹಳ್ಳಗಳ ನೀರು ಈ ಹಳ್ಳಕ್ಕೆ ಸೇರುತ್ತಿದೆ. ಇದರಿಂದಾಗಿ ಹಳ್ಳ ದಾಟುವುದು ಜನ ಹಾಗೂ ಜಾನುವಾರುಗಳಿಗೆ ಸಮಸ್ಯೆಯಾಗಿದೆ. ಹಳ್ಳಕ್ಕೆ ಕಿರು ಸೇತುವೆ ನಿರ್ಮಿಸುವ ಕುರಿತು ಗ್ರಾಮ ಪಂಚಾಯಿತಿಯವರು ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ ಅದಕ್ಕೆ ಮಂಜೂರಾತಿ ದೊರೆತಿಲ್ಲ. ಹೀಗಾಗಿ ಗ್ರಾಮಸ್ಥರೆಲ್ಲ ಒಂದಾಗಿ ಸದ್ಯ ತಾತ್ಕಾಲಿಕವಾಗಿ ಹಳ್ಳಕ್ಕೆ ಕಚ್ಚಾ ಕಿರು ಸೇತುವೆ ನಿರ್ಮಿಸಲು ಮುಂದಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.