
ನರಗುಂದ: ಪಟ್ಟಣದ ಸಿದ್ಧೇಶ್ವರ ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಹುಬ್ಬಳ್ಳಿ ವರದಶ್ರೀ ಫೌಂಡೇಷನ್ ಆರ್ಗ್ಯಾನಿಕ್ ಅರಮನೆ, ನಿರ್ಮಲ ತುಂಗಭದ್ರಾ ಅಭಿಯಾನದಡಿ ವಿಷಮುಕ್ತ ಪುಣ್ಯಸ್ನಾನಕ್ಕಾಗಿ ಗುರುವಾರ ಕೂಡಲಸಂಗಮದಲ್ಲಿ 1 ಲಕ್ಷ ಕಡಲೆ ಹಿಟ್ಟಿನ ಸಣ್ಣ ಪ್ಯಾಕೆಟ್ ಗಳನ್ನು ಜನರಿಗೆ ವಿತರಿಸಿ, ವಿಷಮುಕ್ತ ಪುಣ್ಯಸ್ನಾನ ಅಭಿಯಾನ ನಡೆಸಲಾಯಿತು.
ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ, ಸ್ವಚ್ಛತೆಯಲ್ಲಿ ದೇವರಿದ್ದಾನೆ. ಹೀಗಾಗಿ ಪುಣ್ಯಕ್ಷೇತ್ರಗಳ ಪಾವಿತ್ರತೆ ಕಾಪಾಡಲು ನದಿ ತೀರದಲ್ಲಿ ಕಡಲೆ ಹಿಟ್ಟಿನಿಂದ ಜನತೆ ಸ್ನಾನ ಮಾಡಲು ಸಲಹೆ ನೀಡಲಾಯಿತು. ಪುಣ್ಯಸ್ನಾನಕ್ಕಾಗಿ ಆಗಮಿಸುವ ಸಾರ್ವಜನಿಕರು ಶಾಂಪೂ, ಸಾಬೂನು ಹೆಚ್ಚು ಹೆಚ್ಚು ಬಳಸುತ್ತಾ ಜಲಮೂಲಗಳ ಪಾವಿತ್ರತೆ ಹಾಳು ಮಾಡುತ್ತಿರುವುದು ಸಲ್ಲದು. ಸ್ವಚ್ಛತೆಯಲ್ಲಿ ಭಗವಂತನನ್ನು ಕಾಣುವ ನಾವು ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಮಲೀನತೆಗೆ ಹಾಗೂ ನದಿ, ಹೊಳೆ, ಹಳ್ಳಕೊಳ್ಳಗಳಲ್ಲಿನ ಜಲಚರ ಜೀವಿಗಳ ಅವನತಿಗೆ ಕಾರಣವಾಗುತ್ತಿದ್ದೇವೆ. ಅದಕ್ಕಾಗಿ ವಿಷಮುಕ್ತ ಸ್ನಾನ ಮಾಡಿ, ಪುಣ್ಯಪ್ರಾಪ್ತಿ ಮಾಡಿಕೊಳ್ಳೋಣ ಎಂದರು.
ವರದಶ್ರೀ ಫೌಂಡೇಷನ್ ಆರ್ಗ್ಯಾನಿಕ್ ಅರಮನೆ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡೇರ ಮಾತನಾಡಿ, ಸಂಕ್ರಾಂತಿ ಹಬ್ಬದ ದಿನ ಫೌಂಡೇಷನ್ನಿಂದ ರಾಜ್ಯದಾದ್ಯಂತ ತೀರ್ಥಕ್ಷೇತ್ರಗಳಲ್ಲಿ ಸ್ನಾನ ಮಾಡುವ ಭಕ್ತಾಧಿಗಳಿಗೆ 25 ಲಕ್ಷದಷ್ಟು ಕಡಲೆ ಹಿಟ್ಟಿನ ಪಾಕೇಟಗಳನ್ನು ತಯಾರಿಸಿ, 12 ಸಾವಿರ ಕಾರ್ಯಕರ್ತರು ರಾಜ್ಯದ 305 ತೀರ್ಥಕ್ಷೇತ್ರಗಳಲ್ಲಿ ಜನರಿಗೆ ಉಚಿತವಾಗಿ ವಿತರಿಸಲಾಗಿದೆ ಎಂದರು.
ಕಾರ್ಯದರ್ಶಿ ಸಿದ್ದು ಸಿರಸಂಗಿ, ಮುತ್ತನಗೌಡ ಪಾಟೀಲ, ಮಂಜುಗೌಡ ಪಾಟೀಲ, ಅಡಿವೆಪ್ಪ ಮೆಣಸಿನಕಾಯಿ, ಭಾವನಾ ಮೋಟೆ, ಐಶ್ವರ್ಯ ಮೋಟೆ, ಎಲ್.ಎಂ. ಹಣಗಿ, ನಾರಾಯಣ ಮಾಡೊಳ್ಳಿ, ಶಂಕರಗೌಡ ಪಾಟೀಲ, ಮಹಾಂತೇಶ ಹಂಪಣ್ಣವರ, ಶರಣು ಘಾಟಗೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.