ಗದಗ: ಗ್ರಾಮೀಣ ಭಾಗದ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವಲ್ಲಿ ಸಹಕಾರಿ ಸಂಘಗಳ ಪಾತ್ರ ಮುಖ್ಯವಾಗಿದೆ ಎಂದು ಕರ್ನಾಟಕ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸೋಮರೆಡ್ಡಿ ಎಂ.ಗೋಕಾವಿ ಹೇಳಿದರು.
ಗದಗ ನಗರದ ಈಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಕರ್ನಾಟಕ ಸೌಹಾರ್ದ ಸಹಕಾರಿ ಸಂಘದ ಒಂಬತ್ತನೇ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.
‘ಕರ್ನಾಟಕ ಸಹಕಾರಿ ಸಂಘ ನಿಯಮಿತ ಗದಗ ಶಾಖೆಯು 9 ವರ್ಷಗಳಿಂದ ನಿರಂತರವಾಗಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತ ಬಂದಿದೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಗುಂಪು ಸಾಲವನ್ನು ನೀಡುವ ಮೂಲಕ ಆರ್ಥಿಕವಾಗಿ ನೆರವಾಗುತ್ತಾ ಬಂದಿದೆ. ಇದರಿಂದ ಮಹಿಳೆಯರು ಸಾಲ ಪಡೆದ ಹಣದಿಂದ ಸ್ವಂತ ಉದ್ಯೋಗ ಕೈಗೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಲ್ಲಿ ಸಂಘದ ಪಾತ್ರ ಮುಖ್ಯವಾಗಿದೆ’ ಎಂದು ತಿಳಿಸಿದರು.
‘2023-24ನೇ ಸಾಲಿನಲ್ಲಿ ₹13 ಕೋಟಿ ವಹಿವಾಟು ನಡೆಸಿದ್ದು, ₹4.12 ಲಕ್ಷ ಲಾಭ ಪಡೆದುಕೊಂಡಿದೆ. ಒಟ್ಟು 1,344 ಮಂದಿ ಸದ್ಯಸರನ್ನು ತಲುಪಿದ್ದು, ಬೆಳ್ಳಟ್ಟಿ, ಮುಂಡರಗಿ ಹಾಗೂ ಗದಗ ಒಟ್ಟು ಮೂರು ಶಾಖೆಗಳನ್ನು ಹೊಂದಿದೆ.
ವರದಿ ಸಾಲಿನಲ್ಲಿ ₹3.28 ಕೋಟಿ ಸಾಲ ಕೊಟ್ಟಿದ್ದು, ಶೇ 99ರಷ್ಟು ಮರುಪಾವತಿ ಹೊಂದಿದೆ’ ಎಂದು ತಿಳಿಸಿದರು.
ವಾರ್ಷಿಕವಾಗಿ ಬಂದ ಲಾಭಾಂಶದಲ್ಲಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸರ್ಕಾರಿ ಶಾಲೆಗಳಿಗೆ ಆರ್ಥಿಕವಾಗಿ ನೆರವು ಠೇವಣಿದಾರಿಗೆ, ಸಾಲ ಮರುಪಾವತಿದವರಿಗೆ ಶಾಖೆ ಸಿಬ್ಬಂದಿಗೆ ಹಾಗೂ ಮಹಿಳಾ ಗುಂಪಿನ ಸದಸ್ಯರಿಗೆಲ್ಲರಿಗೂ ಸನ್ಮಾನ ನೆರವೇರಿಸಲಾಯಿತು.
ಸಂಘದ ಉಪಾಧ್ಯಕ್ಷ ಮಹಾಂತಯ್ಯ ಕಲ್ಮಠ, ನಿರ್ದೇಶಕರಾದ ಸಿದ್ದಪ್ಪ ಕುರಿ, ವೀಣಾ ಹಂಚಿನಮನಿ, ಶಾಂತಾ ಕಲಾಲ್, ಶ್ವೇತಾ ಚವಡಿ, ಗೀತಾ ನಾಯಕ್, ರಾಘವೇಂದ್ರ ಉಳವಿ, ಹನುಮಂತಪ್ಪ ಆನ್ವೇರಿ, ಮಲ್ಲಿಕಾರ್ಜುನ್ ತಿಪ್ಪಾರೆಡ್ಡಿ, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಆರ್. ಹಂಚಿನಮನಿ, ಹನುಮಂತ ನಿಂಬನಾಯ್ಕರ್ ಸ್ವಾಗತಿಸಿದರು. ನಾರಾಯಣ ರಾಮೇನಹಳ್ಳಿ ನಿರೂಪಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.