ಗದಗ: ಡಿ.27ರಂದು ನಡೆಯುವ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರಗಳನ್ನು ವಾಪಸ್ ಪಡೆಯಲು ಶನಿವಾರ (ಡಿ.18) ಅಂತಿಮ ದಿನವಾಗಿತ್ತು. ಅದರಂತೆ, ಶನಿವಾರ 19 ಮಂದಿ ನಾಮಪತ್ರಗಳನ್ನು ಹಿಂಪಡೆದಿದ್ದು, ಅಂತಿಮವಾಗಿ 146 ಮಂದಿ ಚುನಾವಣಾ ಕಣದಲ್ಲಿ ಉಳಿದುಕೊಂಡಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದ ಡಿ.15ರಂದು 35 ವಾರ್ಡ್ಗಳಿಂದ ಒಟ್ಟು 206 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಡಿ.16ರಂದು ನಡೆದ ನಾಮಪತ್ರಗಳ ಪರಿಶೀಲನೆ ವೇಳೆ 34 ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ನಾಮಪತ್ರಗಳ ಪರಿಶೀಲನೆ ಬಳಿಕ 172 ನಾಮಪತ್ರಗಳು ಕ್ರಮಬದ್ಧವಾಗಿದ್ದವು. ನಾಮಪತ್ರ ಹಿಂಪಡೆಯಲು ಕೊನೆ ದಿನವಾದ ಶನಿವಾರದಂದು ಅನೇಕರು ಉಮೇದುವಾರಿಕೆ ಹಿಂಪಡೆದಿದ್ದರಿಂದ ಅಂತಿಮವಾಗಿ 146 ಮಂದಿ ಚುನಾವಣಾ ಕಣದಲ್ಲಿದ್ದಾರೆ.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಟಿಕೆಟ್ ಸಿಗದೇ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿದ್ದ ಕೆಲವರನ್ನು ನಾಮಪತ್ರ ಹಿಂಪಡೆಯುವಂತೆ ಮಾಡುವಲ್ಲಿ ಎರಡೂ ಪಕ್ಷಗಳ ಮುಖಂಡರು ಯಶಸ್ವಿಯಾಗಿದ್ದಾರೆ. ಆದರೆ, ಇದರ ನಡುವೆಯೂ ಕೆಲವರು ತಮ್ಮ ಉಮೇದುವಾರಿಕೆ ಉಳಿಸಿಕೊಂಡು ಕಣದಲ್ಲಿ ತೊಡೆ ತಟ್ಟಿರುವುದು ಆಯಾ ಪಕ್ಷಗಳ ಅಭ್ಯರ್ಥಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ನಾಮಪತ್ರ ವಾಪಸ್ ಪಡೆದವರು:
ಪ್ರಶಾಂತ ಗೋಕಾವಿ (ವಾರ್ಡ್ ನಂ.2), ಅಶೋಕ ಹೇಮಣ್ಣ ಮುಳಗುಂದ (ವಾರ್ಡ್ ನಂ.3), ನಂದಿನಿ ಮಂಜುನಾಥ ಮುಳಗುಂದ, ಓಂಕಾರೇಶ್ವರಿ ಗೋಕಾಕ (ವಾರ್ಡ್ ನಂ.6), ತಿಮ್ಮಯ್ಯ ಕೊಂಗತಿ (ವಾರ್ಡ್ ನಂ.7), ಇಮ್ತಿಯಾಜ್ಅಹ್ಮದ ರಜಾಕಸಾಬ್ ಮಾನ್ವಿ, ಮಹೇಶ ಗದುಗಿನ (ವಾರ್ಡ್ ನಂ.10), ಶ್ರೀಕಾಂತ ನಾಯರ (ವಾರ್ಡ್ ನಂ.13), ರಾಘವೇಂದ್ರ ಪರಾಪೂರ, ಲಕ್ಷ್ಮಣ ಹಳ್ಳಿಕೇರಿ (ವಾರ್ಡ್ ನಂ.16), ಅಬ್ದುಲ್ಖಾದರ ಜೈಲಾನಿ ಮಹ್ಮದ ಇಸ್ಮಾಯಿಲ್ ಕಮಾನಗಾರ (ವಾರ್ಡ್ ನಂ.18), ಶಿವಲಿಂಗಪ್ಪ ತುರಕಾನಿ (ವಾರ್ಡ್ ನಂ.21), ಫಾರೂಕ್ ಮುಲ್ಲಾ (ವಾರ್ಡ್ ನಂ.22), ಮಹ್ಮದ ಶಾಹೀದ್ ಮುಲ್ಲಾ
(ವಾರ್ಡ್ ನಂ.23), ರಂಗಪ್ಪ ಯರಗುಡಿ (ವಾರ್ಡ್ ನಂ.24), ರವಿ ಸಿದ್ಲಿಂಗ, ಪ್ರಫುಲ್ದಾಸ ಪುಣೇಕರ (ವಾರ್ಡ್ ನಂ.25), ಮಾಲನಬಿ ಫಕ್ರುದ್ದೀನ ಹೊಸಳ್ಳಿ (ವಾರ್ಡ್ ನಂ.27), ಸೀತಲ ಸೋಮಪ್ಪ ಲಮಾಣಿ (ವಾರ್ಡ್ ನಂ.34).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.