ಗದಗ: ಮಹಾತ್ಮ ಗಾಂಧೀಜಿ ಅವರು ಗದುಗಿಗೆ ಭೇಟಿ ನೀಡಿದ್ದ ವೇಳೆ ಬೆಟಗೇರಿಯಲ್ಲಿರುವ ನೇಕಾರರ ಓಣಿಗೂ ಬಂದಿದ್ದರು. ಆ ನೆನಪಿಗಾಗಿ ಅವರ ಮರಣಾನಂತರ ಚಿತಾಭಸ್ಮ ತಂದು, ಸ್ಮಾರಕ ನಿರ್ಮಿಸುವ ಕೆಲಸ ಆರಂಭಿಸಲಾಯಿತು.
ಆದರೆ ಅಧಿಕಾರಿಗಳು, ರಾಜಕಾರಣಿಗಳ ನಡುವೆ ಏರ್ಪಟ್ಟ ‘ನಾನಾ– ನೀನಾ’ ಎಂಬ ಮೇಲಾಟದಲ್ಲಿ ಆ ಕೆಲಸ ಅರ್ಧಕ್ಕೆ ನಿಂತು ಹೋಗಿದೆ. ಗಾಂಧಿ ಪ್ರತಿಮೆಯನ್ನು ನಗರಸಭೆಯಲ್ಲಿ ತಂದಿಟ್ಟು 10 ವರ್ಷಗಳು ಕಳೆದಿವೆ. ಅದನ್ನು ಪ್ರತಿಷ್ಠಾಪಿಸುವ ಗೊಡವೆಗೆ ಯಾರೂ ಹೋಗಿಲ್ಲ. ಬಾಪು ಇಲ್ಲಿ ಅನಾಥವಾಗಿದ್ದಾರೆ.
‘ಗಾಂಧಿ ಗುಡಿ ನೋಡಿದರೆ ಕರಳು ಕಿವುಚಿದಂತಾಗುತ್ತದೆ. ಗಾಂಧಿ ಪ್ರತಿಮೆ ಇನ್ನೂ ಪ್ರತಿಷ್ಠಾಪನೆ ಆಗಿಲ್ಲ. ಪುಟ್ಟದಾದ ಗಾಂಧಿ ಗುಡಿಯನ್ನು ಪೂರ್ಣಗೊಳಿಸಲು ಸ್ಥಳೀಯರು, ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಈವರೆಗೆ ಮನಸ್ಸು ಮಾಡದಿರುವುದು ವ್ಯವಸ್ಥೆಯ ದುರಂತ’ ಎನ್ನುತ್ತಾರೆ ಇಲ್ಲಿನ ಸ್ಥಳೀಯ ನಿವಾಸಿಗಳು.
ಗಾಂಧಿ ಗುಡಿ ಕಾಮಗಾರಿ ಅರ್ಧಕ್ಕೆ ನಿಂತು ದಶಕಗಳು ವರ್ಷಗಳಾಗಿವೆ. ಬೆಟಗೇರಿ ಜನರು, ಶಾಲಾ ಮಕ್ಕಳು ಮಾತ್ರ ಗಾಂಧಿ ಚಿತಾ ಭಸ್ಮಕ್ಕೆ ನಿತ್ಯವೂ ಪೂಜೆ ಸಲ್ಲಿಸುತ್ತಾರೆ. ಅಲ್ಲಿರುವ ಕಲ್ಲಿಗೆ ನಮಸ್ಕರಿಸಿ ಮುಂದಕ್ಕೆ ಹೋಗುತ್ತಾರೆ. ಗಾಂಧಿಜಿ ತತ್ವ ಸಿದ್ಧಾಂತಗಳು ಉಳಿಯಬೇಕು, ಮುಂದಿನ ಪಿಳಿಗೆಗೆ ತಿಳಿಯಬೇಕು ಅಂದರೆ ಶೀಘ್ರವಾಗಿ ಈ ಗುಡಿಯ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.