ADVERTISEMENT

ನರೇಗಲ್ | ಶಾಲೆ ಸಮೀಪ ಕಸದ ರಾಶಿ: ದಾರಿಯುದ್ಧಕ್ಕೂ ದುರ್ವಾಸನೆ

ವಿಲೇವಾರಿ ಘಟಕಕ್ಕೆ ರವಾನಿಸದೆ ಸೋಮಾರಿತನ ಮೆರೆದ ಸಿಬ್ಬಂದಿ

ಪ್ರಜಾವಾಣಿ ವಿಶೇಷ
Published 28 ಜುಲೈ 2025, 4:14 IST
Last Updated 28 ಜುಲೈ 2025, 4:14 IST
ನರೇಗಲ್‌ ಪಟ್ಟಣದ ಕೆಎಸ್‌ಎಸ್‌ ಶಾಲೆಯ ಸಮೀಪದ ಬಯಲು ಜಾಗದಲ್ಲಿ ಪಟ್ಟಣ ಪಂಚಾಯಿತಿಯವರು ಹಾಕಿರುವ ಕಸದ ರಾಶಿ
ನರೇಗಲ್‌ ಪಟ್ಟಣದ ಕೆಎಸ್‌ಎಸ್‌ ಶಾಲೆಯ ಸಮೀಪದ ಬಯಲು ಜಾಗದಲ್ಲಿ ಪಟ್ಟಣ ಪಂಚಾಯಿತಿಯವರು ಹಾಕಿರುವ ಕಸದ ರಾಶಿ   

ನರೇಗಲ್: ಪಟ್ಟಣದ ಕನಕ‌ದಾಸ ಶಿಕ್ಷಣ ಸಮಿತಿ ಶಾಲಾ ಕಾಲೇಜಿನ ಸಮೀಪದಲ್ಲಿ ಗಜೇಂದ್ರಗಡ ಮಾರ್ಗದ ಮಳ್ಳಿಯವರ ತಗ್ಗಿನ ಪಕ್ಕದಲ್ಲಿ, ಇಲ್ಲಿನ ಪಟ್ಟಣ ಪಂಚಾಯಿತಿ ಕಾರ್ಮಿಕರು ಅಂದಾಜು 600 ಟನ್‌ ಕಸ ಹಾಕಿದ್ದಾರೆ. ಇದರಿಂದ ಶಾಲಾ ಮಕ್ಕಳಿಗೆ, ಪ್ರಯಾಣಿಕರಿಗೆ, ರೈತರಿಗೆ ತೊಂದರೆಯಾಗಿದೆ. ಕಸದ ರಾಶಿಯ ದುರ್ವಾಸನೆಯು ಅರ್ಧ ಕಿ.ಮೀ. ದೂರದವರೆಗೆ ಹರಡಿದೆ. ಅದರಲ್ಲಿನ ಪ್ಲಾಸ್ಟಿಕ್‌ ಹಾಳೆಗಳು, ಕಸಕಡ್ಡಿಗಳು ಎಲ್ಲೆಂದರಲ್ಲಿ ಚದುರಿ ಹೋಗಿದ್ದು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ.

ನರೇಗಲ್ ಪಟ್ಟಣದ 17 ವಾರ್ಡ್‌ಗಳಿಂದ ನಿತ್ಯ ಅಂದಾಜು 4.5 ಟನ್‌ನಂತೆ ಸಂಗ್ರಹವಾಗುವ ಘನತ್ಯಾಜ್ಯ, ಒಣ ಕಸ ಮತ್ತು ಹಸಿ ಕಸ ಬೇರ್ಪಡಿಸದೆ ಎಲ್ಲವನ್ನೂ ಒಂದೆಡೆ ಸೇರಿಸಿ ಖಾಲಿ ಜಾಗದಲ್ಲಿ ಗುಡ್ಡೆ ಹಾಕಿದ್ದಾರೆ. ಹಾಗಾಗಿ ಈ ಸ್ಥಳವು ತ್ಯಾಜ್ಯ ಸಂಗ್ರಹ ಜಾಗವಾಗಿ ಪರಿಣಮಿಸಿದೆ.

ಮಾರುಕಟ್ಟೆಯಿಂದ, ವಿವಿಧ ಅಂಗಡಿ, ಹೋಟೆಲ್‌ಗಳಿಂದ ಉತ್ಪತ್ತಿಯಾಗುವ ಹಸಿ ಕಸ, ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸಿ ಅದನ್ನು ಕೋಟ್ಯಂತರ ರೂಪಾಯಿ ಅನುದಾನದಲ್ಲಿ ದ್ಯಾಂಪುರ ಸಮೀಪದ ಹೊಲವೊಂದರಲ್ಲಿ ನಿರ್ಮಿಸಲಾಗಿರುವ ಕಸ ವಿಲೇವಾರಿ ಘಟಕದಲ್ಲಿ ಹಾಕಬೇಕು. ಅದಕ್ಕಾಗಿ ಪಟ್ಟಣ ಪಂಚಾಯಿತಿಯಲ್ಲಿ ಟ್ರ್ಯಾಕ್ಟರ್‌, ಟಾಟಾಏಸ್‌ ಸೇರಿದಂತೆ ವಿವಿಧ ವಾಹನಗಳನ್ನು ಖರೀದಿ ಮಾಡಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಆದರೆ, ದೂರಹೋಗಿ ನಿಗದಿತ ಸ್ಥಳದಲ್ಲಿ ಕಸ ಹಾಕಲು ಇಚ್ಛಿಸದೇ ಸೋಮಾರಿತನದಿಂದ ಪಟ್ಟಣದ ಪಕ್ಕದ ಖಾಲಿ ಜಾಗದಲ್ಲಿ ಹಾಕುತ್ತಿದ್ದಾರೆ. ಇದರಿಂದ ಪ್ರತಿವರ್ಷ ಕಸ ವಿಲೇವಾರಿ ಘಟಕಕ್ಕೆ ಬರುವ ಲಕ್ಷಾಂತರ ರೂಪಾಯಿ ಅನುದಾನ ಉಪಯೋಗಕ್ಕೆ ಬಾರದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಕಸ ವಿಲೇವಾರಿ ಘಟಕದಲ್ಲಿರುವ ಕಸ ವಿಂಗಡಿಸುವ ಸ್ಕ್ರೀನಿಂಗ್‌ ಯಂತ್ರ ಬಳಕೆ ಮಾಡದೆ ಹಾಗೆಯೇ ಇಡಲಾಗಿದೆ. ವೈಜ್ಞಾನಿಕವಾಗಿ ಕಸ ಬೇರ್ಪಡಿಸುವ ಉದ್ದೇಶದಿಂದ ಅಂದಾಜು ₹8 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಇಡಲಾಗಿದೆ. ಅದರ ಸಮೀಪ ಹೋಗಲು ಭಯ ಪಡುವಷ್ಟು ಕಸ ಬೆಳೆದಿದೆ. ವಿಲೇವಾರಿ ಘಟಕಕ್ಕೆ ಬಂದು ಸಂಗ್ರಹವಾಗುವ ಕಸದಲ್ಲಿ ತರಕಾರಿ, ಕೃಷಿ ತ್ಯಾಜ್ಯದಂತಹ ವಸ್ತುಗಳನ್ನು ಬೇರ್ಪಡಿಸಿ ಕೊಳೆಯಿಸಿ ಗೊಬ್ಬರ ಉತ್ಪಾದನೆಗಾಗಿ ಅಂದಾಜು ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡವು ಒಂದು ದಿನವೂ ಉಪಯೋಗವಾಗಿಲ್ಲ. ಇದರಲ್ಲಿ ಆಯತಾಕಾರದ 28 ಸಣ್ಣ ವರ್ಮಿ ಕಾಂಪೋಸ್ಟ್‌ ಸಂಗ್ರಹಕಗಳಿವೆ. ಅದರಲ್ಲಿ ಎರೆಹುಳು ಬಿಟ್ಟು ಸಂಸ್ಕರಣೆ ಮಾಡಿ ಇಂದಿಗೂ ಗೊಬ್ಬರ ಸಿದ್ಧಪಡಿಸಿಲ್ಲ. ಈಗಾಗಲೇ ಅನೇಕ ಕಡೆಗಳಲ್ಲಿ ಬಿರುಕು ಬಿಟ್ಟಿವೆ ಹಾಗೂ ಇತರೆ ವಸ್ತುಗಳು ಬಂದು ಸೇರಿಕೊಂಡಿವೆ. ಯಾಕೆಂದರೆ ಎಲ್ಲಾ ರೀತಿಯ ಕಸವನ್ನು ಪಟ್ಟಣದ ಸಮೀಪದ ಬಯಲಿನಲ್ಲಿ ಬೇಕಾಬಿಟ್ಟಿ ಹಾಕುತ್ತಿದ್ದಾರೆ. ಇದರಿಂದಾಗಿ ಸರ್ಕಾರದ ಹಣ ಪೋಲಾಗುತ್ತಿದೆ ಎಂದು ಜನರು ಆರೋಪಿಸಿದ್ದಾರೆ.

ತರಕಾರಿ ಕಸ, ಹೋಟೆಲ್‌ನ ಮುಸುರೆ, ಪ್ಲಾಸ್ಟಿಕ್‌, ಬಟ್ಟೆ, ಕಟ್ಟಿಗೆ, ಮಣ್ಣು, ಇಟ್ಟಿಗೆ, ಚರಂಡಿ ಗಲೀಜು, ಸೇರಿದಂತೆ ನಾಯಿ, ಹಂದಿ, ದನಗಳಂತಹ ಸತ್ತ ಪ್ರಾಣಿಗಳು, ಕುರಿ, ಕೋಳಿ ತ್ಯಾಜ್ಯವನ್ನು ಇಲ್ಲಿ ಎಸೆಯುತ್ತಿದ್ದಾರೆ. ಇದನ್ನು ಬೀದಿ ನಾಯಿಗಳು, ಮಾಂಸಾಹಾರಿ ಪ್ರಾಣಿಗಳು ಎಳೆದಾಡುತ್ತಿವೆ. ಸದ್ಯ ಈ ಸ್ಥಳವು ರೋಗಗಳನ್ನು ಉತ್ಪತ್ತಿ ಮಾಡುವ ಕಾರ್ಖಾನೆಯಾಗಿ ಪರಿವರ್ತನೆಯಾಗಿದೆ. ಗಾಳಿ ಯಾವ ಕಡೆಗೆ ಬೀಸುತ್ತದೆಯೋ ಆ ಕಡೆಗೆ ಗಬ್ಬುನಾತ ಬರುತ್ತದೆ. ಸಮೀಪದ ಹೊಲಗಳಲ್ಲಿ ಕೆಲವೊಮ್ಮೆ ಕೆಲಸ ಮಾಡಲು ಆಗುವುದಿಲ್ಲ. ಶಾಲೆಯಲ್ಲಿ ಮೂಗು ಮುಚ್ಚಿಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು, ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ: ರಾಜ್ಯಕ್ಕೆ 167ನೇ ಹಾಗೂ ಜಿಲ್ಲೆಗೆ ಕೊನೆ ಸ್ಥಾನ

ಈಚೆಗೆ ಪ್ರಕಟವಾದ 2024ರ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ನರೇಗಲ್‌ ಪಟ್ಟಣವು 4264 ಅಂಕಗಳನ್ನು ಪಡೆದು ರಾಜ್ಯಕ್ಕೆ 167ನೇ ಹಾಗೂ ಜಿಲ್ಲೆಗೆ ಕೊನೆ ಸ್ಥಾನದಲ್ಲಿದೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿರುತ್ತದೆ. ಚರಂಡಿಗಳ ಸ್ವಚ್ಛತೆ ಇಲ್ಲವಾಗಿದೆ. ಜನಪ್ರತಿನಿಧಿಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ವಚ್ಛತೆ ಮಾಯವಾಗಿದೆ. ಸಿಬ್ಬಂದಿ ಹಾಗೂ ಕಾರ್ಮಿಕರು ಕೇವಲ ಮುಖ್ಯರಸ್ತೆ ಹಾಗೂ ಪ್ರಭಾವಿ ಜನರಿರುವ ಓಣಿಯಲ್ಲಿ ಮಾತ್ರ ಸ್ವಚ್ಛತೆಗೆ ಮಹತ್ವ ಕೊಡುತ್ತಿರುವ ಕಾರಣ ಸಮೀಕ್ಷೆಯಲ್ಲಿ ಕಡೆಯ ಸ್ಥಾನಗಳನ್ನು ಪಡೆಯುತ್ತಿದೆ ಎನ್ನುತ್ತಾರೆ ಸ್ಥಳೀಯರು.

ಇತರ ಪಟ್ಟಣ ಪಂಚಾಯಿತಿಗಳಿಗೆ ಭೇಟಿ; ಅನುಷ್ಠಾನ ಶೂನ್ಯ

ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಮಾಹಿತಿ ಶಿಕ್ಷಣ ಸಂವಹನ ಮತ್ತು ಸಾಮರ್ಥ್ಯಾಭಿವೃದ್ಧಿ ಅನುಷ್ಠಾನಕ್ಕಾಗಿ ತ್ಯಾಜ್ಯ ನಿರ್ವಹಣೆ ಕುರಿತು ತಿಳಿದುಕೊಂಡು ಬರಲು ರಾಜ್ಯದ ವಿವಿಧ ಪಟ್ಟಣ ಪಂಚಾಯಿತಿ ಪುರಸಭೆ ನಗರಸಭೆ ವಿಲೇವಾರಿ ಘಟಕಗಳಿಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಸದಸ್ಯರು ಲಕ್ಷಾಂತರ ರೂಪಾಯಿ ಖರ್ಚಿನಲ್ಲಿ ಭೇಟಿ ನೀಡಿ ಅಲ್ಲಿ ತರಬೇತಿ ಪಡೆದುಕೊಂಡು ಬರುವುದು ಸಾಮಾನ್ಯವಾಗಿದೆ. ಜುಲೈ 11ರಿಂದ 13ರ ವರೆಗೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲ್ಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ಬಂದಿದ್ದಾರೆ. ಆದರೂ ಯಾವುದೇ ಬದಲಾವಣೆಯಾಗಿಲ್ಲ. ಹಾಗಾಗಿ ಎಷ್ಟೇ ಖರ್ಚು ಮಾಡಿದರು ಸಹ ಅದೊಂದು ಪ್ರವಾಸವಾಗಿರುತ್ತದೆಯೇ ಹೊರತು ಅನುಷ್ಠಾನ ಶೂನ್ಯವಾಗಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ನರೇಗಲ್‌ ಪಟ್ಟಣದ ಕೆಎಸ್‌ಎಸ್‌ ಶಾಲೆಯ ಸಮೀಪದ ಬಯಲು ಜಾಗದಲ್ಲಿ ಪಟ್ಟಣ ಪಂಚಾಯಿತಿಯವರು ಹಾಕಿರುವ ಕಸದ ರಾಶಿ
ನರೇಗಲ್‌ ಪಟ್ಟಣದ ಕೆಎಸ್‌ಎಸ್‌ ಶಾಲೆಯ ಸಮೀಪದ ಬಯಲು ಜಾಗದಲ್ಲಿ ಪಟ್ಟಣ ಪಂಚಾಯಿತಿಯವರು ಹಾಕಿರುವ ಕಸದ ರಾಶಿ (ಹಿಂಬದಿ ಚಿತ್ರ)
ನರೇಗಲ್‌ ಪಟ್ಟಣದ ಕೆಎಸ್‌ಎಸ್‌ ಶಾಲೆಯ ಸಮೀಪದ ಬಯಲು ಜಾಗದಲ್ಲಿ ಪಟ್ಟಣ ಪಂಚಾಯಿತಿಯವರು ಹಾಕಿರುವ ಕಸದ ರಾಶಿ (ಹಿಂಬದಿ ಚಿತ್ರ)
ಬಯಲು ಜಾಗದಲ್ಲಿ ಹಾಕಿರುವ ಕಸವನ್ನು ಅಲ್ಲಿನ ಪಕ್ಕದ ತಗ್ಗಿನಲ್ಲಿ ಹಾಕಿ ಮುಚ್ಚುವಂತೆ ಹಾಗೂ ಮತ್ತೆ ಹೀಗೆ ಎಲ್ಲೆಂದರಲ್ಲಿ ಕಸ ಹಾಕದಂತೆ ತಿಳಿಸಲಾಗುತ್ತದೆ ಪಂಚಾಯಿತಿ
-ಮಹೇಶ ನಿಡಶೇಶಿ, ಮುಖ್ಯಾಧಿಕಾರಿ ನರೇಗಲ್‌ ಪಟ್ಟಣ
ಮುಂಡರಗಿಯಿಂದ ನರೇಗಲ್‌ಗೆ ಬರಲು ಬಹಳ ಸಮಯ ಬೇಕಾಗುತ್ತದೆ. ಅಷ್ಟರಲ್ಲಿ ಕಸವಿಲೇವಾರಿ ಮುಗಿದಿರುತ್ತದೆ. ಆದರೆ ಸರಿಯಾದ ನಿರ್ವಹಣೆಗೆ ಕಾಯಂ ಆರೋಗ್ಯ ನಿರೀಕ್ಷಕರ ಅವಶ್ಯಕತೆ ಇದೆ.
-ಎಂ.ಎಸ್.‌ಮ್ಯಾಗೇರಿ ಆರೋಗ್ಯ ನಿರೀಕ್ಷಕ ನರೇಗಲ್‌ ಪಟ್ಟಣ ಪಂಚಾಯಿತಿ
ನರೇಗಲ್‌ ಪಟ್ಟಣದಲ್ಲಿ ಕಸ ವಿಲೇವಾರಿ ಘಟಕ ಇದ್ದೂ ಇಲ್ಲದಂತಾಗಿದೆ. ಯಾಕೆಂದರೆ ಪಟ್ಟಣ ಪಂಚಾಯಿತಿಯವರು ಎಲ್ಲೆಂದರಲ್ಲಿ ಕಸ ಹಾಕುತ್ತಾರೆ. ಇವರಿಗೆ ಕಡಿವಾಣ ಹಾಕುವರು ಇಲ್ಲದಂತಾಗಿದೆ.
-ಸೋಮಪ್ಪ ಹನಮಸಾಗರ ಕಾರ್ಮಿಕ ಮುಖಂಡ
ಗ್ರಾಮದ ಜನರ ಆರೋಗ್ಯವನ್ನು ಕಾಪಾಡಬೇಕಿದ್ದ ಪಟ್ಟಣ ಪಂಚಾಯಿತಿಯವರೇ ಆರೋಗ್ಯ ಹಾಳು ಮಾಡಲು ನಿಂತಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕ್ರಮ ಜರುಗಿಸಬೇಕು
-ರಾಜೇಂದ್ರ ಜಕ್ಕಲಿ ಹಿರಿಯರು
ಪಕ್ಕದಲ್ಲೇ ಶಾಲೆಯಿದೆ ಎನ್ನುವ ಸಾಮಾನ್ಯಜ್ಞಾನವೂ ಇಲ್ಲದಂತೆ ಕಸದ ರಾಶಿ ಹಾಕಿರುವುದು ಬೇಸರ ತಂದಿದೆ. ಸ್ವಚ್ಛತೆಗೆ ಮುಂದಾಗದ ಪಟ್ಟಣ ಪಂಚಾಯಿತಿಯವರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗುವುದು.
-ಸಂತೋಷ ಮಣ್ಣೋಡ್ಡರ ಕಾರ್ಮಿಕರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.