
ಗದಗ: ‘ಕರ್ನಾಟಕ ರಾಜ್ಯೋತ್ಸವವು ಕೇವಲ ಒಂದು ಆಚರಣೆ ಅಲ್ಲ, ಇದು ಕನ್ನಡ ನಾಡಿನ ಏಕತೆ ಮತ್ತು ಗುರುತಿನ ಹಬ್ಬವಾಗಿದೆ’ ಎಂದು ಪ್ರಭಾರ ಕುಲಪತಿ ಪ್ರೊ. ಸುರೇಶ ವಿ. ನಾಡಗೌಡರ ಹೇಳಿದರು.
ನಗರದ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ರಾಷ್ಟ್ರೀಯ ಏಕೀಕರಣದ ಭಾಗವಾಗಿ ನಡೆದ ರಾಜ್ಯಗಳ ಭಾಷಾವಾರು ಪುನರ್ರಚನೆ ಕನ್ನಡಿಗರಿಗೆ ತಮ್ಮ ನಾಡಿನ ಹೆಮ್ಮೆ ಮತ್ತು ಭಾಷೆಯ ಗೌರವವನ್ನು ಮರಳಿ ನೀಡಿತು. ಕನ್ನಡ ಭಾಷೆ ಸಾಹಿತ್ಯ, ತತ್ವಜ್ಞಾನ ಮತ್ತು ಕಲೆಗಳ ಅಪಾರ ಸಂಪತ್ತನ್ನು ಹೊಂದಿದೆ. ಈ ಪರಂಪರೆಯನ್ನು ಕಾಪಾಡಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮ ಕರ್ತವ್ಯ. ಯುವಕರು ಕನ್ನಡದ ಆತ್ಮವನ್ನು ಉಳಿಸಿಕೊಂಡು ರಾಷ್ಟ್ರಾಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯಬೇಕು’ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಚಂದ್ರಪ್ಪ ಬಾರಂಗಿ, ‘ರಾಜ್ಯೋತ್ಸವವು ಕನ್ನಡಿಗರ ಸಂಸ್ಕೃತಿ, ಗೌರವ ಮತ್ತು ಸಹೋದರತ್ವದ ಪ್ರತೀಕವಾಗಿದೆ’ ಎಂದರು.
ಪ್ರೊ. ಅಭಯ್ ಕುಮಾರ್ ಗಸ್ತಿ, ಎಂ.ಬಿ. ಚನ್ನಪ್ಪಗೌಡರ ಉಪಸ್ಥಿತರಿದ್ದರು. ಪ್ರೊ. ಸಂಜಯ್ ಹಾರೋಬಿಡಿ ಸ್ವಾಗತಿಸಿದರು.
ವಿಶ್ವವಿದ್ಯಾಲಯದ ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.