ಲಕ್ಷ್ಮೇಶ್ವರ: ತಾಲ್ಲೂಕಿನಾದ್ಯಂತ ಕಳೆದ ಹತ್ತು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಬುಧವಾರವೂ ಕೂಡ ಬೆಳಗ್ಗೆಯಿಂದಲೇ ಮಳೆ ಸುರಿಯಲು ಆರಂಭವಾಗಿತ್ತು. ಸತತ ಮಳೆಗೆ ತಂಪು ವಾತಾವರಣ ಹೆಚ್ಚಾಗುತ್ತಿದ್ದು, ಜನರಲ್ಲಿ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಮಕ್ಕಳು ಮತ್ತು ವೃದ್ಧರು ತಣ್ಣನೆ ವಾತಾವರಣಕ್ಕೆ ಹೈರಾಣಾಗುತ್ತಿದ್ದಾರೆ.
ಜಿಟಿಜಿಟಿ ಮಳೆಗೆ ತಾಲ್ಲೂಕಿನ ಬಾಲೆಹೊಸೂರು ಗ್ರಾಮದಲ್ಲಿ ಈವರೆಗೆ 13 ಮನೆಗಳು ಭಾಗಶಃ ಬಿದ್ದಿವೆ. ಗ್ರಾಮದ ರೇಖಾ ರಾಮಪ್ಪ ಪಶುಪತಿಹಾಳ, ಶಾರವ್ವ ಪ್ಯಾಟಿ,ಹಾಲಪ್ಪ ಬಡ್ನಿ, ಶಿವಪ್ಪ ನಾವಿ, ದೇವಪ್ಪ ಯತ್ನಳ್ಳಿ, ಸುರೇಶ ಯತ್ನಳ್ಳಿ ಮತ್ತಿತರರ ಮನೆಗಳು ಕುಸಿದು ಬಿದ್ದಿವೆ. ಇನ್ನು ಕೆಲ ಮನೆಗಳು ನಿರಂತರ ಮಳೆಗೆ ಸೋರುತ್ತಿದ್ದು, ಜನರು ಮನೆಯಲ್ಲಿನ ನೀರನ್ನು ಹೊರಹಾಕುವಲ್ಲಿ ನಿರತರಾಗಿದ್ದಾರೆ.
‘ಉತ್ತಮ ಮಳೆಯಾಗಿದ್ದರೆ ಇಷ್ಟೊತ್ತಿಗೆ 34 ಸಾವಿರ ಹೆಕ್ಟೇರ್ನಲ್ಲಿ ಮುಂಗಾರು ಬಿತ್ತನೆ ನಡೆಯುತ್ತಿತ್ತು. ಆದರೆ, ಸಮಯಕ್ಕೆ ಸರಿಯಾಗಿ ಮಳೆ ಆಗದ ಕಾರಣ ಕೇವಲ ಶೇ 50ರಷ್ಟು ಬಿತ್ತನೆ ಆಗಿದೆ’ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಚಂದ್ರಶೇಖರ ನರಸಮ್ಮನವರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.