ADVERTISEMENT

ಲಕ್ಷ್ಮೇಶ್ವರ| ಮೆಣಸಿನಕಾಯಿ ಬೆಳೆಗೆ ಎಲೆ ಮುಟುರು ರೋಗ: ರೈತನಿಗೆ ತಪ್ಪದ ಸಂಕಷ್ಟ

ನಾಗರಾಜ ಎಸ್‌.ಹಣಗಿ
Published 25 ನವೆಂಬರ್ 2025, 4:31 IST
Last Updated 25 ನವೆಂಬರ್ 2025, 4:31 IST
ಲಕ್ಷ್ಮೇಶ್ವರ ತಾಲ್ಲೂಕಿನ ರಾಮಗೇರಿ ಗ್ರಾಮದ ಹೊಲವೊಂದರಲ್ಲಿ ಬೆಳೆದಿರುವ ಮೆಣಸಿನಕಾಯಿ ಗಿಡಗಳಿಗೆ ಎಲೆ ಮುಟುರು ರೋಗ ಬಂದ ಹಿನ್ನೆಲೆಯಲ್ಲಿ ಕಾಯಿ ಬಿಟ್ಟಿಲ್ಲ
ಲಕ್ಷ್ಮೇಶ್ವರ ತಾಲ್ಲೂಕಿನ ರಾಮಗೇರಿ ಗ್ರಾಮದ ಹೊಲವೊಂದರಲ್ಲಿ ಬೆಳೆದಿರುವ ಮೆಣಸಿನಕಾಯಿ ಗಿಡಗಳಿಗೆ ಎಲೆ ಮುಟುರು ರೋಗ ಬಂದ ಹಿನ್ನೆಲೆಯಲ್ಲಿ ಕಾಯಿ ಬಿಟ್ಟಿಲ್ಲ   

ಲಕ್ಷ್ಮೇಶ್ವರ: ಒಂದೆಡೆ ಅತಿವೃಷ್ಟಿಯಿಂದಾಗಿ ಮುಂಗಾರು ಹಂಗಾಮಿನ ಹೆಸರು, ಶೇಂಗಾ, ಈರುಳ್ಳಿ, ಬೆಳ್ಳುಳ್ಳಿ ಬೆಳೆಗಳು ಸಂಪೂರ್ಣ ಹಾಳಾಗಿವೆ. ಮತ್ತೊಂದೆಡೆ ಮೆಕ್ಕೆಜೋಳ ಮಾರಾಟಕ್ಕೆ ಬಂದಿದ್ದರೂ ಕೂಡ ಅದಕ್ಕೂ ಬೆಂಬಲ ಬೆಲೆ ಸಿಗದ ಕಾರಣ ರೈತರು ಆತಂಕದಲ್ಲಿದ್ದಾರೆ. ಇದೀಗ ಕೆಂಪು ಬಂಗಾರ ಕರೆಯುವ ಮೆಣಸಿನಕಾಯಿ ಬೆಳೆಗೆ ಎಲೆ ಮುಟುರು ರೋಗ ಕಾಣಿಸಿಕೊಂಡಿದ್ದು, ಇಳುವರಿ ಕುಂಠಿತಗೊಳ್ಳುವ ಭಯ ರೈತರಿಗೆ ಎದುರಾಗಿದೆ.

ಮೆಣಸಿನಕಾಯಿ ಸೇರಿದಂತೆ ಉಳಿದ ಬೆಳೆಗಳನ್ನು ಬೆಳೆಯಲು ಹೆಚ್ಚಿನ ಖರ್ಚು ಬರುತ್ತದೆ. ಆದರೆ ಮೆಕ್ಕೆಜೋಳ ಬೆಳೆಯಲು ಖರ್ಚು ಕಡಿಮೆ ಎಂಬ ಕಾರಣಕ್ಕೆ ಈ ಬಾರಿ ಶೇ 80ರಷ್ಟು ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಹೀಗಾಗಿ ಬಂದಷ್ಟು ಮೆಣಸಿನಕಾಯಿಗೆ ಉತ್ತಮ ದರ ಸಿಗಬಹುದು ಎಂಬುದು ರೈತರ ಲೆಕ್ಕಾಚಾರವಾಗಿದೆ.

ಪ್ರಮುಖ ವಾಣಿಜ್ಯ ಬೆಳೆಯಾದ ಮೆಣಸಿನಕಾಯಿಗೆ ಈ ಬಾರಿ ರೋಗಬಾಧೆ ಕಾಣಿಸಿಕೊಂಡಿದ್ದು ಇಳುವರಿಯಲ್ಲಿ ಭಾರಿ ಕುಸಿತ ಆಗುವ ಸಂಭವ ಇದೆ. ಮಳೆ ಸುರಿದು ವಾತಾವರಣ ಅನುಕೂಲಕರವಾಗಿದ್ದರೆ ಉತ್ತಮ ಇಳುವರಿ ಬಂದು ರೈತನ ದೊಡ್ಡ ಖರ್ಚು ವೆಚ್ಚಗಳನ್ನು ನೀಗಿಸುತ್ತದೆ. ಈ ಬೆಳೆಯನ್ನೇ ನೆಚ್ಚಿ ಈ ಭಾಗದ ರೈತರು ಮಕ್ಕಳ ಮದುವೆ ಮಾಡುವ, ಮನೆ ಕಟ್ಟುವ ಕನಸನ್ನು ಇಟ್ಟುಕೊಂಡಿರುತ್ತಾರೆ. ಆದರೆ, ಈ ಬಾರಿ ಅವರ ಆಸೆ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ.

ADVERTISEMENT

ಲಕ್ಷ್ಮೇಶ್ವರ ಸೇರಿದಂತೆ ಬಸಾಪುರ, ರಾಮಗಿರಿ, ಮಾಡಳ್ಳಿ, ಯತ್ನಳ್ಳಿ, ಯಳವತ್ತಿ, ಮಾಗಡಿ, ಗೊಜನೂರು, ಬಟ್ಟೂರು, ಪುಟಗಾಂಬಡ್ನಿ, ಅಡರಕಟ್ಟಿ, ದೊಡ್ಡೂರು, ಗೋವನಾಳ, ಶಿಗ್ಲಿಗಳ ನೂರಾರು ಎಕರೆ ಭೂಮಿಯಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತದೆ. ಉತ್ತಮ ತೇವಾಂಶದ ಇದ್ದರೂ ಎಲೆ ಮುಟುರು ರೋಗ ಸೇರಿದಂತೆ ವಿವಿಧ ರೋಗಗಳು ಕಾಣಿಸಿಕೊಂಡ ಪರಿಣಾಮ ಈ ಬೆಳೆಯೂ ರೈತನ ಕೈ ಹತ್ತುವುದು ಖಾತರಿ ಇಲ್ಲ.

ರೋಗದ ಕಾರಣ ಗಿಡಗಳು ಬೆಳೆದಿದ್ದರೂ ಅವುಗಳಲ್ಲಿ ಕಾಯಿ ಬಿಟ್ಟಿಲ್ಲ. ಕೆಲವು ಕಡೆ ಇಡೀ ಹೊಲದಲ್ಲಿ ಒಂದಿಷ್ಟೂ ಕಾಯಿ ಕಾಣುತ್ತಿಲ್ಲ. ವರ್ಷವಿಡೀ ದುಡಿದರೂ ರೈತನ ಗಂಜಿಗೆ ಸಾಲದಷ್ಟು ಉತ್ಪನ್ನ ಬಂದಿದ್ದು ಅವರನ್ನು ಕಂಗಾಲಾಗಿಸಿದೆ.

ಮೆಣಸಿನಕಾಯಿ ನೆಚ್ಚಿಕೊಂಡು ರೈತರು ಮನೆಯಲ್ಲಿ ಸಮಾರಂಭ ಹಮ್ಮಿಕೊಳ್ಳುತ್ತಾರೆ. ಆದರೆ ಈ ವರ್ಷ ಹೆಚ್ಚಾಗಿ ಮೆಣಸಿನಕಾಯಿ ಬೆಳೆದಿಲ್ಲ. ಅದಲ್ಲದೆ ಬೆಳೆದಷ್ಟು ಗಿಡಗಳಿಗೆ ರೋಗ ಬಂದಿದೆ
ಚೆನ್ನಪ್ಪ ಷಣ್ಮುಖಿ ರೈತ
ಮಳಿ ಆಗಿ ಚಲೋ ವಾತಾವರಣ ಇದ್ರ ಎಕರೇಕ ಐದಾರು ಕ್ವಿಂಟಲ್ ಇಳುವರಿ ಬರತೈತ್ರಿ. ಆದರ ಈ ವರ್ಷ ಭಾಳಷ್ಟು ಕಡಿಮೆ ಇಳುವರಿ ಬರಬಹುದರೀ
ಪರಶುರಾಮ ಲಕ್ಕಣ್ಣವರ ರಾಮಗೇರಿ ರೈತ

ಇದೇ ದರ ಮುಂದುವರಿಯುವ ಸಾಧ್ಯತೆ

‘ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಬೆಳೆದ ಮೆಣಸಿನಕಾಯಿ ಹಾವೇರಿ ಜಿಲ್ಲೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟ ಆಗುತ್ತದೆ. ಸದ್ಯ ಉತ್ತಮ ಗುಣಮಟ್ಟದ ಮೆಣಸಿನಕಾಯಿ ಬೆಲೆ ಕ್ವಿಂಟಲ್‍ಗೆ ₹35 ಸಾವಿರದಿಂದ ₹38 ಸಾವಿರ ಮತ್ತು ಸಾಧಾರಣ ಗುಣಮಟ್ಟದ ಕಾಯಿ ₹10ರಿಂದ ₹15 ಸಾವಿರಕ್ಕೆ ಮಾರಾಟ ಆಗುತ್ತಿದೆ’ ಎಂದು ಬ್ಯಾಡಗಿಯ ಮೆಣಸಿನಕಾಯಿ ವ್ಯಾಪಾರಸ್ಥ ಬಸಣ್ಣ ಪ್ರಭು ತಿಳಿಸಿದ್ದಾರೆ. ‘ಈ ವರ್ಷ ಗುಂಟೂರ ಮೆಣಸಿನಕಾಯಿ ಇಳುವರಿಯೂ ಕಡಿಮೆ ಬರುವ ಲಕ್ಷಣ ಇದ್ದು ಇದೇ ದರ ಮುಂದುವರಿಯುವ ಸಾಧ್ಯತೆಗಳು ಹೆಚ್ಚಿವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.