ನರೇಗಲ್: ‘ತಂಬಾಕು ಸೇವನೆಯಿಂದ ಆರ್ಥಿಕ ನಷ್ಟ ಜತೆಗೆ ಹಲವಾರು ರೋಗಗಳಿಂದ ದುರ್ಬಲರಾಗುತ್ತೇವೆ. ಆದ್ದರಿಂದ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪಣ ತೊಡಬೇಕು’ ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಹೇಳಿದರು.
ಸ್ಥಳೀಯ ಈಶ್ವರೀಯ ವಿಶ್ವವಿದ್ಯಾಲಯದಿಂದ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು.
‘ಸಾರಾಯಿ, ತಂಬಾಕು, ಸಿಗರೇಟ್ ಸೇರಿದಂತೆ ಮುಂತಾದ ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿ ದುಃಸ್ಥಿತಿಗೆ ತಲುಪುತ್ತಾನೆ. ವ್ಯಸನಗಳನ್ನು ರೂಢಿ ಮಾಡಿಕೊಳ್ಳುವುದರಿಂದ ಆತ್ಮೀಯರು ನಮ್ಮನ್ನು ಕೀಳಾಗಿ ಕಾಣುತ್ತಾರೆ. ಆ ಕಾರಣಕ್ಕಾದರು ವ್ಯಸನಗಳ ದಾಸರಾಗಬಾರದು’ ಎಂದರು.
‘ವಿದ್ಯಾರ್ಥಿಗಳು ಓದು, ಕ್ರೀಡೆಗಳಲ್ಲಿ ಕ್ರಿಯಾಶೀಲರಾಗಿ ಆರೋಗ್ಯಪೂರ್ಣ ಬದುಕು ರೂಢಿಸಿಕೊಳ್ಳಬೇಕು. ಮನೆಯಲ್ಲಿ ದುಶ್ಚಟಗಳಿಗೆ ಅಂಟಿಕೊಂಡವರಿಗೆ ಅದರಿಂದಾಗುವ ದುಷ್ಪರಿಣಾಮಗಳ ತಿಳಿವಳಿಕೆ ನೀಡಲು ಮುಂದಾಗಬೇಕು’ ಎಂದರು.
ಸಂಚಾಲಕಿ ಬಿ.ಕೆ. ಸವಿತಕ್ಕ ಮಾತನಾಡಿ, ‘ದುಶ್ಚಟಗಳು ಆರಂಭದಲ್ಲಿ ಪ್ರೇರೇಪಿಸುತ್ತವೆ ನಂತರ ನಿಧಾನವಾಗಿ ವ್ಯಸನಿಯನ್ನು ನಾಶಪಡಿಸುತ್ತವೆ. ಆದ್ದರಿಂದ ತಂಬಾಕು ಸೇವನೆ ಬಹಳಷ್ಟು ಅಪಾಯಕಾರಿ’ ಎಂದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಚೇರ್ಮನ್ ಮುತ್ತಪ್ಪ ನೂಲ್ಕಿ, ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕ ಬಿ. ಎಸ್. ನಾಯಕರ, ಸಿದ್ದಣ್ಣ ಚವರಿ, ಎಲ್.ಆರ್. ರಡ್ಡೇರ, ಆರೋಗ್ಯ ಇಲಾಖೆಯ ಸಂಗೀತಾ ಗುಮ್ಮಗೋಳಮಠ, ಎಲ್.ಸಿ. ಹೊಸಮನಿ, ನಾಡಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.