
ನರೇಗಲ್: ಪಟ್ಟಣದ ಎಲ್ಲೆಂದರಲ್ಲಿ ಹಂದಿಗಳ ಸರಣಿ ಸಾವು ಕಂಡುಬರುತ್ತಿವೆ. ಸಾಮಾನ್ಯವಾಗಿ ಓಡಾಡುತ್ತಿರುವ ಹಂದಿಗಳು ಏಕಾಏಕಿ ನೆಲಕ್ಕೆ ಬಿದ್ದು ಒದ್ದಾಡಿ ಕೆಲವೇ ಕ್ಷಣದಲ್ಲಿ ಉಸಿರು ನಿಲ್ಲಿಸುತ್ತಿವೆ. ಪ್ರತಿದಿನ ಹಂದಿಗಳು ಮರಣ ಹೊಂದುತ್ತಿದ್ದು, ಇದರಿಂದ ಜನರಲ್ಲಿ ಆಂತಕ ಸೃಷ್ಟಿಯಾಗಿದೆ.
ಪಟ್ಟಣದ 17 ವಾರ್ಡ್ಗಳಲ್ಲಿ ಅಲ್ಲಲ್ಲಿ ಸಾವನ್ನಪ್ಪುತ್ತಿರುವ ಹಂದಿಗಳಿಂದ ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗ ಉಲ್ಬಣಗೊಂಡಿರುವ ಭೀತಿ ಉಂಟಾಗಿದೆ. 3ನೇ ವಾರ್ಡ್ನ ಜಕ್ಕಲಿ ರಸ್ತೆಯ ಆಶ್ರಯ ಕಾಲೊನಿ ಒಂದರಲ್ಲಿಯೇ 10ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿವೆ.
ಬುಲ್ಡೋಜರ್ ನಗರ, ಭಾಗ್ಯ ನಗರ, ಕೋಳಿ ಫಾರಂ, ಅಂಬೇಡ್ಕರ್ ಕಾಲೊನಿ, ಹಂಚಿನಾಳ ರಸ್ತೆ, ಗದಗ ರಸ್ತೆ, ದ್ಯಾಂಪುರ ಸೇರಿದಂತೆ ವಿವಿಧ ಕಾಲೊನಿಗಳಲ್ಲಿ ಹಂದಿಗಳು ಸಾಯುತ್ತಿವೆ. ಕೆಲವು ಕಡೆ ಬಿದ್ದ ಮನೆಯಲ್ಲಿ, ಮುಳ್ಳಿನ ಕಂಟಿಯಲ್ಲಿ ಮೃತ ದೇಹದಿಂದ ದುರ್ವಾಸನೆ ಬಂದ ನಂತರ ಜನರಿಗೆ ತಿಳಿಯುತ್ತಿದೆ. ಇದರಿಂದ ರಸ್ತೆಯಲ್ಲಿ ನಡೆದಾಡಲು, ಓಣಿಯಲ್ಲಿರಲು ತೊಂದರೆ ಅನುಭವಿಸುವಂತಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ಈ ಕುರಿತು ನಿವಾಸಿಗಳು, ರೈತರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ದೂರು ನೀಡಿದ್ದಾರೆ.
ಪಟ್ಟಣದಲ್ಲಿ ಸಾವನ್ನಪ್ಪಿದ ಹಂದಿಗಳ ಮಾಹಿತಿ ನೀಡಿದ ನಂತರ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳೇ ಹಂದಿಗಳ ಮಾಲೀಕರನ್ನು ಕರೆದುಕೊಂಡು ಬರುತ್ತಿದ್ದಾರೆ. ನಂತರ ಅವರು ತೆಗೆದುಕೊಂಡು ಹೋಗುತ್ತಿದ್ದಾರೆ. ಕೆಲವೊಮ್ಮೆ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು, ಸ್ವಚ್ಛತಾ ಸಿಬ್ಬಂದಿ ತೆಗೆದುಕೊಂಡು ಹೋಗುತ್ತಾರೆ. ಇನ್ನುಳಿದ ಸಂದರ್ಭದಲ್ಲಿ ಸಾವನಪ್ಪುತ್ತಿರುವ ಹಂದಿಗಳನ್ನು ಬೀದಿ ನಾಯಿಗಳು ಆಹಾರಕ್ಕಾಗಿ ತುಂಡರಸಿ ಎಲ್ಲೆಂದರಲ್ಲಿ ಬಿಸಾಡುತ್ತಿವೆ. ಹೀಗಾಗಿ ರೋಗ ಭೀತಿ ಹಾಗೂ ಸಾವಿನ ಪ್ರಮಾಣ ಸಾಕುಪ್ರಾಣಿಗಳಿಗೆ ಅಥವಾ ಮನುಷ್ಯರಿಗೆ ಹರಡಿದರೆ ಹೇಗೆ ಎನ್ನುವ ಆತಂಕ ಎದುರಿಸುತ್ತಿದ್ದಾರೆ.
ಸಾವನ್ನಪ್ಪುವ ಹಂದಿಗಳನ್ನು ಎಳೆದುಕೊಂಡು ಹೋಗುವ ಹಂದಿಗಳ ಮಾಲೀಕರು ಗ್ರಾಮದ ಸಮೀಪದ ರಸ್ತೆ ಪಕ್ಕದಲ್ಲಿ ಎಸೆದು ಬರುತ್ತಿದ್ದಾರೆ. ನಾಗರಿಕರು ಮೂಗು ಮುಚ್ಚಿಕೊಂಡು ಹೋಗುವ ಅನಿವಾರ್ಯತೆ ನಿರ್ಮಾಣವಾಗಿದೆ. ಹಂದಿಗಳ ಮಾಲೀಕರು ಸತ್ತ ಹಂದಿಗಳನ್ನು ಸುಡುತ್ತಿಲ್ಲ. ಎಷ್ಟು ಹಂದಿಗಳು ಸಾವನಪ್ಪಿವೆ ಎನ್ನುವ ಮಾಹಿತಿ ಹೇಳಲು ಹಿಂದೇಟು ಹಾಕುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
50ಕ್ಕೂ ಹೆಚ್ಚು ಹಂದಿಗಳ ಸ್ಥಳಾಂತರ; ಮಾಲೀಕರ ಸಭೆ
ಹಂದಿಗಳ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿರುವ ಕಾರಣ ಪಟ್ಟಣ ಪಂಚಾಯಿತಿ ಪ್ರಭಾರ ಮುಖ್ಯಾಧಿಕಾರಿ ಮಲ್ಲೇಶ ಪಚ್ಚಿ ಹಾಗೂ ಅವರ ಸಿಬ್ಬಂದಿ ಹಂದಿಗಳ ಮಾಲೀಕರ ಜತೆಗೆ ಸಭೆ ನಡೆಸಿ ಜಾಗೃತಿ ಮೂಡಿಸಿದ್ದಾರೆ. ಒಂದೇ ಸ್ಥಳದಲ್ಲಿ ಕೂಡಿಹಾಕಿ ಚಿಕಿತ್ಸೆ ನೀಡುವಂತೆ ಹಾಗೂ ರೋಗ ಪೀಡಿತ ಹಂದಿಗಳನ್ನು ಸಾಗಿಸುವಂತೆ ಮನವರಿಕೆ ಮಾಡಿದ್ದಾರೆ. ಹಾಗಾಗಿ 50ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ಸಾಗಿಸಲಾಗಿದೆ. ಇನ್ನೂ ಹಂದಿ ಹಿಡಿಯುವ ಕಾರ್ಯಾಚರಣೆ ನಡೆದಿದೆ.
ಹಂದಿಗಳು ಮಿತಿಮೀರಿ ಸಾವನ್ನಪ್ಪುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಕಾರಣ ಸಿಬ್ಬಂದಿಯ ಸಹಕಾರದಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.–ಮಲ್ಲೇಶ ಪಚ್ಚಿ ,ಪ್ರಭಾರ ಮುಖ್ಯಾಧಿಕಾರಿ ನರೇಗಲ್ ಪಟ್ಟಣ ಪಂಚಾಯಿತಿ
ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಹಂದಿ ಮಾಲೀಕರು ಸಹಕಾರ ನೀಡಿದರೆ ಹಂದಿ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು–ಡಾ.ಲಿಂಗಯ್ಯ ಗೌರಿ, ಪಶು ವೈದ್ಯಾಧಿಕಾರಿ ನರೇಗಲ್
ಹಂದಿಗಳ ಸಾವಿನಿಂದ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ. ಸ್ಥಳೀಯ ಆಡಳಿತ ರೋಗ ಪಸರಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ–ಲಕ್ಷ್ಮವ್ವ ಇಟಗಿ ಜ್ಯೋತಿ ರಾಥೋಡ್, 3ನೇ ವಾರ್ಡ್ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.