ADVERTISEMENT

ಗದಗ: ತೋಂಟದಾರ್ಯ ಮಹಾರಥೋತ್ಸವಕ್ಕೆ ಮಳೆಯ ಸಿಂಚನ

ಭಕ್ತರೊಂದಿಗೆ ಮಳೆಯಲ್ಲೇ ಹೆಜ್ಜೆಹಾಕಿದ ತೋಂಟದ ಸಿದ್ಧರಾಮ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 16:05 IST
Last Updated 16 ಏಪ್ರಿಲ್ 2022, 16:05 IST
   

ಗದಗ: ಐತಿಹಾಸಿಕ ಗದುಗಿನ ತೋಂಟದಾರ್ಯ ಮಹಾರಥೋತ್ಸವವು ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶನಿವಾರ ಸಂಜೆ 6.30ಕ್ಕೆ ಚಿತ್ತಾ ನಕ್ಷತ್ರದಲ್ಲಿ ಭಕ್ತ ಜನಸಾಗರದ ನಡುವೆ ವಿಜೃಂಭಣೆಯಿಂದ ನಡೆಯಿತು.

ಅಡ್ಡಪಲ್ಲಕ್ಕಿಯಲ್ಲಿ ಬಸವಣ್ಣ ಹಾಗೂ ಸಿದ್ಧಲಿಂಗೇಶ್ವರರ ಭಾವಚಿತ್ರಗಳು, ವಚನದ ಕಟ್ಟುಗಳನ್ನು ಇಟ್ಟು ಮೆರವಣಿಗೆ ಮಾಡಲಾಯಿತು. ಮಳೆಯ ಮಧ್ಯೆಯೂ ತೋಂಟದ ಸಿದ್ಧರಾಮ ಸ್ವಾಮೀಜಿ ಸಾವಿರಾರು ಭಕ್ತರೊಂದಿಗೆ ಎರಡು ಕಿ.ಮೀ. ಉದ್ದದ ಮೆರವಣಿಗೆಯೊಂದಿಗೆ ನಡೆದುಕೊಂಡು ಬಂದರು.

ಮಹಾರಥೋತ್ಸವದಲ್ಲಿ ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ, ಉತ್ತಂಗಿಯ ಜಗದ್ಗುರು ಸೋಮಶಂಕರ ಸ್ವಾಮೀಜಿ, ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ನೇರಡಗಮ್‍ದ ಪಂಚಮ ಸಿದ್ಧಲಿಂಗ ಸ್ವಾಮೀಜಿ, ಅರಸೀಕೆರೆ ಕೋಲಶಾಂತೇಶ್ವರಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ಹರಗುರುಚರಮೂರ್ತಿಗಳು ಭಾಗವಹಿಸಿದ್ದರು. 10ಕ್ಕೂ ಹೆಚ್ಚು ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯುದ್ದಕ್ಕೂ ಪಾಲ್ಗೊಂಡವು.

ADVERTISEMENT

ರಥೋತ್ಸವಕ್ಕೆ ಮುನ್ನ ಪರಂಪರೆಯಂತೆ ವೀರನಾರಾಯಣ ರಸ್ತೆಯಲ್ಲಿರುವ ಎಸ್.ಎಸ್.ಕಳಸಾಪೂರಶೆಟ್ಟರ್‌ ನಿವಾಸದಿಂದ ಮೆರವಣಿಗೆಯಲ್ಲಿ ಕಾಲ್ನಡಿಗೆಯ ಮೂಲಕ ತೋಂಟದ ಸಿದ್ಧರಾಮ ಶ್ರೀಗಳು ಮಠಕ್ಕೆ ಬಂದರು.

ರಸ್ತೆಯುದ್ದಕ್ಕೂ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲಾ ಸಮುದಾಯದವರು ಬಸವೇಶ್ವರ ಮತ್ತು ಸಿದ್ಧಲಿಂಗೇಶ್ವರ ವಚನಕಟ್ಟುಗಳಿಗೆ ಹಾಗೂ ಪೂಜ್ಯರಿಗೆ ಗೌರವ ಸಲ್ಲಿಸಿದರು.

ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಮತ್ತು ಮೆರವಣಿಗೆ ತಂಡಗಳಿಗೆ ವರ್ತಕರು ಕುಡಿಯಲು ತಂಪು ಪಾನೀಯ ವಿತರಿಸಿದ್ದು ಐಕ್ಯತೆಯ ಸಂದೇಶ ಸಾರಿತು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ಉಪಾಧ್ಯಕ್ಷ ದಾನಯ್ಯ ಗಣಾಚಾರಿ, ಮೈಲಾರಪ್ಪ ಅರಣಿ, ಬಸವರಾಜ ಹೀರೆಹಡಗಲಿ, ಶಿವಲೀಲಾ ಅಕ್ಕಿ, ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ, ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ ಚಂದಪ್ಪನವರ, ಚಂದ್ರಕಾಂತ ಚವ್ಹಾಣ, ಸಂಘಟನಾ ಕಾರ್ಯದರ್ಶಿಗಳಾದ ಅಶೋಕ ಕುಡತಿನಿ, ಕಿರಣ ತಿಪ್ಪಣ್ಣವರ, ಕೋಶಾಧ್ಯಕ್ಷ ವೀರಣ್ಣ ಜ್ಯೋತಿ, ಸಹ ಕೋಶಾಧ್ಯಕ್ಷ ಸುರೇಶ ಮರಳಪ್ಪನವರ, ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್ ಪಟ್ಟಣಶೆಟ್ಟಿ, ವ್ಯವಸ್ಥಾಪಕ ಎಂ.ಎಸ್ ಅಂಗಡಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಅನಿತಾ ಗಡ್ಡಿ, ಗಂಗಾಧರ ಹಿರೇಮಠ, ವಿರೂಪಾಕ್ಷಪ್ಪ ಬಳ್ಳೊಳ್ಳಿ, ದೀಪಕ್ ಶೆಟ್ಟರ್, ರಾಜು ಕುರಡಗಿ, ವೀರಣ್ಣ ಗೊಡಚಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.