
ಗದಗ: ‘ಪುಸ್ತಕಗಳಲ್ಲಿ ಅಪಾರ ಜ್ಞಾನ ಅಡಗಿದ್ದು, ಮನುಷ್ಯನ ವ್ಯಕ್ತಿತ್ವದ ಬೆಳವಣಿಗೆಗೆ ಅವು ಸಹಕಾರಿಯಾಗಿವೆ. ಪುಸ್ತಕದ ಹೊರತಾಗಿ ವಸ್ತುಗಳಿಂದ ಸಿಗುವ ಸಂತೋಷ ತಾತ್ಕಾಲಿಕವಾದುದು. ಆದರೆ, ಪುಸ್ತಕದ ಓದಿನಿಂದ ದೊರೆಯುವ ಸುಖ ಶಾಶ್ವತವಾದುದು. ಮನುಷ್ಯನಲ್ಲಿ ಜೀವಪರ ಕಾಳಜಿಯನ್ನು ಇಮ್ಮಡಿಗೊಳಿಸುತ್ತವೆ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ನೇಮಕಾತಿ ಪತ್ರ ನೀಡಿ ಮಾತನಾಡಿದರು.
‘ಪುಸ್ತಕದ ಮಹತ್ವವನ್ನು ಇಂದಿನ ಪೀಳಿಗೆಗೆ ತಿಳಿಸಲು ಪ್ರಾಧಿಕಾರ ‘ಮನೆಗೊಂದು ಗ್ರಂಥಾಲಯ’ ಯೋಜನೆ ಜಾರಿಗೊಳಿಸುತ್ತಿದೆ. ಉತ್ತಮ ಚಟುವಟಿಕೆಗಳನ್ನು ಸಂಘಟಿಸುವ ಗ್ರಂಥಾಲಯಗಳಿಗೆ ಪ್ರಶಸ್ತಿ ನೀಡಲಾಗುವುದು’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ‘ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ವ್ಯಕ್ತಿ ಓದುವ ಸಂಸ್ಕೃಯಿಂದ ವಿಮುಖನಾಗುತ್ತಿದ್ದಾನೆ. ಬಾಲ್ಯದಲ್ಲಿಯೇ ಪುಸ್ತಕ ಪ್ರೀತಿ ಬೆಳೆಸುವ ದಿಸೆಯಲ್ಲಿ ಪೋಷಕರು ಪ್ರಯತ್ನಿಸಬೇಕು’ ಎಂದರು.
ಜಾಗೃತ ಸಮಿತಿಯ ಜಿಲ್ಲಾ ಸಂಚಾಲಕ ಎ.ಎಸ್.ಮಕಾನದಾರ ಮಾತನಾಡಿ, ‘ಜಿಲ್ಲಾ ಹಂತದಲ್ಲಿ ಸಿರಿಗನ್ನಡ ಪುಸ್ತಕ ಮಳಿಗೆಯನ್ನು ಪುನರಾರಂಭಗೊಳಿಸಬೇಕು. ಅಲ್ಲದೆ, ಲೇಖಕರ ಕೃತಿಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕು. ಜಿಲ್ಲಾ ಹಂತದಲ್ಲಿ ಸಮಿತಿ ಸದಸ್ಯರು ಪುಸ್ತಕ ಸಂಸ್ಕೃತಿ ಬೆಳೆಸುವ ದಿಸೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.
‘ಮನೆಗೊಂದು ಗ್ರಂಥಾಲಯ’ ಯೋಜನೆಯ ಕರಪತ್ರ ಬಿಡುಗಡೆಗೊಳಿಸಲಾಯಿತು. ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯರಾದ ಆರ್.ಎಫ್.ಲೊಟಗೇರಿ, ಸಂಗಮೇಶ ತಮ್ಮನಗೌಡ್ರ, ರವಿ ದೇವರಡ್ಡಿ, ಮಂಜುಳಾ ವೆಂಕಟೇಶಯ್ಯ, ರಾಜೇಶ್ವರಿ ಬಡ್ನಿ, ಅಂದಯ್ಯ ಅರವಟಗಿಮಠ, ಎಸ್.ಕೆ.ಆಡಿನ, ಬಸವರಾಜ ಬಡಿಗೇರ, ಸಂತೋಷ ಅಂಗಡಿ ಅವರಿಗೆ ನೇಮಕಾತಿ ಪತ್ರ ವಿತರಿಸಲಾಯಿತು.
ಲಕ್ಕುಂಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮೀರ ನಾಯಕ ಇದ್ದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು, ಡಿ.ಎಸ್.ಬಾಪುರಿ ಸ್ವಾಗತಿಸಿದರು, ಡಾ. ರಶ್ಮಿ ಅಂಗಡಿ ವಂದಿಸಿದರು.
ಓದುಗರಿಗೆ ಪುಸ್ತಕಗಳು ಸುಲಭವಾಗಿ ದೊರೆಯುವ ದಿಸೆಯಲ್ಲಿ ಪುಸ್ತಕ ಪ್ರಾಧಿಕಾರ ವ್ಯವಸ್ಥೆ ಕಲ್ಪಿಸಬೇಕು. ಅತ್ತಿಮಬ್ಬೆ ಹಾಗೂ ತೋಂಟದ ಸಿದ್ಧಲಿಂಗ ಶ್ರೀಗಳ ಹೆಸರಿನಲ್ಲಿ ಪ್ರಶಸ್ತಿ ನೀಡುವಂತಾಗಬೇಕುವಿವೇಕಾನಂದಗೌಡ ಪಾಟೀಲ ಜಿಲ್ಲಾಧ್ಯಕ್ಷ ಕಸಾಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.