ADVERTISEMENT

ಶಿರಹಟ್ಟಿ: ವಾರದ ಸಂತೆಗೆ ಮುಗಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 6:06 IST
Last Updated 25 ಏಪ್ರಿಲ್ 2021, 6:06 IST
ವಾರದ ಸಂತೆಯಲ್ಲಿ ಮುಗಿಬಿದ್ದಿರುವ ಜನರು
ವಾರದ ಸಂತೆಯಲ್ಲಿ ಮುಗಿಬಿದ್ದಿರುವ ಜನರು   

ಶಿರಹಟ್ಟಿ: ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ಶಿರಹಟ್ಟಿ ಪಟ್ಟಣದ ವಾರದ ಸಂತೆಯನ್ನು ರದ್ದುಪಡಿಸಿಲಾಗಿದ್ದರೂ ಭಾನುವಾರ ಮುಂಜಾನೆ 6 ಗಂಟೆಯಿಂದ 10 ಗಂಟೆಯ ಅವಧಿಯಲ್ಲಿ ತರಕಾರಿ ಮಾರಾಟಕ್ಕೆ ಪ್ರಾಥಮಿಕ ಶಾಲೆಯ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಂತರ ಕಾಯ್ದುಕೊಳ್ಳದೆ ಮಾಸ್ಕ್‌ ಧರಿಸದೇ ನೂರಾರು ಜನ ವಾರದ ಸಂತೆಗೆ ಮುಗಿಬಿದ್ದಿರುವುದು ಸ್ಥಳೀಯ ಅಧಿಕಾರಿಗಳ ಮತ್ತು ತಾಲ್ಲೂಕು ಆಡಳಿತದ ವೈಫಲ್ಯಕ್ಕೆ ಸಾಕ್ಷಿ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಆದೇಶದ ಮೇರೆಗೆ ವಾರಾಂತ್ಯ ಕರ್ಫ್ಯೂ ಇದ್ದರೂ ಅಗತ್ಯ ವಸ್ತುಗಳ ಖರೀದಿಗೆ ನಾಲ್ಕು ಗಂಟೆ ಅವಕಾಶ ನೀಡಲಾಗಿತ್ತು. ಆದರೆ, ಕೋವಿಡ್‌ ನಿಯಮಗಳನ್ನು ಗಾಳಿಗೆ ತೋರಿ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಸಾಮಾನ್ಯವಾಗಿತ್ತು. ಮಾರುಕಟ್ಟೆಯಲ್ಲಿ ಸಾರ್ವಜನಿಕರು ಮಾಸ್ಕ್‌ ಮತ್ತು ಅಂತರ ಕಾಯ್ದುಕೊಳ್ಳದೇ ನಿರಾತಂಕವಾಗಿ ಸಂಚರಿಸುತ್ತಿದ್ದರು. ಮುಂಜಾನೆ 6 ಗಂಟೆಗೆ ಆರಂಭವಾದ ತರಕಾರಿ ಮಾರಾಟ 10 ಗಂಟೆಯವರೆಗೂ ಜೋರಾಗಿ ನಡೆಯಿತು.

ತಾಲ್ಲೂಕು ಬೀದಿ ಬದಿ ವ್ಯಾಪಾರಸ್ಥರ ಸಂಘದಿಂದ ಮುಂಜಾನೆ ತರಕಾರಿ ಖರೀದಿಗೆ ಬಂದ ಜನರಿಗೆ ಕೊರೊನಾ ಸೋಂಕಿನ ಬಗ್ಗೆ ಮೈಕ್‌ ಮೂಲಕ ಮುಂಜಾಗ್ರತಾ ಕ್ರಮಗಳಾದ ಮಾಸ್ಕ್‌ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸಿದರು.

ADVERTISEMENT
ಅಂತರ ಕಾಯ್ದುಕೊಳ್ಳದೆ ಮಾಸ್ಕ್‌ ಧರಿಸದೇ ನೂರಾರು ಜನ ವಾರದ ಸಂತೆಗೆ ಮುಗಿಬಿದ್ದಿರುವುದು

ಈ ಕುರಿತು ಪ್ರಜಾವಾಣಿಯೊಂದಿಗೆ ಮಾತನಾಡಿದ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ಮಾಬುಸಾಬ ಲಕ್ಷ್ಮೇಶ್ವರ, ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಪಟ್ಟಣದಲ್ಲಿ ಅಗತ್ಯ ವಸ್ತುಗಳ ತರಕಾರಿ ಮಾರುಕಟ್ಟೆಯನ್ನು ದೊಡ್ಡ ಮೈದಾನದಲ್ಲಿ ನಡೆಸಬೇಕು ಎಂದು ಮುನ್ನೆಚ್ಚರಿಕೆ ನೀಡಿದರು ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದರು.

‍ಹಣ್ಣು, ತರಕಾರಿ, ದಿನಸಿ ಹಾಗೂ ಸಿಹಿ ತಿನಿಸು ಅಂಗಡಿಗಳು ಗ್ರಾಹಕರಿಂದ ತುಂಬಿ ಹೋಗಿದ್ದವು. ಪ್ರಮುಖ ರಸ್ತೆಗಳ ಬದಿಯಲ್ಲಿ ಹಾಗೂ ಪಾದಚಾರಿ ಮಾರ್ಗದಲ್ಲಿ ‍ಹಣ್ಣು ಮತ್ತು ತರಕಾರಿ ಮಾರಾಟ ಮಾಡುತ್ತಿದ್ದರು. ಕೊರೊನಾ ಸೋಂಕನ್ನು ನಿಯಂತ್ರಿಸಲು ಸರ್ಕಾರದ ನಿಯಮಗಳನ್ನು ಗಾಳಿಗೆ ತೋರಿ ಬೇಕಾಬಿಟ್ಟಿ ಓಡಾಡುತ್ತಿರುವುದು ಸಾಮಾನ್ಯವಾಗಿತ್ತು.

ಕೋವಿಡ್‌ ನಿಯಮಗಳನ್ನು ಗಾಳಿಗೆ ತೋರಿ ವ್ಯಾಪಾರ ವಹಿವಾಟು ನಡೆಸುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.