
ಮುಂಡರಗಿ: ತಾಲ್ಲೂಕಿನ ಕಲಕೇರಿ-ವಿರುಪಾಪುರದ ಗುರು ಮುದುಕೇಶ್ವರ ಶಿವಾಚಾರ್ಯ ಮಠದ ನೂತನ ಪೀಠಾಧಿಕಾರ ಮಹೋತ್ಸವವು ಶುಕ್ರವಾರ ನಡೆಯಲಿದ್ದು, ಮಠದ ನೂತನ ಪೀಠಾಧಿಪತಿಯಾಗಿ ಶಿವಕುಮಾರ ದೇವರು ಪಟ್ಟಾಧಿಕಾರ ವಹಿಸಿಕೊಳ್ಳಲಿದ್ದಾರೆ.
ನೂತನ ಪಟ್ಟಾಧಿಕಾರ ವಹಿಸಿಕೊಳ್ಳಲಿರುವ ಶಿವಕುಮಾರ ದೇವರು ಮಠದ ಸದ್ಯದ ಪೀಠಾಧಿಪತಿ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ವಂಶಜರಾಗಿದ್ದು, 22 ವರ್ಷದ ಯುವಕರಾಗಿದ್ದಾರೆ.
ಮಲ್ಲಯ್ಯ ಪಾಟೀಲ (ಹಿರೇಮಠ) ಹಾಗೂ ಸುವರ್ಣಾ ಅವರ ಪುತ್ರರಾದ ಶಿವಕುಮಾರ ದೇವರು ಶಿವಯೋಗ ಮಂದಿರ, ಹುಕ್ಕೇರಿ ಮಠದ ಸಂಸ್ಕೃತ ಪಾಠಶಾಲೆಗಳಲ್ಲಿ ಹಲವು ವರ್ಷಗಳ ಕಾಲ ವೇದ, ಆಗಮ, ಉಪನಿಷತ್ತು, ಸಂಸ್ಕೃತ, ಯೋಗ ಮೊದಲಾದ ಅಧ್ಯಾತ್ಮ ವಿಷಯಗಳನ್ನು ಅಧ್ಯಯನ ಮಾಡಿದ್ದಾರೆ. ಮೈಸೂರಿನ ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ನಾಡಿನ ಹಲವು ಮಠಾಧೀಶರ ಆಪ್ತ ಒಡನಾಟ ಹೊಂದಿದ್ದಾರೆ.
ನಾಡಿನ ಹಲವಾರು ಹರ, ಗುರು, ಚರ ಮೂರ್ತಿಗಳ ಗರಡಿಯಲ್ಲಿ ಅಧ್ಯಾತ್ಮವನ್ನು ಕರಗತ ಮಾಡಿಕೊಳ್ಳಲು ಶಿವಕುಮಾರ ದೇವರು ಉತ್ಸುಕರಾಗಿದ್ದಾರೆ. ಅವರ ನೇತೃತ್ವದಲ್ಲಿ ಗುರು ಮುದುಕೇಶ್ವರ ಮಠವು ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದಲಿದೆ ಎಂಬ ಆಶಾಭಾವವನ್ನು ಮಠದ ಭಕ್ತರು ಹೊಂದಿದ್ದಾರೆ.
ಪಟ್ಟಾಧಿಕಾರ ಮಹೋತ್ಸವ ಇಂದು
ಕಲಕೇರಿ-ವಿರುಪಾಪುರದ ಮುದುಕೇಶ್ವರ ಮಠದ ಆವರಣದಲ್ಲಿ ಫೆ.20ರಂದು ಬೆಳಿಗ್ಗೆ 11ಕ್ಕೆ ಶಿವಕುಮಾರ ದೇವರ ನೂತನ ಪಟ್ಟಾಧಿಕಾರ ಮಹೋತ್ಸವ ಜರುಗಲಿದೆ. ರಂಭಾಪುರಿಯ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ಹಾಗೂ ಉಜ್ಜಯಿನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿಕೊಳ್ಳಲಿದ್ದಾರೆ. ನಾಡಿನ ಹಲವಾರು ಮಠಾಧೀಶರು ಪಟ್ಟಾಧಿಕಾರ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದು ಕಲಕೇರಿ-ವಿರುಪಾಪುರ ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ತಳಿರು ತೋರಣಗಳಿಂದ ಅಲಂಕೃತಗೊಂಡಿವೆ. ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು ಮಾಜಿ ಸಚಿವ ಎಸ್.ಎಸ್.ಪಾಟೀಲ ಸೇರಿದಂತೆ ಹಲವು ಗಣ್ಯರು ಪಟ್ಟಾಧಿಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಪೂರ್ವದಲ್ಲಿ ರಂಭಾಪುರಿ ಹಾಗೂ ಉಜ್ಜಯಿನಿ ಶ್ರೀಗಳ ಅದ್ಧೂರಿ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.