
ಶಿರಹಟ್ಟಿ: ಜಾತಿ, ವರ್ಣ, ಮೌಢ್ಯತೆ, ಮೇಲುಕೀಳು ಎಂಬ ಅಸಮಾನತೆ ವಿರುದ್ಧ ಹೋರಾಡಿ ಎಲ್ಲರೂ ಸಮಾನರು ಎಂಬ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಚಿಂತನೆಯನ್ನು 12 ಶತಮಾನದಲ್ಲೇ ಹುಟ್ಟುಹಾಕಿದ ಶಿವಯೋಗಿ ಸಿದ್ದರಾಮೇಶ್ವರ ಶ್ರಮ ಸಂಸ್ಕೃತಿಯ ವಾರಸುದಾರ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.
ತಾಲ್ಲೂಕಿನ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಸ್ಥಳೀಯ ಶಬ್ಬೀರ ನಗರದ ನಿವಾಸಿ ವೀರಮ್ಮ ಕಳಸಾಪುರ ಅವರ ಮಹಾಮನೆಯಲ್ಲಿ ಹಮ್ಮಿಕೊಂಡಿದ್ದ ಸಿದ್ಧರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಶರಣರು ತಮ್ಮ ಕುಲ ಕಾಯಕದ ಮೇಲೆ ವಚನಗಳನ್ನು ರಚಿಸಿದ್ದು, ಸಿದ್ದರಾಮೇಶ್ವರರು ದೇವರ ಬಗ್ಗೆ ಅಪಾರ ಭಕ್ತಿಯುಳ್ಳ ಶಿವಭಕ್ತ, ಅಕ್ಷರದ ಜ್ಞಾನದಿಂದ ವಚನ ರಚಿಸಿ ಜ್ಞಾನಯೋಗಿಗಳಾಗಿದ್ದರು ಎಂದರು.
ಮಾನವೀಯತೆಯೇ ಶ್ರೇಷ್ಠ ಧರ್ಮ, ಶ್ರಮವೇ ನಿಜವಾದ ಭಕ್ತಿ ಎಂದು ಸಾರಿದ ಮಹಾನುಭಾವ ಸಿದ್ದರಾಮರು. ಅವರು ಕೇವಲ ವಚನಗಳನ್ನು ಬರೆಯಲಿಲ್ಲ, ವಚನಗಳಂತೆ ಬದುಕಿದವರು. ಸಿದ್ದರಾಮರು ನಿಜ ಶರಣರು, ಸಮಾಜ ಬದಲಿಸಲು ಪ್ರಯತ್ನಿಸಿದವರು. ಧರ್ಮವನ್ನು ಮಾನವೀಯ ನೆಲೆಯಲ್ಲಿ ಕಟ್ಟಿದವರು ಎಂದರು.
ಶಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಕೆ. ಲಮಾಣಿ, ಎಂ.ಎ.ಮಕಾಂದಾರ, ಪ್ರಶಾಂತ್ ಛಬ್ಬಿ, ನಂದಕ್ಕ ಕಪ್ಪತನವರ, ಶಾಂತ ಪಾಟೀಲ, ವೀರಮ್ಮ ಕಳಸಾಪೂರ, ರಾಜು ಶಿರಹಟ್ಟಿ, ನಾಗಪ್ಪ ಶಿರಹಟ್ಟಿ, ಚಂದ್ರಶೇಖರ, ಮೋಹನ್ ಮಾಂಡ್ರೆ, ಶರಣಪ್ಪ ಹರ್ತಿ, ಅರ್ಜುನಪ್ಪ ವಡ್ಡರ, ಕರಿಗಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.