ಗದಗ: ತ್ರಿವಿಧ ದಾಸೋಹಿ ಲಿಂ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 76ನೇ ಜಯಂತಿ ಅಂಗವಾಗಿ ಭಾವೈಕ್ಯ ದಿನಾಚರಣೆ, ಗ್ರಂಥ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ ಫೆ.21ರಂದು ಬೆಳಿಗ್ಗೆ 10.30ಕ್ಕೆ ನಗರದ ತೋಂಟದಾರ್ಯ ಮಠದಲ್ಲಿ ನಡೆಯಲಿದೆ.
ಶುಕ್ರವಾರ ಬೆಳಿಗ್ಗೆ 8.30ಕ್ಕೆ ಭೀಷ್ಮಕೆರೆ ಆವರಣದಲ್ಲಿರುವ ಬಸವೇಶ್ವರ ಪ್ರತಿಮೆಯಿಂದ ತೋಂಟದಾರ್ಯ ಮಠದವರೆಗೆ ಭಾವೈಕ್ಯ ಯಾತ್ರೆ ನಡೆಯಲಿದೆ. ಮಾಜಿ ಶಾಸಕ ಡಿ.ಆರ್ ಪಾಟೀಲ ಭಾವೈಕ್ಯ ಯಾತ್ರೆಗೆ ಚಾಲನೆ ನೀಡುವರು.
ನಂತರ ಮಠದ ಆವರಣದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯವನ್ನು ತೋಂಟದ ಸಿದ್ಧರಾಮ ಸ್ವಾಮೀಜಿ ವಹಿಸುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತಿ ವಹಿಸುವರು. ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು, ಭೈರನಟ್ಟಿ-ಶಿರೋಳದ ಶಾಂತಲಿಂಗ ಶ್ರೀಗಳು, ಸಂಡೂರು ವಿರಕ್ತಮಠದ ಪ್ರಭು ಶ್ರೀಗಳು, ಅರಸಿಕೆರೆಯ ಶಾಂತಲಿಂಗ ದೇಶಿಕೇಂದ್ರ ಶ್ರೀಗಳು, ಕೋರಣೇಶ್ವರ ಶ್ರೀಗಳು ಸಮ್ಮುಖ ವಹಿಸುವರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ ಅಧ್ಯಕ್ಷತೆ ವಹಿಸುವರು. ‘ಪದ್ಮಶ್ರೀ ಪ್ರಶಸ್ತಿ’ ಪುರಸ್ಕೃತರಾದ ಭೀಮವ್ವ ಶಿಳ್ಳೆಕ್ಯಾತರ ಅವರನ್ನು ಸನ್ಮಾನಿಸಲಾಗುವುದು.
ಸಂಸದರಾದ ಬಸವರಾಜ ಬೊಮ್ಮಾಯಿ, ರಮೇಶ ಜಿಗಜಿಣಗಿ, ಶಾಸಕರಾದ ಜಿ.ಎಸ್.ಪಾಟೀಲ, ಸಿ.ಸಿ.ಪಾಟೀಲ, ಡಾ.ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ಸಾಹಿತಿ ರಂಜಾನ್ ದರ್ಗಾ, ವೈದ್ಯ ಡಾ. ಸೊಲೊಮನ್, ಮಾಜಿ ಸಚಿವರಾದ ಎಸ್.ಎಸ್.ಪಾಟೀಲ, ಕಳಕಪ್ಪ ಬಂಡಿ, ಮಾಜಿ ಸಂಸದ ಐ.ಜಿ.ಸನದಿ, ಮಾಜಿ ಶಾಸಕರಾದ ಜಿ.ಎಸ್ ಗಡ್ಡದ್ದೇವರಮಠ, ರಾಮಕೃಷ್ಣ ದೊಡ್ಡಮನಿ ಅತಿಥಿಯಾಗಿ ಪಾಲ್ಗೊಳ್ಳುವರು.
ಲಿಂಗೈಕ್ಯ ಗುರುಗಳ ಕುರಿತಾಗಿ ಭೋಜರಾಜ ಸೊಪ್ಪಿಮಠ ರಚಿಸಿರುವ ‘ಕರುಣಾಮಯಿ ಭಾಗ-3’ ಹಾಗೂ ಡಾ.ಮಂಜುನಾಥ ಬೊಮ್ಮನಕಟ್ಟಿ ರಚಿತ ‘ಗೋಕಾಕ ಚಳವಳಿ ಮತ್ತು ಕನ್ನಡ ಅಭಿವೃದ್ಧಿ’ ಗ್ರಂಥಗಳು ಲೋಕಾರ್ಪಣೆಗೊಳ್ಳಲಿವೆ. ಈ ಕಾರ್ಯಕ್ರಮಕ್ಕೆ ತೋಂಟದ ಸಿದ್ಧಲಿಂಗ ಶ್ರೀಗಳ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.