ADVERTISEMENT

ಬೇಲೂರು: ಇಷ್ಟಲಿಂಗ ಪೂಜೆಗೆ ಹರಿದು ಬಂದ ಭಕ್ತಸಾಗರ

ತುಂಬಿ ತುಳುಕುತ್ತಿರುವ ಶಿವಕುಮಾರ ಸ್ವಾಮಿ ಸಮುದಾಯ ಭವನ; ರಾಜ್ಯದ ವಿವಿಧೆಡೆಯಿಂದ ಭಕ್ತರ ಆಗಮನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 4:50 IST
Last Updated 3 ಅಕ್ಟೋಬರ್ 2022, 4:50 IST
ಬೇಲೂರಿನ ಶಿವಕುಮಾರ ಸ್ವಾಮಿ ಸಭಾ ಭವನದಲ್ಲಿ ನಡೆಯುತ್ತಿರುವ ಇಷ್ಟಲಿಂಗ ಪೂಜೆಯಲ್ಲಿ ಭಾನುವಾರ ಸೇರಿದ್ದ ಭಕ್ತರು
ಬೇಲೂರಿನ ಶಿವಕುಮಾರ ಸ್ವಾಮಿ ಸಭಾ ಭವನದಲ್ಲಿ ನಡೆಯುತ್ತಿರುವ ಇಷ್ಟಲಿಂಗ ಪೂಜೆಯಲ್ಲಿ ಭಾನುವಾರ ಸೇರಿದ್ದ ಭಕ್ತರು   

ಬೇಲೂರು: ರಂಭಾಪುರಿ ಪೀಠದ ದಸರಾ ಧರ್ಮ ಸಮ್ಮೇಳನದ ಅಂಗವಾಗಿ 7 ದಿನಗಳಿಂದ ಬೇಲೂರಿನ ಶಿವಕುಮಾರ ಸ್ವಾಮಿ ಸಮುದಾಯ ಭವನದಲ್ಲಿ ನಡೆಯುತ್ತಿರುವ ಇಷ್ಟಲಿಂಗ ಪೂಜೆಗೆ ಕಾಲಿಡಲು ಜಾಗ ಇಲ್ಲದಂತೆ ಭಕ್ತರು ಸೇರುತ್ತಿದ್ದಾರೆ.

ಭಾನುವಾರ ಸಭಾ ಭವನ ಭಕ್ತರಿಂದ ತುಂಬಿ ತುಳುಕುತ್ತಿತ್ತು. ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯರ ಇಷ್ಟಲಿಂಗ ಪೂಜೆ ವೀಕ್ಷಿಸಲು ಭಕ್ತರು ತುದಿಗಾಲಿನಲ್ಲಿ ನಿಂತರು. ಲಿಂಗಧಾರಣೆ ಮಾಡಿಸಿ ಕೊಂಡಿರುವ ವೀರಶೈವ ಸಮಾಜದವರು ತಮ್ಮ ಇಷ್ಟಲಿಂಗಗಳಿಗೆ ಪೂಜೆ
ನೆರವೇರಿಸಿದರು. ಪೂಜೆಯಲ್ಲಿ ಪಾಲ್ಗೊಂಡವರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಸಭಾ ಭವನದಲ್ಲಿ ವೇದ ಮಂತ್ರ ಘೋಷ ಮೊಳಗುತ್ತಿರುವುದರಿಂದ ಜನರು ಪೂಜಾ ಕಾರ್ಯವನ್ನು ವೀಕ್ಷಿಸಿದರು.

ಬೇಲೂರು ಮಾತ್ರವಲ್ಲದೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಇಷ್ಟಲಿಂಗ ಪೂಜೆಯಲ್ಲಿ ಭಾಗವಹಿಸುತ್ತಿ ದ್ದಾರೆ. ಉತ್ತರ ಕರ್ನಾಟಕದಿಂದಲೂ ಕೆಲವು ಭಕ್ತರು ಇಷ್ಟಲಿಂಗ ಪೂಜೆಗೆ ಆಗಮಿಸಿದ್ದು ಕಂಡು ಬಂತು. ವೀರಶೈವ ಸಮಾಜದವರು ಮಾತ್ರವಲ್ಲದೆ, ವಿವಿಧ ಜಾತಿ ಧರ್ಮದವರು ಪೂಜೆಯನ್ನು ವೀಕ್ಷಿಸಲು ಆಗಮಿಸುತ್ತಿದ್ದಾರೆ. ಹೀಗಾಗಿ ರಂಭಾಪುರಿ ಪೀಠದ ದಸರಾ ಧರ್ಮ ಸಮ್ಮೇಳನ ಸರ್ವ ಧರ್ಮ ಸಮಾನತೆಯನ್ನು ಸಾರುತ್ತಿದೆ.

ADVERTISEMENT

ವೀರಸೋಮೇಶ್ವರ ಸ್ವಾಮೀಜಿ ಇಷ್ಟಲಿಂಗಕ್ಕೆ ಅಭಿಷೇಕ ನೆರವೇರಿಸಿದ ಪ್ರಸಾದವನ್ನು ಭಕ್ತರು ಸರದಿ ಸಾಲಿನಲ್ಲಿ ಬಂದು ಪ್ರೋಕ್ಷಣೆ ಮಾಡಿಸಿಕೊಳ್ಳುತ್ತಾರೆ. ವಿವಿಧ ಜಾತಿ, ಧರ್ಮದವರು ಸಹ ಆಗಮಿಸಿ, ಅಭಿಷೇಕದ ಜಲ ಪ್ರಸಾದ ಪ್ರೋಕ್ಷಣೆ ಮಾಡಿಸಿಕೊಂಡು ಪಾವನರಾಗುತ್ತಿದ್ದಾರೆ.

ಪೂಜೆ ಮುಗಿದ ನಂತರ ಆಶೀರ್ವಾದ ಪಡೆಯುಲು ಸಭಾಭವನದಲ್ಲಿ ಜಮಾಯಿಸಿದ ಭಕ್ತರು ಮಾತ್ರವಲ್ಲದೆ, ಹೊರಗಡೆ ಓಡಾಡಿಕೊಂಡಿರುವ ಭಕ್ತರು ಆಗಮಿಸುತ್ತಿದ್ದಾರೆ. ಮುಂಜಾನೆ ಯಿಂದ ತಡರಾತ್ರಿವರೆಗೂ ಧಾರ್ಮಿಕ ಕಾರ್ಯ ಗಳನ್ನು ನಡೆಸುತ್ತಿರುವ ಗುರುಗಳು ದಣಿದಿದ್ದರೂ ಭಕ್ತರಿಗಾಗಿ ಪೀಠದಲ್ಲಿ ಕುಳಿತು ಆಶೀರ್ವದಿಸುತ್ತಿದ್ದಾರೆ.

ಇಷ್ಟಲಿಂಗ ಪೂಜೆ ನಂತರ ಶ್ರೀಗಳ ಪಾದಪೂಜೆಯೂ ವೈಭವದಿಂದ ನಡೆಯುತ್ತಿದೆ. ಇದರಲ್ಲೂ ಹೆಚ್ಚಿನ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.

‘ಇಷ್ಟಲಿಂಗ ಪೂಜೆಗೆ ಪ್ರತಿದಿನ 3,000 ಮಂದಿ ಸೇರುತ್ತಿದ್ದಾರೆ. ಭಾನು ವಾರ ರಜೆ ದಿನ ಆಗಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು’ ಎಂದು ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಬಲ್ಲೇನಹಳ್ಳಿ ರವಿಕುಮಾರ್ ತಿಳಿಸಿದರು.

‘ನಿರೀಕ್ಷೆಗೂ ಮೀರಿ ಸ್ಪಂದನೆ’

ದಸರಾ ಧರ್ಮ ಸಮ್ಮೇಳನಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದಾರೆ. ಇಷ್ಟಲಿಂಗ ಪೂಜೆಗೂ ಭಾರಿ ಸಂಖ್ಯೆಯ ಜನರು ಆಗಮಿಸುತ್ತಿರುವುದನ್ನು ಕಂಡ ಸಂತಸವಾಯಿತು. ರಂಭಾಪುರಿ ಶ್ರೀಗಳು ಭಕ್ತರ ಬಗ್ಗೆ ಕಾಳಜಿ ಹೊಂದಿದ್ದಾರೆ. ಹೀಗಾಗಿ, ಬದುಕಿನ ಜಂಜಾಟದ ನಡುವೆಯೂ ಜನರಲ್ಲಿ ಭಕ್ತಿ ಭಾವ ಮೂಡುತ್ತಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕ ಅಧ್ಯಕ್ಷ ಬಲ್ಲೇನಹಳ್ಳಿ ರವಿಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.