ADVERTISEMENT

ಹೊಳೆನರಸೀಪುರ: ಅದಾಲತ್‌ನಿಂದ ಹೊರ ನಡೆದ ಉಪವಿಭಾಗಾಧಿಕಾರಿ ಜಗದೀಶ್‌

ಗ್ರಾಮ ಪಂಚಾಯಿತಿ ನಿರ್ಣಯ ಧಿಕ್ಕರಿಸಿ ಕ್ರಷರ್‌ಗೆ ಅನುಮತಿ: ಆರೋಪ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 5:41 IST
Last Updated 14 ಜನವರಿ 2022, 5:41 IST
ಕಂದಾಯ ಅದಾಲತ್‌ನಲ್ಲಿ ತಾತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಂತ್ ಹಾಗೂ ತಹಶೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ನಡುವೆ ವಾಗ್ವಾದ ನಡೆಯಿತು
ಕಂದಾಯ ಅದಾಲತ್‌ನಲ್ಲಿ ತಾತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಂತ್ ಹಾಗೂ ತಹಶೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ನಡುವೆ ವಾಗ್ವಾದ ನಡೆಯಿತು   

ಹೊಳೆನರಸೀಪುರ: ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಗುರುವಾರ ನಡೆದ ಕಂದಾಯ ಅದಾಲತ್‌ನಲ್ಲಿ ಕ್ರಷರ್‌ ಅನುಮತಿ ನೀಡುವ ವಿಚಾರಕ್ಕೆ ತಾತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಂತ್ ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಇದರಿಂದ ಬೇಸತ್ತ ಉಪವಿಭಾಗಾಧಿಕಾರಿ ಬಿ.ಎ.ಜಗದೀಶ್ ಸಭೆಯಿಂದ ಹೊರನಡೆದರು.

ತಹಶೀಲ್ದಾರ್ ಕೃಷ್ಣಮೂರ್ತಿ ಹಾಗೂ ಹೇಮಂತ್ ನಡುವಿನ ಕಾವೇರಿದ ಚರ್ಚೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅದಾಲತ್‌ನಲ್ಲಿ ಬೆಳಿಗ್ಗೆಯಿಂದ ರೈತರ ಅಹವಾಲು ಸ್ವೀಕರಿಸಿದ ಜಗದೀಶ್ ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು.

ADVERTISEMENT

ಅದಾಲತ್‌ ಮುಗಿಯುವ ವೇಳೆಗೆ ಬಂದ ತಾತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಂತ್, ‘ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕ್ರಷರ್‌ಗಳು ನಡೆಯುತ್ತಿವೆ. ಇದರಿಂದ ಮನೆಗಳು ಬಿರುಕು ಬಿಟ್ಟಿವೆ. ಹೊಸ ಕ್ರಷರ್‌ಗಳಿಗೆ ಅನುಮತಿ ನೀಡಬಾರದು ಎಂದು ಗ್ರಾಮ ಪಂಚಾಯಿತಿ ಸಭೆಯಲ್ಲಿ ನಿರ್ಣಯಿಸಿ ಈ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದರೂ ಅನುಮತಿ ನೀಡಲಾಗಿದೆ’ ಎಂದು ಏರು ದನಿಯಲ್ಲಿ ಪ್ರಶ್ನಿಸಿದರು.

ಹೇಮಂತ್ ನಡೆಗೆ ಅಸಮಾಧಾನ ಗೊಂಡ ಜಗದೀಶ್‌, ಅದಾಲತ್‌ನಿಂದ ಹೊರನಡೆದರು. ನಂತರ ತಹಶೀಲ್ದಾರ್ ಸಹ ಅವರನ್ನು ಹಿಂಬಾಲಿಸಿದರು.

ತಹಶೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ‘ಹೇಮಂತ್ ತಮ್ಮ ಸಮಸ್ಯೆಯನ್ನು ಸಂಪೂರ್ಣವಾಗಿ ವಿವರಿಸದೆ, ಉಪ ವಿಭಾಗಾಧಿಕಾರಿಯೊಂದಿಗೆ ಜೋರಾಗಿಮಾತನಾಡಿದ್ದು ಬೇಸರ ತರಿಸಿದೆ. ಕ್ರಷರ್‌ಗಳಿಗೆ ಕಂದಾಯ ಇಲಾಖೆಯಿಂದಅನುಮತಿ ನೀಡುವುದಿಲ್ಲ. ಪ್ರಕರಣದ ಬಗ್ಗೆ ಸಂಪೂರ್ಣವಾಗಿ ವಿವರಿಸದೆ ಏಕಾಏಕಿ ಜೋರಾಗಿ ಕೂಗಾಡಿರುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.