ADVERTISEMENT

ಸ್ವಂತ ಮನೆ ಕನಸಿಗೆ ಬ್ಯಾಂಕ್ ಸಾಲ ವರದಾನ

ಜಿಲ್ಲಾ ವಾರ್ತಾಧಿಕಾರಿ ವಿನೋದ್‌ ಚಂದ್ರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 13:31 IST
Last Updated 21 ಜನವರಿ 2021, 13:31 IST
ಹಾಸನದಲ್ಲಿ ಏರ್ಪಡಿಸಿದ್ದ ಗೃಹ ಸಾಲ ಮೇಳದಲ್ಲಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ವಿನೋದ್‌ ಚಂದ್ರ ಮಾತನಾಡಿದರು.
ಹಾಸನದಲ್ಲಿ ಏರ್ಪಡಿಸಿದ್ದ ಗೃಹ ಸಾಲ ಮೇಳದಲ್ಲಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ವಿನೋದ್‌ ಚಂದ್ರ ಮಾತನಾಡಿದರು.   

ಹಾಸನ: ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ಅಂತಹವರಿಗೆ ಬ್ಯಾಂಕ್‍ಗಳು ನೀಡುವ ಕಡಿಮೆ
ಬಡ್ಡಿ ದರದ ಸಾಲ ಸೌಲಭ್ಯ ವರದಾನವಾಗಿದೆ ಎಂದು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ
ವಿನೋದ್ ಚಂದ್ರ ತಿಳಿಸಿದರು.

ನಗರದ ಎನ್.ಆರ್. ಸರ್ಕಲ್‍ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಗುರುವಾರ ಏರ್ಪಡಿಸಿದ್ದ ಗೃಹ
ಸಾಲ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಸಾಲಗಳ ಮೂಲಕ ಸಮಸ್ಯೆಗಳ ಸುಳಿಗೆ ಸಿಗುವ
ಬದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತಿತರರ ಬ್ಯಾಂಕ್‍ಗಳಲ್ಲಿ ಸಿಗುವ ಸುಲಭ ಕಂತುಗಳ
ಸಾಲ ಪಡೆಯುವುದು ಸೂಕ್ತ ಎಂದು ಸಲಹೆ ನೀಡಿದರು.

ಸಾಲವನ್ನು ಸಕಾಲಕ್ಕೆ ಮರು ಪಾವತಿಸಬೇಕು. ಹೊಣೆಗಾರಿಕೆ ಹಾಗೂ ಜವಾಬ್ದಾರಿ ಪ್ರದರ್ಶಿಸಿ ಆರ್ಥಿಕ ಶಿಸ್ತು ಪ್ರದರ್ಶಿಸಿದರೆ ನೆಮ್ಮದಿಯ ಜೊತೆಗೆ ಕುಟುಂಬ ಹಾಗೂ ರಾಷ್ಟದ ಪ್ರಗತಿ ಸಾಧ್ಯ ಎಂದು ನುಡಿದರು.

ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ಶ್ರೀಪತಿ ಎಂ. ಮಾತನಾಡಿ, ಮನೆ ಕಟ್ಟಲು
ಬ್ಯಾಂಕ್‍ನ ಶಾಖೆಗಳಲ್ಲಿ ಇತರೆ ಬ್ಯಾಂಕ್‍ಗಳಿಗಿಂತ ಆಕರ್ಷಕ ಕಡಿಮೆ ಬಡ್ಡಿ ದರ ಹಾಗೂ ಕಂತುಗಳ ರೂಪದಲ್ಲಿ
ಸಾಲ ದೊರೆಯಲಿದೆ. ದಾಖಲೆಗಳನ್ನು ಪರೀಶಿಲಿಸಿ ಸ್ಥಳದಲ್ಲೇ ಸಾಲ ನೀಡಲಾಗುತ್ತದೆ. ಗ್ರಾಹಕರು
ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ADVERTISEMENT

ಮನೆ ನಿರ್ಮಾಣ, ಖರೀದಿ, ಖಾಲಿ ನಿವೇಶನ ಕೊಂಡುಕೊಳ್ಳಲು ಆರ್ಥಿಕ ನೆರವು ಒದಗಿಸಲಾಗುವುದು. ಚಿನ್ನದ
ಗಿರವಿ ಸಾಲ ನೀಡಲಾಗುತ್ತದೆ. ಇದೊಂದು ವಿಶೇಷ ಸಾಲ ಮೇಳವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ಶಾಖಾ ವ್ಯವಸ್ಥಾಪಕ ಶ್ರೀಜಿತ್, ಎನ್. ಆರ್. ವೃತ್ತದ ಎಸ್.ಬಿ.ಐ ಶಾಖಾ
ವ್ಯವಸ್ಥಾಪಕ ಬಾಲಸುಬ್ರಹ್ಮಣ್ಯ, ಶಾಖಾ ವ್ಯವಸ್ಥಾಪಕ ಬೋಪಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.