ADVERTISEMENT

ಹಾಸನ: ಮತ್ತೆ ಮಳೆಯ ಆರ್ಭಟ, ಬಿಸಿಲೆ ಘಾಟ್ ಬಂದ್‌

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 14:36 IST
Last Updated 3 ಸೆಪ್ಟೆಂಬರ್ 2019, 14:36 IST
ಬಿಸಿಲೆ ಘಾಟ್‌ ಮಾರ್ಗದಲ್ಲಿ ಭಾರಿ ಗಾತ್ರದ ಮರ ಬುಡಮೇಲಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು.
ಬಿಸಿಲೆ ಘಾಟ್‌ ಮಾರ್ಗದಲ್ಲಿ ಭಾರಿ ಗಾತ್ರದ ಮರ ಬುಡಮೇಲಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು.   

ಹಾಸನ: ಹಲವು ದಿನಗಳ ಬಿಡುವಿನ ಬಳಿಕ ಮಲೆನಾಡು ಸೇರಿದಂತೆ ಜಿಲ್ಲೆಯ ವಿವಿಧೆಡೆ ಮತ್ತೆ ಮಳೆ ಆರ್ಭಟ ಶುರುವಾಗಿದೆ.

ಹಾಸನ, ಆಲೂರು, ಬೇಲೂರು, ಚನ್ನರಾಯಪಟ್ಟಣ, ಶ್ರವಣಬೆಳಗೊಳ ಹಾಗೂ ಸಕಲೇಶಪುರ ತಾಲ್ಲೂಕುಗಳಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯಲಾರಂಭಿಸಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.


ಗಣೇಶ ಹಬ್ಬಕ್ಕೆ ಮಳೆಯೇ ವಿಘ್ನವಾದಂತಾಗಿದೆ. ನಗರದ ಬಿ.ಎಂ. ರಸ್ತೆ, ಎನ್‌.ಆರ್‌.ವೃತ್ತ ಸೇರಿದಂತೆ ಹಲವೆಡೆ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ಚರಂಡಿ ನೀರು ತುಂಬಿ ರಸ್ತೆ ಮೇಲೆ ಹರಿಯಿತು. ಆನೆಮಹಲ್ ಗ್ರಾಮದಲ್ಲಿ ಮನೆಯೊಂದು ಕುಸಿದಿದೆ.

ADVERTISEMENT

ಭಾರಿ ಮಳೆಯಿಂದ ಸಕಲೇಶಪುರ ತಾಲ್ಲೂಕು ಬಿಸಿಲೆ ಘಾಟ್ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಭಾರಿ ಗಾತ್ರದ ಮರ ಬುಡಮೇಲಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಹೀಗಾಗಿ ಸೋಮವಾರ ರಾತ್ರಿಯಿಂದಲೂ ಬಿಸಿಲೆ ಘಾಟ್ ಮಾರ್ಗದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದಾಗಿ ಬಿಸಿಲೆ ಮೂಲಕ ಸುಬ್ರಹ್ಮಣ್ಯ ಮಂಗಳೂರಿಗೆ ತೆರಳ ಬೇಕಿದ್ದ ಹಾಗೂ ಆ ಕಡೆಯಿಂದ ಹಾಸನ, ಸಕಲೇಶಪುರಕ್ಕೆ ಬರಬೇಕಿದ್ದ ಪ್ರಯಾಣಿಕರು ನಡು ರಸ್ತೆಯಲ್ಲಿ ಸಿಲುಕಿ ರಾತ್ರಿಯಿಡೀ ಪರದಾಡ ಬೇಕಾಯಿತು.

ಬೆಳಗ್ಗೆವರೆಗೂ ಮರ ತೆರವು ಮಾಡಲು ಸಂಬಂಧಪಟ್ಟ‌ ಯಾರೊಬ್ಬರೂ ಘಟನಾ ಸ್ಥಳಕ್ಕೆ ಬರಲಿಲ್ಲ. ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ಅರಣ್ಯ ಇಲಾಖೆ ಸಿಬ್ಬಂದಿ ಯಂತ್ರ ಬಳಸಿ ಮರ ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಜಲಾನಯನ ಪ್ರದೇಶಗಳಾದ ಸಕಲೇಶಪುರ, ಮೂಡಿಗೆರೆ ಭಾಗಗಳಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಹೇಮಾವತಿ ಜಲಾಶಯಕ್ಕೆ ಒಳಹರಿವು ತುಸು ಏರಿಕೆಯಾಗಿದೆ. ಸೆ.2 ರಂದು 6949 ಕ್ಯುಸೆಕ್‌ ಇದ್ದ ಒಳ ಹರಿವು, 3 ರಂದು 10,373 ಕ್ಯುಸೆಕ್‌ಗೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.