ADVERTISEMENT

ಹಾಸನ | ಬೆಂಬಿಡದ ಮಳೆ: ರೈತರ ಕೈಗೆ ಸಿಗದ ಬೆಳೆ

ಮುಸುಕಿನ ಜೋಳದ ಬಿತ್ತನೆಯಿಂದ ಕಟಾವಿನವರೆಗೂ ಮಳೆಯ ಸಂಕಷ್ಟ

ಎಂ.ಪಿ.ಹರೀಶ್
Published 5 ನವೆಂಬರ್ 2025, 7:54 IST
Last Updated 5 ನವೆಂಬರ್ 2025, 7:54 IST
ಮಂಗಳವಾರ ತುಂತುರು ಮಳೆ ಆರಂಭವಾಗಿದ್ದು, ಆಲೂರು ತಾಲ್ಲೂಕಿನಲ್ಲಿ ಕಟಾವು ಮಾಡಿದ್ದ ಜೋಳದ ತೆನೆಗಳನ್ನು ಟಾರ್ಪಾಲಿನಿಂದ ಮುಚ್ಚಿರುವುದು 
ಮಂಗಳವಾರ ತುಂತುರು ಮಳೆ ಆರಂಭವಾಗಿದ್ದು, ಆಲೂರು ತಾಲ್ಲೂಕಿನಲ್ಲಿ ಕಟಾವು ಮಾಡಿದ್ದ ಜೋಳದ ತೆನೆಗಳನ್ನು ಟಾರ್ಪಾಲಿನಿಂದ ಮುಚ್ಚಿರುವುದು    

ಆಲೂರು: ಬಿಸಿಲನ್ನು ನಂಬಿ ಜೋಳದ ಕಟಾವು ಮಾಡುತ್ತಿದ್ದ ತಾಲ್ಲೂಕಿನ ರೈತರಿಗೆ ಮತ್ತೆ ಮಳೆ ಸಂಕಷ್ಟ ತಂದೊಡ್ಡಿದೆ. ಎರಡು ದಿನಗಳಿಂದ ಬಿಸಿಲು ಇತ್ತು. ಆದರೆ, ಮಂಗಳವಾರ ಮದ್ಯಾಹ್ನದಿಂದ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ತುಂತುರು ಮಳೆ ಆರಂಭವಾಗಿದೆ.

ತಿಂಗಳ ಮೊದಲೇ ಜೋಳ ಕಟಾವು ಮಾಡಬೇಕಾಗಿತ್ತು. ಆದರೆ ನಿರಂತರ ಮಳೆಯಿಂದಾಗಿ ಕಟಾವು ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ತೆನೆಯಲ್ಲಿಯೇ ಜೋಳದ ಕಾಳು ಮೊಳಕೆ ಒಡೆಯುತ್ತಿವೆ. ಬಿಸಿಲು ಇದ್ದುದರಿಂದ ರೈತರು ಅಳಿದುಳಿದ ಮುಸುಕಿನ ಜೋಳವನ್ನು ಮುರಿಯಲು ಪ್ರಾರಂಭಿಸಿದ್ದರು.

ಕನಿಷ್ಠ ಒಂದು ವಾರ ಸುಡು ಬಿಸಿಲು ಬಿದ್ದ ನಂತರ ಜೋಳ ಕಟಾವು ಮಾಡಬೇಕಾಗಿತ್ತು. ಆದರೆ ಮುಂದಿನ ವಾರದಲ್ಲಿ ಮತ್ತೆ ಮಳೆಯಾಗಲಿದೆ ಎಂಬ ಹವಾಮಾನ ವರದಿ ಹಿನ್ನೆಲೆಯಲ್ಲಿ, ಈಗಲೇ ರೈತರು ಜೋಳ ಕಟಾವು ಮಾಡಲು ಮುಂದಾಗಿದ್ದಾರೆ.

ADVERTISEMENT

ಮಂಗಳವಾರ ಸಂಜೆಯಿಂದ ಮಳೆ ಸುರಿಯಲು ಆರಂಭಿಸಿದ್ದು, ಹೊಲದ ಸನಿಹದಲ್ಲೇ ಜೋಳವನ್ನು ಗುಡ್ಡೆ ಮಾಡಿ, ಟಾರ್ಪಾಲು ಮುಚ್ಚಿದ್ದಾರೆ. ಕಟಾವು ಮಾಡಿರುವ ಜೋಳವನ್ನು 24 ಗಂಟೆಯೊಳಗೆ ಬಿಸಿಲಿನಲ್ಲಿ ಒಣಗಿಸದಿದ್ದರೆ, ತೇವಾಂಶ ಹೆಚ್ಚಿನ ಜೋಳದ ಕಾಳು ಕಪ್ಪಾಗುತ್ತದೆ ಎನ್ನುತ್ತಾರೆ ರೈತರು.

ಕಪ್ಪಾದ ಜೋಳಕ್ಕೆ ಉತ್ತಮ ಬೆಲೆ ಸಿಗುವುದಿಲ್ಲ. ಹೀಗಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಜೋಳವನ್ನು ಬಿತ್ತನೆ ಮಾಡಿದ ದಿನದಿಂದ ಒಂದಲ್ಲ ಒಂದು ಸಂಕಟಕ್ಕೆ ಸಿಲುಕಿದ್ದು, ಕಟಾವು ಮಾಡುವ ಸಂದರ್ಭದಲ್ಲೂ ಹವಾಮಾನ ವೈಪರೀತ್ಯದಿಂದ ತೊಂದರೆ ಎದುರಾಗಿದೆ. ಸರ್ಕಾರ ಕೂಡಲೇ ನೆರವಿಗೆ ಬರಬೇಕು ಎಂಬುದು ರೈತರ ಒತ್ತಾಯವಾಗಿದೆ.

ಎಕರೆ ಹೊಲದಲ್ಲಿ ಜೋಳ ಬೆಳೆಯಲು ಸುಮಾರು ₹ 50 ಸಾವಿರ ಖರ್ಚಾಗುತ್ತದೆ. ಈ ವರ್ಷ ₹ 10 ಸಾವಿರ ಸಿಗುವುದೂ ಕಷ್ಟವಾಗಿದೆ. ರೈತರ ಮಕ್ಕಳು ಪಟ್ಟಣಕ್ಕೆ ವಲಸೆ ಹೋಗುವಂತಾಗಿದ್ದು ಸರ್ಕಾರ ನೆರವಿಗೆ ಬರಬೇಕು.
– ರೇವಣ್ಣ, ಯಡೂರು ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.