ADVERTISEMENT

‘3 ಪಂಚಾಯಿತಿ ಚುನಾವಣೆ ಬಹಿಷ್ಕರಿಸಲು ನಿರ್ಧಾರ’

ಕಸ್ತೂರಿ ರಂಗನ್ ವರದಿ ಅನುಷ್ಠಾನ ರೈತರಿಗೆ ಮಾರಕ: ಮಲೆನಾಡಿನ ಬೆಳೆಗಾರರ ಮುಖಂಡರ ಆರೋಪ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 5:39 IST
Last Updated 9 ಡಿಸೆಂಬರ್ 2020, 5:39 IST
ಹೊಂಗಡಹಳ್ಳ ಗ್ರಾಮದಲ್ಲಿ ವಿವಿಧ ಪಕ್ಷಗಳ ಮುಖಂಡರು ಪ್ರತಿಭಟನೆ ನಡೆಸಿದರು
ಹೊಂಗಡಹಳ್ಳ ಗ್ರಾಮದಲ್ಲಿ ವಿವಿಧ ಪಕ್ಷಗಳ ಮುಖಂಡರು ಪ್ರತಿಭಟನೆ ನಡೆಸಿದರು   

ಹೆತ್ತೂರು: ‘ಕಸ್ತೂರಿ ರಂಗನ್ ವರದಿ ಯಲ್ಲಿರುವ ಹೋಬಳಿಯ ಮೂರು ಗ್ರಾಮ ಪಂಚಾಯಿತಿಗಳಲ್ಲಿ ಈ ಬಾರಿಯ ಚುನಾವಣೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಲಾಗುವುದು’ ಎಂದು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಜೆ.ಸಚ್ಚಿನ್ ತಿಳಿಸಿದರು.

ಬೆಳೆಗಾರರ ಸಂಘದ ನೇತೃತ್ವದಲ್ಲಿ ಮಂಗಳವಾರ ವಿವಿಧ ಪಕ್ಷಗಳ ಮುಖಂಡರು ಸಭೆ ನಡೆಸಿ ಚುನಾವಣೆ ಬಹಿಷ್ಕಾರದ ನಿರ್ಧಾರ ಕೈಗೊಂಡಿದ್ದಾರೆ.

‘ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಕಸ್ತೂರಿ ರಂಗನ್ ವರದಿ ಹಾಗೂ ಆನೆ ಕಾರಿಡಾರ್ ಯೋಜನೆಯ ಪಟ್ಟಿಯಲ್ಲಿವೆ. ಇದು ಜಾರಿಯಾದರೆ ಆಯಾ ಗ್ರಾಮಗಳ ಅಭಿವೃದ್ಧಿ ಅಸಾಧ್ಯವಾಗುತ್ತದೆ. ಹಾಗಾಗಿ
ಡಿ. 22ರಂದು ನಡೆಯುವ ಹೊಂಗಡಹಳ್ಳ, ವಳ್ಳಲಹಳ್ಳಿ ಹಾಗೂ ಹೆತ್ತೂರು ಗ್ರಾ.ಪಂ. ಚುನಾವಣೆ ಬಹಿಷ್ಕರಿಸಲಾಗುವುದು’ ಎಂದರು.

ADVERTISEMENT

ಜಿ.ಪಂ. ಸದಸ್ಯೆ ಉಜ್ಮಾ ರುಜ್ಮಿ ಸುದರ್ಶನ್‌ ಮಾತನಾಡಿ, ‘ಆನೆ ಕಾರಿಡಾರ್, ಮೀಸಲು ಅರಣ್ಯ, ಸಮಸ್ಯೆಗಳು ಈಗಾಗಲೇ ರೈತರಿಗೆ ಮಾರಕವಾಗಿವೆ. ಈಗ ಕಸ್ತೂರಿ ರಂಗನ್ ವರದಿಯಿಂದ ಹೋಬಳಿಯ 25 ಗ್ರಾಮಗಳ ಜನರು ಬೀದಿಗೆ ಬೀಳಲಿದ್ದಾರೆ. ಮಲೆನಾಡು ಭಾಗದಲ್ಲಿ ಕಾಫಿ ತೋಟ ಅಭಿವೃದ್ಧಿಪಡಿಸುವ ಬೆಳೆಗಾರರು ಪರೋಕ್ಷವಾಗಿ ಅರಣ್ಯ ಪ್ರದೇಶವನ್ನು ಹೆಚ್ಚಳಗೊಳಿಸುತ್ತಿದ್ದಾರೆ. ಆದರೆ, ರೈತರು, ಕೂಲಿಕಾರರು, ಆದಿವಾಸಿಗಳ ವಿರುದ್ಧದ ಕಾನೂನು ಜಾರಿ ಸರಿಯಲ್ಲ’ ಎಂದರು.

‌ಕೃಷಿ ಪತ್ತಿನ ಸಂಘ ಅಧ್ಯಕ್ಷ ಪ್ರಸನ್ನಕುಮಾರ್, ಬಿಜೆಪಿ ಮುಖಂಡ ಚಂದನ್, ಕಾಂಗ್ರೆಸ್‌ ಮುಖಂಡ ಯರಗಳ್ಳಿ ಹರೀಶ್, ಗ್ರಾ.ಪಂ. ಮಾಜಿ ಸದಸ್ಯರಾದ ಜಯರಾಜ್, ಚಂದ್ರು ಕುಮಾರ್, ಜಾಗಾಟೆ ಯತೀಶ್ ಇದ್ದರು.

‘ಈ ಮೂರು ಗ್ರಾಮಗಳಿಗೆ ಭೇಟಿ ನೀಡಿ ಜನರ ಮನವೊಲಿಸಿ, ಚುನಾವಣೆ ಬಹಿಷ್ಕರಿಸದಂತೆ ಮನವಿ ಮಾಡಲಾಗುವುದು’ ಎಂದು ಉಪ ತಹಶೀಲ್ದಾರ್‌ ಕೆ.ಆರ್.ಗಂಗಾಧರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.