ADVERTISEMENT

ಅನುದಾನ ಹಂಚಿಕೆಯಲ್ಲಿ ತಾರತಮ್ಯ

ಕೇಂದ್ರದಿಂದ ಶಿವಮೊಗ್ಗಕ್ಕೆ ₹5,500 ಕೋಟಿ ಮಂಜೂರು: ರೇವಣ್ಣ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 14:26 IST
Last Updated 28 ಜೂನ್ 2021, 14:26 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗಕ್ಕೆ ಕೇಂದ್ರ ಸರ್ಕಾರ 2019ರಿಂದ ರಸ್ತೆ ಅಭಿವೃದ್ಧಿಗೆ ₹5,500 ಕೋಟಿಅನುದಾನ ಮಂಜೂರು ಮಾಡಿದ್ದು, ಇತರೆ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ ಎಂದು
ಶಾಸಕ ಎಚ್‌.ಡಿ.ರೇವಣ್ಣ ಆರೋಪಿಸಿದರು.

ರಾಷ್ಟ್ರೀಯ ಹೆದ್ದಾರಿ ಇಲಾಖೆ (ಎನ್‌.ಎಚ್‌) ಗೆ ₹4 ಸಾವಿರ ಕೋಟಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್ಎಚ್‌ಎಐ) ಕ್ಕೆ₹1,500 ಕೋಟಿ ಅನುದಾನ ನೀಡಲಾಗಿದೆ. ರಾಜ್ಯದ ಭೂಪಟದಲ್ಲಿ ಬೇರೆಜಿಲ್ಲೆಗಳು ಇಲ್ಲವೇ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಹಾಸನದಲ್ಲಿ ಆರು ಜೆಡಿಎಸ್‌ ಶಾಸಕರು ಇದ್ದಾರೆ. ಜೆಡಿಎಸ್‌ ಗೆ ಜನ ಮತನೀಡಿದ್ದಾರೆ ಎಂಬ ಕಾರಣಕ್ಕೆ ಜಿಲ್ಲೆಗೆ ಅನುದಾನ ನೀಡುತ್ತಿಲ್ಲ. ಬಿಜೆಪಿಯ 25ಸಂಸದರ ಕ್ಷೇತ್ರಗಳಿಗೆ ಕೇಂದ್ರ ಸರ್ಕಾರದಿಂದ ಎಷ್ಟು ಅನುದಾನ ನೀಡಲಾಗಿದೆ
ಎಂಬ ಮಾಹಿತಿ ಬಹಿರಂಗ ಪಡಿಸಬೇಕು. ಅನುದಾನ ಹಂಚಿಕೆಯಲ್ಲಿ ತಾರತಮ್ಯನಡೆದರೂ ಬಿಜೆಪಿ ಸಂಸದರು ಬಾಯಿ ಬಿಡುವುದಿಲ್ಲ. ಕೇವಲ ಟಿ.ಎ, ಡಿ.ಎ ಪಡೆಯಲು ದೆಹಲಿಗೆ ಹೋಗಿ ಬರುತ್ತಾರೆ ಎಂದು ಹೇಳಿದರು.

ಕೋವಿಡ್‌ ನೆಪ ಹೇಳಿ ಸಂಸದರ ಪ್ರದೇಶಾಭಿವೃದ್ಧಿ ಅನುದಾನ ಕಡಿತಮಾಡಲಾಗಿದೆ. ಜಿಲ್ಲೆಗೆ 10 ವರ್ಷಗಳಿಂದಲೂ ಅನುದಾನ ನೀಡಿಲ್ಲ. ಸಮ್ಮಿಶ್ರಸರ್ಕಾರದಲ್ಲಿ ಸಿ.ಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಹಾಸನದಲ್ಲಿ ಸೂಪರ್‌
ಸ್ಟೆಷಾಲಿಟಿ ಆಸ್ಪತ್ರೆಗೆ ₹50 ಕೋಟಿ ಅನುದಾನ ನೀಡಿದ್ದರು. ಹಾಸನ, ಮಂಡ್ಯ,ರಾಮನಗರ ಬಜೆಟ್‌ ಎಂದು ಬಿಜೆಪಿ ನಾಯಕರು ಟೀಕಿಸಿದ್ದರು ಎಂದರು.

ADVERTISEMENT

ಮುಖ್ಯಮಂತ್ರಿ ಪರ ಮಾತನಾಡಿದ ಶಾಸಕರ ಕ್ಷೇತ್ರಕ್ಕೆ ನೀರಾವರಿ ಯೋಜನೆಗೆ ₹850 ಕೋಟಿಅನುದಾನ ನೀಡಲಾಗಿದೆ. ಕೋವಿಡ್‌ ನೆಪ ಹೇಳಿ ಶಾಸಕರಪ್ರದೇಶಾಭಿವೃದ್ಧಿ ಅನುದಾನ ಸಹ ಕಡಿತ ಮಾಡಲಾಗಿದೆ. ಜಿಲ್ಲೆಯ ಎಲ್ಲಾಕಾಮಗಾರಿಗಳನ್ನು ಸಂಪೂರ್ಣ ನಿಲ್ಲಿಸಲಾಗಿದೆ. ಗುತ್ತಿಗೆದಾರರಿಗೆ ಬಿಲ್‌ಪಾವತಿಯಾಗಿಲ್ಲ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ಹಣಕಾಸಿನ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು.ಜುಲೈ 5 ರಂದು ಲಾಕ್ ಡೌನ್‌ ತೆರವು ಮಾಡಿದ ಬಳಿಕ ಕೂಡಲೇ ಅಧಿವೇಶನಕರೆಯಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ
ನೀಡಿದರು.

ಅರಸೀಕೆರೆ ನಗರಸಭೆ ಜೆಡಿಎಸ್‌ ಸದಸ್ಯರಿಗೆ ಹಣ ನೀಡಿ ಖರೀದಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯೆ ಕಲೈ ಅರಸಿ ಪೊಲೀಸರಿಗೆ ದೂರು ನಿಡಿದ್ದಾರೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್‌. ಸಂತೋಷ್‌ ಮಾನನಷ್ಟ ಹಾಕಲಿ. ಸದಸ್ಯೆ ಜತೆ ಮಾತನಾಡಿರುವ ಕರೆಗಳ ಮಾಹಿತಿ ಇದೆ. ತನಿಖೆ ವೇಳೆ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.