ಹೊಳೆನರಸೀಪುರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದು 2 ದಿನದ ನಂತರ ಕಿರಣ್ ಕುಮಾರ್ (25) ಎಂಬ ಯುವಕ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ತಮ್ಮ ಮಗ ಮೃತಪಟ್ಟಿದ್ದಾನೆ ಎಂದು ಮೃತನ ತಂದೆ ನಾಗರಾಜು ಆರೋಪಿಸಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಡಾ. ಪ್ರತಿಭಾ ಅವರು 2 ತಿಂಗಳಿಂದ ತನ್ನ ಮಗನ ತೊಡೆಯಲ್ಲಿ ಆಗಿದ್ದ ಗಾಯಕ್ಕೆ ಚಿಕಿತ್ಸೆ ನೀಡುತ್ತಿದ್ದರು. ವೈದ್ಯರ ಸಲಹೆ ಮೇರೆಗೆ 3 ಸಲ ಸ್ಕ್ಯಾನಿಂಗ್ ಮಾಡಿಸಲಾಗಿತ್ತು. ಶಸ್ತ್ರಚಿಕಿತ್ಸೆ ಮಾಡಲು ಬುಧವಾರ ₹5 ಸಾವಿರ ಕೇಳಿದರು. ನನ್ನಲ್ಲಿದ್ದ ₹3 ಸಾವಿರ ನೀಡಿದ್ದೆ, ನಂತರ ಉಳಿಕೆ ಹಣ ನೀಡಬೇಕು ಎಂದರು.
ಇವನಿಗೆ 14 ತಿಂಗಳ ಹಿಂದೆ ಮದುವೆ ಮಾಡಲಾಗಿತ್ತು. 20 ದಿನದ ಹಿಂದೆ ಮಗುವಾಗಿತ್ತು ಎಂದು ಕಣ್ಣೀರಿಟ್ಟರು.
‘ವೈದ್ಯರ ನಿರ್ಲಕ್ಷ್ಯದಿಂದ ಈ ಅನಾಹುತ ನಡೆದಿದ್ದು, ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ವೈದ್ಯರ ವಿರುದ್ಧ ದೂರು ದಾಖಲಿಸುತ್ತೇವೆ’ ಎಂದು ಗ್ರಾಮಸ್ಥರು ತಿಳಿಸಿದರು.
‘ಕಿರಣ್ ಕುಮಾರ್ ಕಾಲಿನಲ್ಲಿದ್ದ ಗಂಟಿಗೆ ಚಿಕಿತ್ಸೆ ನೀಡುತ್ತಿದೆ. ಹೆಚ್ಚು ಓಡಾಡಬಾರದು ಎಂದೂ ತಿಳಿಸಿದ್ದೆನು. ಪೊಲೀಸ್ ತರಬೇತಿಯಲ್ಲಿ ಭಾಗವಹಿಸಬೇಕು ಎಂದಿದ್ದ. ನಾನು ಮೂರುದಿನಗಳ ಹಿಂದೆ ಶಸ್ತ್ರ ಚಿಕಿತ್ಸೆ ಮಾಡಿದ್ದು, ಗುಣವಾಗಿ ಆರಾಮವಾಗಿ ಓಡಾಡುತ್ತಿದ್ದರು. ಶುಕ್ರವಾರ ಮತ್ತೆ ಡ್ರಸ್ಸಿಂಗ್ ಮಾಡಿದ್ದೆನು. ಇದ್ದಕ್ಕಿಂದಂತೆ ಸುಸ್ತಾಗುತ್ತಿದೆ ಎಂದವನು ತಕ್ಷಣ ಕೆಳಕ್ಕೆ ಬಿದ್ದ. ನಾವು ಇತರೆ ವೈದ್ಯರು ತಕ್ಷಣ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡುವ ವೇಳೆಗೆ ಹೃದಯ ಸ್ಥಂಭನವಾಗಿತ್ತು’ ಎಂದು ಡಾ. ಪ್ರತಿಭಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.