ADVERTISEMENT

ಹಾಸನ ಜಿಲ್ಲೆಯ ಕೆಲವೆಡೆ ಕಂಪಿಸಿದ ಭೂಮಿ: ಮನೆಯಿಂದ ಹೊರಗೆ ಓಡಿದ ಜನರು

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 5:34 IST
Last Updated 23 ಜೂನ್ 2022, 5:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾಸನ: ಜಿಲ್ಲೆಯ ಕೆಲವೆಡೆ ಗುರುವಾರ ಬೆಳಗಿನ ಜಾವ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದರು.

ಬೆಳಗಿನ ಜಾವ 4.37 ರ ಸುಮಾರಿಗೆ ಕೆಲಕಾಲ ಭೂಮಿ ಕಂಪಿಸಿದೆ. ನಿದ್ರೆಯ ಮಂಪರಿನಲ್ಲಿದ್ದ ಜನರು ಗಾಬರಿಗೊಂಡು ಮನೆಗಳಿಂದ ಹೊರಬಂದರು.

ಹೊಳೆನರಸೀಪುರ ತಾಲ್ಲೂಕಿನ ಮಾಲುಗೇನಹಳ್ಳಿಯಲ್ಲಿ ಕಂಪನ ಕೇಂದ್ರವಾಗಿದ್ದು, ಸುತ್ತಲಿನ 40–50 ಕಿ.ಮೀ. ವ್ಯಾಪ್ತಿಯಲ್ಲಿ ಕಂಪನದ ಅನುಭವವಾಗಿದೆ. ಇದರ ತೀವ್ರತೆ 3.4 ಮ್ಯಾಗ್ನಿಟ್ಯೂಡ್ ಆಗಿತ್ತು.

ಈ ರೀತಿಯ ಕಂಪನದಿಂದ ಯಾವುದೇ ಹಾನಿ ಉಂಟಾಗುವುದಿಲ್ಲ. ಈ ಎಪಿಸೆಂಟರ್‌ ಸೆಸ್ಮಿಕ್‌ ವಲಯ 2 ರ ಅಡಿ ಬರುತ್ತಿದ್ದು, ಭೂಕಂಪನದ ಸಾಧ್ಯತೆಗಳು ಕಡಿಮೆ ಇರುತ್ತವೆ. ಅಲ್ಲದೇ ಹಾನಿ ಆಗುವ ಸಾಧ್ಯತೆಗಳು ಕಡಿಮೆ. ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ.

ಭೂಕಂಪನಕ್ಕೂ ಮೊದಲು ದೊಡ್ಡ ಸದ್ದು
ಹಾಸನ:
ಜಿಲ್ಲೆಯ ಹಲವು ಗ್ರಾಮಸ್ಥರಿಗೆ ಗುರುವಾರ ಬೆಳಗಿನ ಜಾವ ಭೂಮಿಯು ಕಂಪಿಸಿರುವುದು ಸ್ಪಷ್ಟವಾಗಿ ಅನುಭವಕ್ಕೆ ಬಂದಿದೆ. ಭೂಕಂಪನಕ್ಕೂ ಮೊದಲು ದೊಡ್ಡ ಸದ್ದು ಕೇಳಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ನಸುಕಿನ ಜಾವ 4.38 ರ ಸುಮಾರಿಗೆ ಭೂಮಿ ಲಘುವಾಗಿ ಕಂಪಿಸಿದೆ. ಅರಕಲಗೂಡು ಮತ್ತು ಹೊಳೆನರಸೀಪುರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಜನರಿಗೆ ಭೂಮಿಯು ಕಂಪಿಸಿರುವುದು ಅನುಭವಕ್ಕೆ ಬಂದಿದೆ.

ಅರಕಲಗೂಡು ಪಟ್ಟಣ, ತಾಲ್ಲೂಕಿನ ಮುದ್ದನಹಳ್ಳಿ, ಹನೆಮಾರನಹಳ್ಳಿ, ಕಾರಳ್ಳಿ, ಹೊಳೆನರಸೀಪುರ ತಾಲ್ಲೂಕಿನ ಚಿಟ್ನಳ್ಳಿ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಭೂಮಿಯು ಕಂಪಿಸಿದ್ದು ಸ್ಪಷ್ಟವಾಗಿ ಜನರ ಅರಿವಿಗೆ ಬಂದಿದೆ.

ಭೂಮಿಯು ಅಲುಗಾಡುತ್ತಿರುವ ಅನುಭವವಾದ ತಕ್ಷಣ ಜನರು ಭಯಗೊಂಡು ಮನೆಗಳಿಂದ ಹೊರಗೆ ಓಡಿ ಬಂದರು. ಈ ಘಟನೆಯು ಜನರಲ್ಲಿ ಭೀತಿ ಉಂಟು ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.