ಹಾಸನ: ನೈಸರ್ಗಿಕ ಸಂಪನ್ಮೂಲಗಳಾದ ಭೂಮಾತೆ, ಸೂರ್ಯ, ಹೇಮಾವತಿ, ನೀರಿನ ಝರಿಗಳನ್ನು ವಿವಿಧ ಬಗೆಯ ಬಣ್ಣ ಬಣ್ಣದ ಹೂಗಳಿಂದ ಸಿಂಗರಿಸಿ ಪ್ರದರ್ಶಿಸಲಾಗಿದೆ.
ಶ್ರೇಷ್ಠ ಕವಿಗಳು, ಪ್ರಸಿದ್ಧ ರಾಜಕಾರಣಿಗಳ ಭಾವಚಿತ್ರಗಳನ್ನು ತರಕಾರಿ, ಹಣ್ಣುಗಳ ಮೇಲೆ ಕೆತ್ತನೆಯ ಮೂಲಕ ಪ್ರದರ್ಶಿಸಲಾಗಿದೆ. ಜೊತೆಗೆ ರಾಧಾ-ಕೃಷ್ಣ, ಬಲರಾಮ, ಬಾತುಕೋಳಿಗಳನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಪ್ರದರ್ಶಿಸಿರುವುದು ನೋಡುಗರ ಕಣ್ಮನ ಸೆಳೆಯುತ್ತಿದೆ.
ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ, ನಾಲ್ಕು ದಿನಗಳ ಕಾಲ ಫಲ ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಹಾಸನದ ಜನತೆ ಮತ್ತು ಜಾತ್ರೆಗೆ ಬರುವ ಜನರು ದೇವಿಯ ದರ್ಶನ ಮುಗಿಸಿ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹೇಮಾವತಿ ತೊಟಗಾರಿಕೆ ಸಂಘ ಆಶ್ರಯದಲ್ಲಿ ನಗರದ ಸಿಲ್ವರ್ ಜುಬಿಲಿ ಆರ್ಚರ್ಡ್ ಪಾರ್ಕ್ನಲ್ಲಿ ನಡೆಯುತ್ತಿರುವ ಪ್ರದರ್ಶನ ನಿತ್ಯ ಬೆಳಿಗ್ಗೆ 8 ರಿಂದ ರಾತ್ರಿ 10 ಗಂಟೆಯವರೆಗೆ ತೆರೆದಿರುತ್ತದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಹಾಸನಾಂಬ ದೇವಾಲಯದ ಗೋಪುರ, ಗರುಡಗಂಬ, ದೀಪ, ಸ್ವಸ್ತಿಕ್ ಮತ್ತು ಟಯರ್, ಸೈಕಲ್, ವಾಹನಗಳು, ಸ್ಕೂಟರ್, ಬಾಟಲ್ಗಳಂತಹ ಹಳೆ ಉಪಕರಣಗಳನ್ನು ಉಪಯೋಗಿಸಿ ಒಂದೊಂದು ರೀತಿಯ ಪರಿಕಲ್ಪನೆಗಳಲ್ಲಿ ಪ್ರಕೃತಿಯನ್ನು ಹಾಳು ಮಾಡದೇ ಯಾವ ರೀತಿ ಉಳಿಸಿಕೊಳ್ಳಬೇಕು ಮತ್ತು ಇರುವ ವಸ್ತುಗಳನ್ನು ಹೇಗೆ ಬಳಸಬೇಕು ಎನ್ನುವುದರ ಕುರಿತು ಫಲಪುಷ್ಪ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಹೇಮಾವತಿ ತೋಟಗಾರಿಕೆ ಸಂಘದ ಉಪಾಧ್ಯಕ್ಷೆ ಸುಜಾತಾ ನಾರಾಯಣ್, ತೋಟಗಾರಿಕೆ ಉಪನಿರ್ದೇಶಕ ಯೋಗೇಶ್ ಎಚ್.ಆರ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ಸೀಮಾ, ಸಹಾಯಕ ತೋಟಗಾರಿಕೆ ನಿರ್ದೇಶಕಿ ಪವಿತ್ರಾ ಜಿ.ಎನ್., ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಬೆಳೆದಿರುವ ಬೆಳೆಗಳ ಪ್ರದರ್ಶನ ಇಲಾಖೆಗಳ ಮಳಿಗೆ, ತಿಂಡಿ-ತಿನಿಸುಗಳು ಸ್ಟಾಲ್ ತೆಂಗಿನಲ್ಲಿ ಕೀಟ ಬಾಧೆ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.