
ಹಳೇಬೀಡು: ಜೈನರಗುತ್ತಿ ಕ್ಷೇತ್ರದಲ್ಲಿ ಭಾನುವಾರ ನಡೆದ ಮಸ್ತಕಾಭಿಷೇಕದಿಂದ ಗಂಧ, ಚಂದನದ ಕಂಪು ಪಸರಿಸಿತ್ತು.
ವಾರ್ಷಿಕ ಪೂಜೆ ಹಾಗೂ ತೀರ್ಥೋದ್ಧಾರಕ ವೀರಸಾಗರ ಮುನಿ ಮಹಾರಾಜರ 16 ನೇ ವರ್ಷದ ದೀಕ್ಷಾ ದಿನದ ಅಂಗವಾಗಿ 24 ತೀರ್ಥಂಕರರು ಹಾಗೂ ಗರ್ಭಗುಡಿಯ ಪಾರ್ಶ್ವನಾಥ ತೀರ್ಥಂಕರ ಮೂರ್ತಿಗೆ ಶ್ರದ್ಧಾಭಕ್ತಿಯಿಂದ ಮಸ್ತಕಾಭಿಷೇಕ ನೆರವೇರಿತು.
ಜಿನ ಮಂದಿರದಲ್ಲಿ ನಸುಕಿನಿಂದಲೇ ಗಂಟೆ ಹಾಗೂ ಜಾಗಟೆಗಳ ಮೊಳಗುವಿಕೆಯೊಂದಿಗೆ ಮಂತ್ರಘೋಷ ಮೊಳಗುತ್ತಿತ್ತು. ವಿಪ್ರಧಾನ ಅರ್ಚಕ ಶೀತಲ ಪಂಡಿತ್ ಪೂಜಾ ವಿಧಾನ ನೆರವೇರಿಸಿದರು. ವಿವಿಧ ಪೂಜೆಗಳ ನಂತರ 24 ತೀರ್ಥಂಕರರ ಮೂರ್ತಿ, ಪಾರ್ಶ್ವನಾಥರ ಮೂರ್ತಿಗೆ ವಿವಿಧ ದ್ರವ್ಯಗಳಿಂದ ಮಸ್ತಕಾಭಿಷೇಕ ನಡೆಯಿತು. ಶ್ರೀಗಂಧ, ಹಾಲು, ಕಷಾಯ, ಅಶ್ವಗಂಧ, ಎಳನೀರು ಹಾಗೂ ಪುಷ್ಪಗಳಿಂದ ಅಭಿಷೇಕ ನಡೆಯಿತು. ಮಹಿಳೆಯರು ಜಿನ ಗಾಯನ್ಒಂದಿಗೆ ಭಕ್ತಿ ಭಾವದಿಂದ ಮಸ್ತಕಾಭಿಷೇಕ ವೀಕ್ಷಿಸಿದರು. ಭಕ್ತರು ಮಹಾ ದೃಶ್ಯವನ್ನು ಕಣ್ತುಂಬಿಕೊಂಡರು.
ಜೈನರಗುತ್ತಿ ಟ್ರಸ್ಟ್ ಕಾರ್ಯದರ್ಶಿ ಹೊಸದುರ್ಗ ಬ್ರಹ್ಮಪಾಲ ಜೈನ್ ಮಾತನಾಡಿ, ತೀರ್ಥೋದ್ದಾರಕ ವೀರಸಾಗರ ಮುನಿ ಮಹಾರಾಜರು ಜೈನ ಸಮಾಜವನ್ನು ಒಗ್ಗೂಡಿಸಿ ಜೈನರಗುತ್ತಿ ಕ್ಷೇತ್ರದ ಅಭಿವೃದ್ಧಿ ಮಾಡಿದವರು. ಜೈನ ಸಮಾಜದವರಲ್ಲಿ ಕ್ಷೇತ್ರದ ಮಹತ್ವದ ಅರಿವು ಮೂಡಿಸಿದ್ದಾರೆ ಎಂದರು.
ಟ್ರಸ್ಟ್ ಪದಾಧಿಕಾರಿಗಳಾದ ಹೊಂಗೇರಿ ದೇವೇಂದ್ರ, ಧವನ್ ಜೈನ್, ಶಶಿಕುಮಾರ್ ,ಶ್ರಾವಕರಾದ ಜಿನಚಂದ್ರ, ಹಾಸನದ ರತ್ನರಾಜು, ಆದಿರಾಜ್, ಬ್ರಹ್ಮರಾಜು, ಕೀರ್ತಿ ಕುಮಾರ್, ರೇಖಾ ಧವನ್, ಸ್ವಾತಿ ಪ್ರಶಾಂತ್, ರೂಪಾ ಅನಂತರಾಜು, ಇಚ್ಚಾ ಜೈನ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.