
ಹಾಸನ: ನಗರದ ಎಟಿಎಂಗಳಿಗೆ ನಗದು ಹಾಕದೇ ₹3,40,28,200 ದುರುಪಯೋಗ ಮಾಡಿರುವ ಆರೋಪದಡಿ ಸಿಎಂಎಸ್ ಕಂಪನಿಯ ಇಬ್ಬರು ಸಿಬ್ಬಂದಿಗಳ ವಿರುದ್ಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ಬೂವನಹಳ್ಳಿ ಗ್ರಾಮದ ನಂದೀಶ್ ಬಿ.ಎಲ್. ಹಾಗೂ ದಾಸರಕೊಪ್ಪಲಿನ ಮಧುಕುಮಾರ್ ಎಂ.ಪಿ., ಎಟಿಎಂ ಹಣ ನಿರ್ವಹಣೆಯ ಜವಾಬ್ದಾರಿಯಲ್ಲಿದ್ದರು. 15 ಎಟಿಎಂಗಳಿಗೆ ಹಣ ಹಾಕದೇ ದುರುಪಯೋಗ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಸಿಎಂಎಸ್ ಕಂಪನಿಯ ಬ್ರಾಂಚ್ ಮ್ಯಾನೇಜರ್ ರಾಜು ನೀಡಿದ ದೂರಿನ ಆಧಾರದಲ್ಲಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ನಗರದ ಗೌರಿಕೊಪ್ಪಲಿನಲ್ಲಿ ಕ್ಯಾಶ್ ಮ್ಯಾನೇಜ್ಮೆಂಟ್ ಸರ್ವಿಸಸ್ (ಸಿಎಂಎಸ್) ಕಚೇರಿಯಿದ್ದು, ನಿತ್ಯ ನಗರದ ಕೆನರಾ ಬ್ಯಾಂಕ್, ಎಸ್ಬಿಐ, ಬ್ಯಾಂಕ್ ಆಫ್ ಬರೋಡ, ಐಡಿಬಿಐ, ಕರ್ಣಾಟಕ ಬ್ಯಾಂಕ್, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಸೇರಿ ಒಟ್ಟು 15 ಬ್ಯಾಂಕ್ಗಳ 28 ಎಟಿಎಂಗಳಿಗೆ ಹಣ ಹಾಕಲಾಗುತ್ತಿತ್ತು. ಸರಿಯಾಗಿ ಹಣ ಹಾಕಿದ್ದಾರೋ ಇಲ್ಲವೋ ಎಂಬ ಬಗ್ಗೆ ತಿಂಗಳಿಗೆ ಎರಡು ಬಾರಿ ಆಡಿಟ್ ಮಾಡಲಾಗುತ್ತದೆ. ಫೆ.6 ರಂದು ಆಡಿಟ್ ಮಾಡಿದಾಗ ಎಲ್ಲ ಎಟಿಎಂಗಳಿಗೆ ಸರಿಯಾಗಿ ಹಣವನ್ನು ಹಾಕಲಾಗಿತ್ತು.
ಫೆ.18 ರಂದು ಮತ್ತೆ ಆಡಿಟ್ ಮಾಡಿದಾಗ ಕೋಟ್ಯಂತರ ರೂಪಾಯಿ ವ್ಯತ್ಯಾಸ ಬಂದಿದೆ. ಬೆಂಗಳೂರಿನಿಂದ ಸಿಎಂಎಸ್ ಕಂಪನಿಯ ಮೇಲಧಿಕಾರಿಗಳು ನಗರಕ್ಕೆ ಬಂದಿದ್ದು, ಫೆ.19ರಂದು ರಾತ್ರಿವರೆಗೆ ಆಡಿಟ್ ಮಾಡಿದ್ದಾರೆ. ಒಟ್ಟು ₹3,40,28,200 ದುರುಪಯೋಗ ಆಗಿದೆ ಎಂಬುದು ಪತ್ತೆಯಾಗಿದೆ.