
ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಚಾಲಕರಾಗಿದ್ದ ಆರ್.ಡಿ. ವೀರಪ್ಪ ಅವರ ಕೊಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಸಿಐಟಿಯು, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಸೋಮವಾರ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್ ಮಾತನಾಡಿ, ಫೆ. 17ರಂದು ಆಲೂರು ತಾಲ್ಲೂಕಿನ ರಾಜನಹಳ್ಳಿಯಲ್ಲಿ 58 ವರ್ಷದ ಆರ್.ಡಿ. ವೀರಪ್ಪ ಅವರನ್ನು ಅವರ ಜಮೀನಿನಲ್ಲೇ ಕೊಲೆ ಮಾಡಿ, ಪೆಟ್ರೋಲ್ ಸುರಿದು ಸುಟ್ಟುಹಾಕಲಾಗಿದೆ. ಘಟನೆ ನಡೆದು 15 ದಿನಗಳಾದರೂ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿರುವುದು ಪೊಲೀಸ್ ಕಾರ್ಯವೈಖರಿಯ ಕುರಿತು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿದರು.
ಮೇಲ್ನೋಟಕ್ಕೆ ಈ ಕೊಲೆ ಆಸ್ತಿ ವಿವಾದದಿಂದ ನಡೆದಿರಬಹುದು ಎಂದು ಕಂಡರೂ, ಕೃತ್ಯದ ಕ್ರೌರ್ಯವನ್ನು ಗಮನಿಸಿದರೆ ಇದು ಪೂರ್ವಯೋಜಿತ ಸಂಚು ಎಂಬ ಶಂಕೆ ಇದೆ. ಮೇಲ್ಪಾತಿಗೆ ಸೇರಿದ, ಆರ್ಥಿಕ ಹಾಗೂ ರಾಜಕೀಯ ಪ್ರಭಾವ ಹೊಂದಿರುವ ಕಾಣದ ಕೈಗಳ ಪಾತ್ರವೂ ಇದರಲ್ಲಿ ಇರಬಹುದು ಆರೋಪಿಸಿದರು.
ಪ್ರಕರಣವನ್ನು ಎಲ್ಲ ಆಯಾಮಗಳಿಂದ ಸಮಗ್ರ ಹಾಗೂ ತ್ವರಿತಗತಿಯಲ್ಲಿ ತನಿಖೆ ನಡೆಸಬೇಕು. ಅಗತ್ಯವಿದ್ದಲ್ಲಿ ಉನ್ನತ ಮಟ್ಟದ ತನಿಖೆಗೆ ಶಿಫಾರಸು ಮಾಡಬೇಕು. ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವ ಮೂಲಕ ವೀರಪ್ಪ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ವೀರಪ್ಪ ಅವರು ನಮ್ಮ ಸಂಘಟನೆಯ ಸದಸ್ಯರಾಗಿದ್ದು, ಹೋರಾಟದ ವ್ಯಕ್ತಿಯಾಗಿದ್ದರು. ಅವರ ಕೊಲೆ ಕೇವಲ ಆಸ್ತಿ ವಿವಾದಕ್ಕೆ ಸೀಮಿತವಲ್ಲ. ಹಲವು ಕಾರಣಗಳಿರುವ ಸಾಧ್ಯತೆ ಇದೆ. ಆದರೆ ಪೊಲೀಸ್ ಇಲಾಖೆ ಇನ್ನೂ ಸ್ಪಷ್ಟ ಕಾರಣ ತಿಳಿಸಿಲ್ಲ. ಆರೋಪಿಗಳನ್ನೂ ಬಂಧಿಸಿಲ್ಲ ಎಂದು ದೂರಿದರು.
ಎಸ್ಪಿ ಹಾಗೂ ಎಎಸ್ಪಿ ಅವರನ್ನು ಭೇಟಿ ಮಾಡಿ ಆತಂಕ ವ್ಯಕ್ತಪಡಿಸಿದ್ದೇವೆ. ದೂರುದಾರರನ್ನು ಪದೇ ಪದೇ ಠಾಣೆಗೆ ಕರೆದು ತೊಂದರೆ ನೀಡುವುದರ ಹೊರತು, ತನಿಖೆಯಲ್ಲಿ ಪ್ರಗತಿ ಕಾಣಿಸುತ್ತಿಲ್ಲ. ಕಲ್ಲು ಗಣಿಗಾರಿಕೆ ಸೇರಿದಂತೆ ಇತರೆ ಕಾರಣಗಳ ಶಂಕೆಯನ್ನೂ ಪೊಲೀಸರಿಗೆ ತಿಳಿಸಿದ್ದೇವೆ ಎಂದು ಹೇಳಿದರು.
ಸರ್ಕಾರ ಮತ್ತು ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ನ್ಯಾಯ ಸಿಗುವವರೆಗೆ ತೀವ್ರ ಹಾಗೂ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ ಅವರು, ಈ ಕುರಿತು ಗೃಹ ಸಚಿವರು, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ನವೀನ್ ಕುಮಾರ್, ವಿಜಯ್ ಕುಮಾರ್, ಪೃಥ್ವಿ, ಅರವಿಂದ್, ಲೋಕೇಶ್, ಗೊರೂರು ಶಿವೇಶ್, ನಾರಾಣದಾಸ್, ಅಂಬುಗ ಮಲ್ಲೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.