ಹಾಸನ: ನಗರದ ಆರ್.ಸಿ. ರಸ್ತೆ ಗಂಧದ ಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಬೃಹತ್ ಆರೋಗ್ಯ ತಪಾಸಣೆ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ, ಶ್ರೀ ಧರ್ಮಸ್ಥಳ ಆಯುರ್ವೇದ ಆಸ್ಪತ್ರೆ, ಅಮ್ಮ ಕಣ್ಣಿನ ಆಸ್ಪತ್ರೆ, ಹಾಸನಾಂಬ ದಂತ ವೈದ್ಯಕೀಯ ಕಾಲೇಜು, ಥೈರೋಕೆರ್ ಹಾಸನ ಹಾಗೂ ಜೀವರಕ್ಷಾ ರಕ್ತ ನಿಧಿಗಳ ಆಶ್ರಯದಲ್ಲಿ ದಂತ ತಪಾಸಣೆ, ಥೈರಾಯ್ಡ್ ತಪಾಸಣೆ, ನೇತ್ರ ತಪಾಸಣೆ, ರಕ್ತದ ಗುಂಪು ಪತ್ತೆ ಹಾಗೂ ಔಷಧ ವಿತರಣೆ ನಡೆಸಲಾಯಿತು.
ಅಮ್ಮ ಕಣ್ಣಿನ ಆಸ್ಪತ್ರೆಯ ಸಂಸ್ಥಾಪಕ ಡಾ.ಸಂದೀಪ್ ಮಾತನಾಡಿ, ಕಣ್ಣು ಮಿದುಳಿನ ಒಂದು ಭಾಗ. ವಯೋಸಹಜವಾಗಿ ಪ್ರಾಣಿ, ಪಕ್ಷಿಗಳು ಸೇರಿದಂತೆ ಮನುಷ್ಯರಿಗೂ ಕಣ್ಣಿನ ಪೊರೆ ಬರುತ್ತದೆ. ವೈಜ್ಞಾನಿಕ ದೃಷ್ಟಿಕೋನದತ್ತ ಆಲೋಚಿಸಿ, ಮಾನವ ತನ್ನ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಸೇವಾ ಮನೋಭಾವ ಹೊಂದಬೇಕು ಎಂದರು.
ಜೀವ ರಕ್ಷಕ ರಕ್ತ ನಿಧಿ ಸಂಸ್ಥೆಯ ಮೋಹನ್ ಮಾತನಾಡಿ, ರಕ್ತದಾನ ಒಂದು ಸರಳ ಪ್ರಕ್ರಿಯೆ. ರಕ್ತದಾನ ಮಾಡುವುದರಿಂದ ರಕ್ತದೊತ್ತಡ ಹಾಗೂ ಶೇ80 ರಷ್ಟು ಹೃದಯಾಘಾತ ಕಡಿಮೆಯಾಗುತ್ತದೆ. 18 ವರ್ಷ ಮೇಲಿನ, 45 ಕೆ.ಜಿ.ಗಿಂತ ಹೆಚ್ಚು ತೂಕ ಹೊಂದಿರುವ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ.ಮಂಜಯ್ಯ ಮಾತನಾಡಿ, ಮಾನವ ದೇಹದಲ್ಲಿ ಹಲವು ಸಮಸ್ಯೆಗಳಿದ್ದರೂ, ಅವು ನಮ್ಮ ಅರಿವಿಗೆ ಬರುವುದಿಲ್ಲ. ಆರೋಗ್ಯದ ವಿಚಾರವಾಗಿ ಅಸಡ್ಡೆ ಬೇಡ. ವಿದ್ಯಾರ್ಥಿಗಳು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾಲೇಜಿನ ಸುಮಾರು 25ಕ್ಕೂ ಅಧಿಕ ಯುವತಿಯರು, ಅಧ್ಯಾಪಕರು ರಕ್ತದಾನ ಮಾಡಿದರು. 600ಕ್ಕೂ ಅಧಿಕ ವಿದ್ಯಾರ್ಥಿನಿಯರು ವಿವಿಧ ತಪಾಸಣೆ ಮಾಡಿಸಿಕೊಂಡರು.
ರೋಟರಿ ಅಂತರ ರಾಷ್ಟ್ರೀಯ ಜಿಲ್ಲೆ 3182 ವಲಯ 9ಎ ಅಸಿಸ್ಟೆಂಟ್ ಗವರ್ನರ್ ಸಂತೋಷ್, ರೋಟರಿ ವಲಯ ಸೇನಾನಿ ಡಾ.ಬಿ.ವಿಕ್ರಮ್, ಧರ್ಮಸ್ಥಳ ಆಯುರ್ವೇದ ಆಸ್ಪತ್ರೆ ವೈದ್ಯೆ ಪ್ರತಿಮಾ, ಥೈರೋ ಕೇರ್ ಸೆಂಟರ್ನ ರೋಹಿತ್, ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ಅಧ್ಯಕ್ಷ ಯು.ವಿ.ಸಚಿನ್, ಕಾರ್ಯದರ್ಶಿ ಪುನೀತ್, ಖಜಾಂಚಿ ರವಿ ಕುಮಾರ್ ಪಿ., ಸದಸ್ಯರಾದ ಯೋಗೇಶ್ ಎಸ್., ದಿಲೀಪ್ ಕುಮಾರ್ ಎಚ್.ಕೆ., ಆರ್.ಯೋಗೇಶ್, ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಡಾ.ಸಿ.ಎಲ್. ಶಿವಕುಮಾರ್, ಐ.ಕ್ಯೂ.ಎ.ಸಿ. ಸಂಚಾಲಕ ಮೋಹನ್ ಕುಮಾರ್, ಉಪನ್ಯಾಸಕ ನವೀನ್ ಕೆ.ಸಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.