ಹಾಸನ: ಹೃದಯಾಘಾತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮನೆಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಮಾಹಿತಿ ಸಂಗ್ರಹಿಸುವಂತೆ ಶಾಸಕ ಸ್ವರೂಪ್ ಪ್ರಕಾಶ್ ಸೂಚನೆ ನೀಡಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೃದ್ರೋಗ ಏರಿಕೆಯಾಗುತ್ತಿರುವುದರಿಂದ ಹೋಬಳಿ ಮಟ್ಟದಲ್ಲಿ ಆರೋಗ್ಯ ಶಿಬಿರ ಆಯೋಜಿಸಿ, ಎರಡು ಹೋಬಳಿಗೆ ಒಬ್ಬರಂತೆ ಆರೋಗ್ಯ ಅಧಿಕಾರಿಗಳನ್ನು ನೇಮಿಸಬೇಕು. ಆಶಾ ಕಾರ್ಯಕರ್ತೆಯರೊಂದಿಗೆ ಮನೆಮನೆಗೆ ತೆರಳಿ ಪ್ರತಿ ಕುಟುಂಬದಿಂದ ಮಾಹಿತಿ ಸಂಗ್ರಹಿಸಿ, ಅವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಸಲಹೆ ನೀಡಿದರು.
ಇದಕ್ಕೆ ದನಿಗೂಡಿಸಿದ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್, ಆರೋಗ್ಯ ಇಲಾಖೆಯ ಸಿಬ್ಬಂದಿ ಲಾರ್ವಾ ಪರೀಕ್ಷೆ ಮಾಡುತ್ತಾರೆ. ಈ ಸಂದರ್ಭದಲ್ಲಿಯೂ ಹೃದಯ ರಕ್ಷಣೆ ಕುರಿತು ಮಾಹಿತಿ ಒಳಗೊಂಡ ಕರಪತ್ರಗಳನ್ನು ವಿತರಿಸುವಂತೆ ಸಲಹೆ ನೀಡಿದರು.
ಖಾಸಗಿ ಆಸ್ಪತ್ರೆಯಲ್ಲಿ ಸ್ಟಂಟ್ ಅಳವಡಿಕೆಗೆ ಹೆಚ್ಚಿನ ಶುಲ್ಕ ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ವರೂಪ್ ಪ್ರಕಾಶ್, ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರ್ಕಾರದಿಂದ ಸ್ಟಂಟ್ ಅಳವಡಿಕೆಗೆ ₹60ಸಾವಿರ ನಿಗದಿ ಮಾಡಿದ್ದರೆ, ಖಾಸಗಿ ಆಸ್ಪತ್ರೆಗಳು ₹ 1 ಲಕ್ಷ ಹಣ ವಸೂಲಿ ಮಾಡುತ್ತಿದೆ ಎಂದು ಆರೋಗ್ಯ ಅಧಿಕಾರಿ ಸಭೆಯ ಗಮನಕ್ಕೆ ತಂದರು.
543 ಕುಡಿಯುವ ನೀರಿನ ಘಟಕವಿದ್ದು ಎಲ್ಲವೂ ಸುಸ್ಥಿತಿಯಲ್ಲಿವೆ. 2–3 ಘಟಕಗಳಲ್ಲಿ ನೂನ್ಯತೆ ಕಂಡುಬಂದಿದ್ದು, ಶೀಘ್ರದಲ್ಲಿಯೇ ಸರಿಪಡಿಸಲಾಗುವುದು ಎಂದರು.
ಜಿಲ್ಲೆಯಲ್ಲಿ 42 ಮಂದಿಯಲ್ಲಿ ಹಾಸನ ತಾಲ್ಲೂಕಿನ 19 ಮಂದಿ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಬಹುತೇಕ ಮಂದಿಗೆ ಬಿಪಿ, ಕಿಡ್ನಿ ವೈಫಲ್ಯ ಮಧುಮೇಹದಂತಹ ಕಾಯಿಲೆಗಳು ಇತ್ತು ಎಂಬುದು ಪರೀಕ್ಷೆ ವೇಳೆ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಸರ್ಕಾರದ ನಿರ್ದೇಶನದಂತೆ ಈಗಾಗಲೇ ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ಹೃದಯ ತಪಾಸಣೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಮೂವತ್ತು ವರ್ಷದ ಕೆಳಗೆ ಹಠಾತ್ ಸಾವು ಸಂಭವಿಸಿದರೆ ಅಧಿಸೂಚಿತ ಕಾಯಿಲೆ ಎಂದು ಪರಿಗಣಿಸಿ ಮರಣೋತ್ತರ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಹಶೀಲ್ದಾರ್ ಗೀತಾ, ಕೆಡಿಪಿ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.
ವಯೋವೃದ್ಧರು, ಮಕ್ಕಳಿಗೆ ನಾಯಿ ಕಡಿತ ಹೆಚ್ಚು: 58 ಪ್ರಕರಣ ಸರ್ಕಾರದಿಂದ ಲಸಿಕೆ ಪೂರೈಕೆ ಇಲ್ಲ; ಕ್ರಮಕ್ಕೆ ಮನವಿ 137 ಕ್ಷಯರೋಗ ಪೀಡಿತರಿಗೆ ಚಿಕಿತ್ಸೆ; 122 ಏಡ್ಸ್ ಬಾಧಿತರು
ಜೋಳ ಬಿತ್ತನೆ ಬೀಜ ಮಾರಾಟ ಸ್ಥಗಿತ
ಮೆಕ್ಕೆಜೋಳ ಬಿಳಿ ಸುಳಿ ರೋಗಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದ್ದು ವರದಿ ಬಂದಿಲ್ಲ. ಕೃಷಿ ಇಲಾಖೆಯಿಂದ ಮೆಕ್ಕೆಜೋಳ ಬಿತ್ತನೆ ಬೀಜ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಮನು ಮಾಹಿತಿ ನೀಡಿದರು. ಮೆಕ್ಕೆ ಜೋಳ ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸಲಾಗಿದ್ದು ಪ್ರತಿ ಎಕರೆಗೆ ₹ 475 ಕಂತು ಪಾವತಿಸಬೇಕಾಗಿದೆ. ಈಗಾಗಲೇ 6ಸಾವಿರ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ವಿಮೆ ಮಾಡಲು ಜುಲೈ 31 ಕಡೆಯ ದಿನವಾಗಿದೆ. ಇಳುವರಿ ಕಡಿಮೆಯಾದರೂ ವಿಮೆ ಮೂಲಕ ರೈತರಿಗೆ ಸಹಾಯವಾಗಲಿದೆ ಎಂದು ಮನು ಮಾಹಿತಿ ನೀಡಿದರು. ಈ ವಿಮೆ ಕುರಿತು ಹೆಚ್ಚಿನ ಪ್ರಚಾರ ಕೈಗೊಂಡು ರೈತರಿಗೆ ಜಾಗೃತಿ ಮೂಡಿಸುವಂತೆ ಶಾಸಕ ಸ್ವರೂಪ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಳೆ ಬೆಳೆಯಿಂದ ಹೆಚ್ಚಿನ ಲಾಭ
ತಾಳೆ ಬೆಳೆಯಲು ಇಲಾಖೆಯಿಂದ ಸಹಾಯಧನ ಒದಗಿಸಲಾಗುತ್ತಿದೆ. ಉಚಿತವಾಗಿ ಸಸಿಯನ್ನು ನೀಡುತ್ತಿದ್ದು ನಾಲ್ಕು ವರ್ಷ ಗೊಬ್ಬರಕ್ಕೂ ಸಹಾಯಧನ ಇದೆ. ಅಂತರ ಬೆಳೆಗೂ ಸಹಾಯಧನ ಒದಗಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು. ಪತಂಜಲಿ ಕಂಪನಿಯವರು ತಾಳೆಯನ್ನು ಖರೀದಿ ಮಾಡುತ್ತಾರೆ. ಸದ್ಯ ಪ್ರತಿ ಟನ್ ಗೆ 17500 ಇದ್ದು ಬೆಳೆ ಪ್ರತಿ ತಿಂಗಳು ಬರುವುದರಿಂದ ರೈತರಿಗೆ ಹೆಚ್ಚು ಲಾಭದಾಯಕ ಬೆಳೆಯಾಗಿದೆ ಎಂದು ವಿವರಿಸಿದರು. ಜೋಳ ಬಿತ್ತನೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದು ತಾಳೆ ಬೆಳೆಯಲು ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ರೈತರಿಗೆ ಮಾಹಿತಿ ಒದಗಿಸಿ ಎಂದು ಶಾಸಕ ಸ್ವರೂಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.