ADVERTISEMENT

ರಾಜ್ಯ ಕಾಂಗ್ರೆಸ್‌ ವಿಸರ್ಜಿಸುವುದು ಒಳ್ಳೆಯದು: ಶಾಸಕ ಎಚ್‌.ಡಿ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 8:56 IST
Last Updated 23 ಜನವರಿ 2023, 8:56 IST
ಶಾಸಕ ಎಚ್‌.ಡಿ. ರೇವಣ್ಣ
ಶಾಸಕ ಎಚ್‌.ಡಿ. ರೇವಣ್ಣ    

ಹಾಸನ: ಮಹಾತ್ಮ ಗಾಂಧೀಜಿಯವರ ಸಲಹೆಯಂತೆ ರಾಹುಲ್‌ ಗಾಂಧಿ, ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನು ವಿಸರ್ಜಿಸುವುದು ಒಳ್ಳೆಯದು. ಈಗಿರುವ ಕಾಂಗ್ರೆಸ್ ಆಗಿನದ್ದಲ್ಲ. ಇಲ್ಲಿರುವುದು ಹೊಂದಾಣಿಕೆಯ ಕಾಂಗ್ರೆಸ್‌. ಕೋಮುವಾದಿ ಪಕ್ಷಗಳ ಜೊತೆ ಕೈಜೋಡಿಸಿರುವ ಕಾಂಗ್ರೆಸ್‌ ಎಂದು ಶಾಸಕ ಎಚ್‌.ಡಿ. ರೇವಣ್ಣ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕಾಂಗ್ರೆಸ್‌ನ ಗೌರವ ಉಳಿಯಬೇಕಾದರೆ, ಕರ್ನಾಟಕದ ಕಾಂಗ್ರೆಸ್‌ ಅನ್ನು ವಿಸರ್ಜಿಸಿ, ಕೋಮುವಾದಿಗಳ ಜೊತೆಗೆ ವಿಲೀನ ಮಾಡುವುದು ಒಳ್ಳೆಯದು ಎಂದರು.

ಕೆ.ಎಚ್. ಮುನಿಯಪ್ಪ, ಡಾ.ಜಿ. ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಅವರಂತಹ ದಲಿತ ಮುಖಂಡರನ್ನು ಸೋಲಿಸಿದವರು ಯಾರು? ದೇವೇಗೌಡರು, ನಿಖಿಲ್‌ ಕುಮಾರಸ್ವಾಮಿ ಸೋಲಿಗೆ ಯಾರು ಕಾರಣ? ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಕಾರಣ ಯಾರು ಎಂದು ಪ್ರಶ್ನಿಸಿದ ಅವರು, ಇಂತಹ ದುಸ್ಥಿತಿಯಲ್ಲಿರುವ ರಾಜ್ಯದ ಕಾಂಗ್ರೆಸ್ ನಾಯಕರು, ಜೆಡಿಎಸ್‌ ಅನ್ನು ಬಿಜೆಪಿಯ ಬಿ ಟೀಂ ಎಂದು ಹೇಳಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ADVERTISEMENT

ವಿದ್ಯುತ್ ಸರಬರಾಜು ಕಂಪನಿಗಳು ಸಾಲದಲ್ಲಿವೆ. ಅದನ್ನು ತಿಳಿದುಕೊಳ್ಳದೇ 200 ಯುನಿಟ್‌ ಉಚಿತ ವಿದ್ಯುತ್‌ ಕೊಡುವುದಾಗಿ ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ ಎಂದ ಅವರು, ಕರ್ನಾಟಕದಲ್ಲಿ ಅಲ್ಪಸಂಖ್ಯಾತರಿಗೆ ಶೇ 4 ರಷ್ಟು ಮೀಸಲಾತಿ ನೀಡಲು ದೇವೇಗೌಡರು ಬರಬೇಕಾಯಿತು. ಕಾಂಗ್ರೆಸ್‌ ಆಡಳಿತದ ಯಾವ ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದ್ದಾರೆ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.