ಹಾಸನ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದು, ಕೃಷಿ ಚಟುವಟಿಕೆಗಳು ಆರಂಭವಾಗುತ್ತಿವೆ. ಜನವರಿಯಿಂದ ಇಲ್ಲಿಯವರೆಗೆ 7.6 ಸೆಂ.ಮೀ. ವಾಡಿಕೆ ಮಳೆ ಇದ್ದು, ಈಗಾಗಲೇ 12.1 ಸೆಂ.ಮೀ. ಮಳೆಯಾಗಿದೆ. ಎಲ್ಲ ತಾಲ್ಲೂಕುಗಳಲ್ಲಿಯೂ ವಾಡಿಕೆಯಂತೆ ಮಳೆ ಸುರಿದಿದೆ.
ಜಮೀನುಗಳಲ್ಲಿ ಕೃಷಿಕರು ಈಗಾಗಲೇ ಹೊಲಗಳನ್ನು ಹಸನು ಮಾಡಿದ್ದು, ಉಳುಮೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಬಿತ್ತನೆ ಕಾರ್ಯ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯಿಂದ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಲಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಅಲಸಂದೆ, ಹೈಬ್ರಿಡ್ ಜೋಳ, ಸೂರ್ಯಕಾಂತಿ, ತಂಬಾಕು, ಭತ್ತ, ರಾಗಿ ಮುಸುಕಿನ ಜೋಳದ ಬೆಳೆಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಪ್ರಸ್ತುತ 1,920 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದ್ದು ಭೂಮಿ ಸಿದ್ಧತೆ ಮತ್ತು ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ.
‘ಜಿಲ್ಲೆಯ ಬೆಳೆ ಪದ್ಧತಿ ಆಧರಿಸಿ ಮುಂಗಾರು ಹಂಗಾಮಿಗೆ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ರಸಗೊಬ್ಬರಗಳನ್ನು ಪರವಾನಗಿ ಹೊಂದಿದ ಕೃಷಿ ಪತ್ತಿನ ಸಹಕಾರ ಸಂಘಗಳು, ಖಾಸಗಿ ಮಾರಾಟಗಾರರಿಂದ ಖರೀದಿಸಬಹುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್ಕುಮಾರ್ ತಿಳಿಸಿದ್ದಾರೆ.
‘ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಅಲಸಂದೆ, ಹೈಬ್ರಿಡ್ ಜೋಳ, ಸೂರ್ಯಕಾಂತಿ, ಮುಸುಕಿನ ಜೋಳ, ಭತ್ತ, ರಾಗಿ, ಇತ್ಯಾದಿ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿದೆ’ ಎಂದರು.
‘ದ್ವಿದಳ ಧಾನ್ಯ ಬೆಳೆಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಕೆ.ಜಿ.ಗೆ. ₹25 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ₹37.50 ಸಹಾಯಧನವಿದೆ. ಮುಸುಕಿನ ಜೋಳ ಬಿತ್ತನೆ ಬೀಜಕ್ಕೆ ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಕೆ.ಜಿ.ಗೆ. ₹20, ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ₹30 ಸಹಾಯಧನ ಒದಗಿಸಲಾಗುತ್ತಿದೆ. ರೈತರು ಬಿತ್ತನೆ ಬೀಜ ಖರೀದಿಸುವಾಗ ತಪ್ಪದೇ ಅಧಿಕೃತ ರಸೀದಿ ಪಡೆಯಬೇಕು. ರಸೀದಿಯಲ್ಲಿ ಲಾಟ್ ನಂಬರ್ ಮತ್ತು ಮಾರಾಟ ಬೆಲೆ ವಿವರಗಳನ್ನು ನಮೂದಿಸಿರುವ ಕುರಿತು ಖಾತರಿಪಡಿಸಿಕೊಳ್ಳಬೇಕು. ಇಲಾಖೆಯಿಂದ ಮಾರಾಟ ಪರವಾನಗಿ ಹೊಂದಿರುವ ಅಧಿಕೃತ ಬಿತ್ತನೆ ಬೀಜ ಮಾರಾಟಗಾರರಿಂದ ಬೀಜ ಖರೀದಿಸಬೇಕು. ಬೀಜಗಳ ಪ್ಯಾಕಿಂಗ್ನಲ್ಲಿ ವ್ಯಾಲಿಡಿಟಿ ಅವಧಿಯನ್ನು ಗಮನಿಸಬೇಕು. ಯಾವುದೇ ಮಾರಾಟಗಾರರಿಂದ ಪ್ಯಾಕ್ ರಹಿತ ಬಿತ್ತನೆ ಬೀಜಗಳನ್ನು ಖರೀದಿ ಮಾಡಬಾರದು’ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬೇಡಿಕೆ ಅನುಸಾರ ಲಘು ಪೋಷಕಾಂಶಗಳಾದ ಝಿಂಕ್ ಸಲ್ಫೇಟ್, ಬೋರಾಕ್ಸ್, ಸಾವಯವ ಗೊಬ್ಬರಗಳಾದ ಎನ್.ಪಿ.ಕೆ. ಕನ್ಸೇರ್ಷಿಯಾ, ಪಿ.ಎಸ್.ಬಿ., ಸಸ್ಯ ಸಂರಕ್ಷಣಾ ಔಷಧಿಗಳಾದ ಎಮೊಮೆಕ್ಟಿನ್ ಬೆನ್ಜೋಯೇಟ್, ಕ್ಲೋರೋಪೈರಿಪಾಸ್, ಕ್ವಿನಾಲಾಪಾಸ್, ಟ್ರೈಕೋಡರ್ಮ, ಬೇವಿನ ಎಣ್ಣೆ ಇತ್ಯಾದಿಗಳನ್ನು ದಾಸ್ತಾನು ಮಾಡಲಾಗಿದೆ. ಇವುಗಳನ್ನು, ಪರಿಕರಗಳನ್ನು ಸಹಾಯಧನದಲ್ಲಿ ರೈತರಿಗೆ ವಿತರಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಅಗತ್ಯ ರಸಗೊಬ್ಬರ ಲಘು ಪೋಷಕಾಂಶ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದ್ದು ಕೊರತೆ ಇಲ್ಲ. ಬೇಡಿಕೆಗೆ ತಕ್ಕಂತೆ ರಸಗೊಬ್ಬರ ನಿರಂತರವಾಗಿ ಪೂರೈಕೆಯಾಗುತ್ತಿದೆ.-ರಮೇಶ್ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.