
ಸಕಲೇಶಪುರ: ‘ಪಟ್ಟಣದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದಿಂದ ನಾಡಪ್ರಭು ಕೆಂಪೇಗೌಡ ಪ್ರತಿಮೆ ಪ್ರತಿಷ್ಠಾಪನೆ ಜೊತೆಗೆ, ಈ ಸ್ಥಳ ಪ್ರವಾಸಿಗರನ್ನು ಆಕರ್ಷಿಸುವಷ್ಟು ಸುಂದರವಾಗಿ ನಿರ್ಮಾಣ ಮಾಡಿದ್ದಾರೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮಿ ಹೇಳಿದರು.
ಪ್ರತಿಮೆ ನಿರ್ಮಾಣದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಕೆಂಪೇಗೌಡ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದಿಲ್ಲವೋ ಅಂತಹ ವ್ಯಕ್ತಿಗಳು ಸಮಾಜದಲ್ಲಿ ಮುಂದೆ ಬರುವುದಕ್ಕೆ ಸಾಧ್ಯವಾಗುವುದಿಲ್ಲ ಎಂದರು.
ಸಕಲೇಶ್ವರಸ್ವಾಮಿ ರಥೋತ್ಸವ, ಹೇಮಾವತಿ ನದಿಯಲ್ಲಿ ಗಂಗಾರತಿ, ಕೆಂಪೇಗೌಡರ ಪ್ರತಿಮೆ ವಾರ್ಷಿಕೋತ್ಸವ ಜಾತ್ರಾ ವಸ್ತು ಪ್ರದರ್ಶನ ಇವೆಲ್ಲವೂ ಹುಣ್ಣಿಮೆಯ ದಿನ ಈ ಪಟ್ಟಣದಲ್ಲಿ ನಡೆಯುತ್ತಿರುವುದು ಊರಿನ ಅಭಿವೃದ್ಧಿಯ ಮುನಸ್ಸೂಚನೆಯಾಗಿದೆ ಎಂದರು.
ಕೆಂಪೇಗೌಡರು ಬೆಂಗಳೂರು ಕಟ್ಟಿದಂತೆ ಸಕಲೇಶಪುರವನ್ನೂ 50 ವರ್ಷಗಳಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಎಲ್ಲರೂ ಸಹಕಾರ ನೀಡಬೇಕು. ಹೂವು, ತರಕಾರಿ, ಹಣ್ಣು, ಮೀನು, ಮಾಂಸ, ಪ್ರತಿಯೊಂದಕ್ಕೂ ಸ್ಥಳ ಗುರುತಿಸಿ, ಮಾರುಕಟ್ಟೆ ನಿರ್ಮಾಣ ಆಗಬೇಕು. ಒಕ್ಕಲಿಗರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಂ. ವಿಶ್ವನಾಥ್ ಹೇಳಿದರು.
ತಹಶೀಲ್ದಾರ್ ಕೆ.ಎಸ್. ಸುಪ್ರೀತಾ, ಡಿವೈಎಸ್ಪಿ ಮಹಂತೇಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ, ತಾಲ್ಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿಗಳಾದ ಜೈ ಮಾರುತಿ ದೇವರಾಜ್, ಮರಗತ್ತೂರು ಉಮೇಶ್ , ಎಚ್.ಎಚ್. ಉದಯ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.