ADVERTISEMENT

ಕುಟುಂಬ ರಾಜಕಾರಣಕ್ಕೆ ಬೆಂಬಲ ಬೇಡ: ಎ.ಮಂಜು ಮನವಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 17:30 IST
Last Updated 2 ಏಪ್ರಿಲ್ 2019, 17:30 IST
ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಮಂಗಳವಾರ ಮತಯಾಚಿಸಿದರು
ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಮಂಗಳವಾರ ಮತಯಾಚಿಸಿದರು   

ಚನ್ನರಾಯಪಟ್ಟಣ: ‘ಜಿಲ್ಲೆಯ ಮತದಾರರು ಕುಟುಂಬ ರಾಜಕಾರಣ ವನ್ನು ಬೆಂಬಲಿಸಬಾರದು, ಪೋಷಿಸಬಾರದು’ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಮನವಿ ಮಾಡಿದರು.

ಬಾಗೂರು ಹೋಬಳಿ ಕೇಂದ್ರದಲ್ಲಿ ಮಂಗಳವಾರ ಮತಯಾಚಿಸಿದ ಬಳಿಕ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರಲ್ಲಿ ಯಾರನ್ನಾದರರೂ ಕಣಕ್ಕಿಸಬಹುದಿತ್ತು. ಆದರೆ, ವಂಶಪಾರಂಪರ್ಯ ರಾಜಕಾರಣ ಮಾಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ನಾನು ಕಣಕ್ಕಿಳಿಯಬೇಕಾಯಿತು. ದೇಶದ ಭದ್ರತೆ ದೃಷ್ಟಿಯಿಂದ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು. ಅವರ ಕೈ ಬಲಪಡಿಸಬೇಕು’ ಎಂದರು.

ADVERTISEMENT

ಜೆಡಿಎಸ್ ಅಧಿಕಾರಾವಧಿಯಲ್ಲಿ ಬಾಗೂರು ಹೋಬಳಿಯಲ್ಲಿ ಹಾಗೂ ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನವಾಗಿಲ್ಲ. ಆದರೆ, ನೀರಾವರಿ ಯೋಜನೆ ಆನುಷ್ಠಾನ ಮಾಡಲಾಯಿತು ಎಂದು ಸ್ಥಳೀಯ ಜೆಡಿಎಸ್ ಶಾಸಕರು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ದೂರಿದರು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮುಖಂಡರಾದ ವಿ.ಶ್ರೀನಿವಾಸ ಪ್ರಸಾದ್, ಬಸವರಾಜ ಬೊಮ್ಮಾಯಿ ಸೇರಿ ಅನೇಕ ನಾಯಕರು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಪ್ರಧಾನಿ ಭಾಗವಹಿಸುವ ದಿನಾಂಕ ಸದ್ಯದಲ್ಲಿ ನಿಗದಿಯಾಗಲಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾರು ಸೋಲಿಸಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದರು.

ಮುಖಂಡರಾದ ಶಿವನಂಜೇಗೌಡ, ಪಟೇಲ್ ಮಂಜುನಾಥ್, ನಾಗರಾಜೇ ಗೌಡ, ನಂಜೇಗೌಡ, ರಂಗೇಗೌಡ, ನಂಜುಂಡ ಮೈಮ್, ಸತೀಶ್, ಜಿ.ವಿ. ವಿಜಯಕುಮಾರ್ ಇದ್ದರು.

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾದರೆ ದೇಶದಲ್ಲಿ ಹಿಂದೂ- ಮುಸ್ಲಿಮರ ನಡುವೆ ಸಂಘರ್ಷ ಉಂಟಾಗುತ್ತದೆ ಎಂಬ ಲೋಕೋಪಯೋಗಿ ಸಚಿವರ ಹೇಳಿಕೆ ಖಂಡನಾರ್ಹ. ಚುನಾವಣೆ ಸಂದರ್ಭದಲ್ಲಿ ಮತ ಗಳಿಕೆಗಾಗಿ ಇಲ್ಲಸಲ್ಲದ ಹೇಳಿಕೆ ನೀಡಬಾರದು. ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಕೋಮುಗಲಭೆ ನಡೆದಿಲ್ಲ. ಸಚಿವ ರಾದವರು ಜವಾಬ್ದಾರಿ ಯುತವಾಗಿ ಮಾತನಾಡಬೇಕು. ಜಿಲ್ಲೆಯಲ್ಲಿ ರೇವಣ್ಣ ಅವರಿಂದ ಹಿಂದುಳಿದ ವರ್ಗದವರ ಶೋಷಣೆಯಾಗುತ್ತಿದೆ ಎಂದು ಎ.ಮಂಜು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.